ಮಂಡ್ಯ, ಆ.28- ಶ್ರೀರಂಗಪಟ್ಟಣದ ದಿವಾನ್ ಪೂರ್ಣಯ್ಯ ಬೀದಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ವಾಸಿಸುತ್ತಿದ್ದ ಭಿಕ್ಷುಕಿ ಸಾವಿತ್ರಿ ಅವರ ಮನೆಯಲ್ಲಿ ಮೂಟೆಗಟ್ಟಲೆ ಚಿಲ್ಲರೆ ನಾಣ್ಯಗಳು ಹಾಗೂ ನೋಟುಗಳು ಪತ್ತೆಯಾಗಿದ್ದು, ಸ್ಥಳದಲ್ಲೇ ಹಣ ಎಣಿಕೆ ಕಾರ್ಯ ನಡೆಯುತ್ತಿದೆ.
ಸುಮಾರು 40 ವರ್ಷಗಳ ಹಿಂದೆ ಸಾವಿತ್ರಿ ಅವರ ತಾಯಿ ಪಾರ್ವತಮ್ಮ ಅವರು ಶ್ರೀಮಂತ ಕುಟುಂಬದ ವ್ಯಕ್ತಿಯನ್ನು ವಿವಾಹವಾಗಿ ಶ್ರೀರಂಗಪಟ್ಟಣಕ್ಕೆ ಬಂದಿದ್ದರು ಎನ್ನಲಾಗಿದೆ. ಕಾರಣಾಂತರಗಳಿಂದ ಕುಟುಂಬದಿಂದ ದೂರವಾದ ತಾಯಿ-ಮಗಳು ಕಳೆದ 15 ವರ್ಷಗಳಿಂದ ಇದೇ ಪ್ರದೇಶದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಕೆಲ ತಿಂಗಳ ಹಿಂದೆ ಪಾರ್ವತಮ್ಮ ಮೃತಪಟ್ಟಿದ್ದು, ಸಾವಿತ್ರಿ ಅನಾರೋಗ್ಯದಿಂದ ಬಳಲುತ್ತಿದ್ದರು.
ಸಾವಿತ್ರಿ ಅವರು ಹಲವು ದಿನಗಳಿಂದ ಮನೆಯಿಂದ ಹೊರಬಾರದಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಮನೆಗೆ ತೆರಳಿ ಸ್ವಚ್ಛತಾ ಕಾರ್ಯ ಆರಂಭಿಸಿದರು. ಹಳೆಯ ಬಟ್ಟೆ, ಸಾಮಾನುಗಳು ಹಾಗೂ ಕಸದ ನಡುವೆ ಸ್ಟೀಲ್ ಡಬ್ಬಗಳಲ್ಲಿ ಸಂಗ್ರಹಿಸಿಟ್ಟಿದ್ದ ನೋಟುಗಳು ಹಾಗೂ ಮೂಟೆಗಳಲ್ಲಿ ತುಂಬಿದ್ದ ಚಿಲ್ಲರೆ ನಾಣ್ಯಗಳು ಪತ್ತೆಯಾಗಿವೆ.
ಈ ಕುರಿತು ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಮಾತನಾಡಿ, ಇತ್ತೀಚೆಗಷ್ಟೇ ಮಂಡ್ಯದಲ್ಲಿಯೂ ಭಿಕ್ಷುಕಿಯೊಬ್ಬರ ಮನೆಯಲ್ಲಿ ಹಣ ಪತ್ತೆಯಾಗಿತ್ತು. ಸಾವಿತ್ರಿ ಅವರ ಮನೆಯಲ್ಲಿ ಪತ್ತೆಯಾಗಿರುವ ಹಣವನ್ನು ಅವರ ಹೆಸರಿನಲ್ಲೇ ಠೇವಣಿ ಇಡುವ ಕುರಿತು ಸ್ಥಳೀಯರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸ್ಥಳೀಯರು ಸಾವಿತ್ರಿ ಅವರನ್ನು ಸ್ವಚ್ಛಗೊಳಿಸಿ, ವೈದ್ಯಕೀಯ ತಪಾಸಣೆ ನಡೆಸಿಸುವುದರ ಜೊತೆಗೆ ಅವರ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕಾರ್ಯವನ್ನೂ ಕೈಗೊಂಡಿದ್ದಾರೆ.
