ಬೆಂಗಳೂರು,ಆ.11-ನಗರದ ಕಂಠೀರವ ಸ್ಟುಡಿಯೋ ಮುಂಭಾಗ ಅಂಡರ್ಪಾಸ್ ನಿರ್ಮಾಣಕ್ಕಾಗಿ ತೋಡಲಾಗಿದ್ದ ಮಣ್ಣು ಕಾರ್ಮಿಕರ ಮೇಲೆ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಅದರಡಿ ಸಿಲುಕಿ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮೃತಪಟ್ಟವರನ್ನು ಒರಿಸ್ಸಾದ ಸೋನಾರಾಮ್ (26) ಮತ್ತು ಪರಿಮಳ್ (31) ಎಂದು ಗುರುತಿಸಲಾಗಿದೆ.
ಎಫ್ಟಿಐ ಸರ್ಕಲ್ ಬಳಿ ಬಿಡಿಎ ವತಿಯಿಂದ ಅಂಡರ್ಪಾಸ್ ಕಾಮಗಾರಿ ನಡೆಯುತ್ತಿದ್ದ ವೇಳೆ ಆರ್ಸಿಸಿ ಹಾಕಲು ಗುಂಡಿಯಲ್ಲಿ ತುಂಬಿದ್ದ ನೀರು ಖಾಲಿ ಮಾಡಿದಾಗ ಈ ದುರಂತ ಸಂಭವಿಸಿದೆ.
ಸುಮಾರು 20 ಅಡಿ ಆಳದ ವರೆಗೆ ಮಣ್ಣು ತೋಡಲಾಗಿತ್ತು. ಎಂದಿನಂತೆ ಆರೇಳು ಮಂದಿ ಕಾರ್ಮಿಕರು ಇಂದು ಕಾಮಗಾರಿಯಲ್ಲಿ ತೊಡಗಿದ್ದರು.
ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಮೇಲಿನಿಂದ ಏಕಾಏಕಿ ಮಣ್ಣು ಕುಸಿದು ಕಾರ್ಮಿಕರ ಮೇಲೆಯೇ ಬಿದ್ದ ಪರಿಣಾಮ ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡು ನರಳಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ನಂದಿನಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಆದರೆ ದುರಾದೃಷ್ಟವಶಾತ್ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಉಸಿರಾಡಲಾಗದೇ ಮೃತಪಟ್ಟಿದ್ದಾರೆ.ಮಣ್ಣಿನಡಿಯಲ್ಲಿ ಇನ್ನೂ ಯಾರಾದರೂ ಸಿಲುಕಿದ್ದಾರೆ ಎಂಬ ಶಂಕೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
