Tuesday, September 17, 2024
Homeರಾಜ್ಯಫೋನ್‌ ಕದ್ದಾಲಿಕೆ ಖಚಿತ ಮಾಹಿತಿಯಿದ್ದರೆ ದೂರು ನೀಡಿ : ಹೆಚ್ಡಿಕೆಗೆ ಡಿಕೆಶಿ ಚಾಲೆಂಜ್

ಫೋನ್‌ ಕದ್ದಾಲಿಕೆ ಖಚಿತ ಮಾಹಿತಿಯಿದ್ದರೆ ದೂರು ನೀಡಿ : ಹೆಚ್ಡಿಕೆಗೆ ಡಿಕೆಶಿ ಚಾಲೆಂಜ್

ಬೆಂಗಳೂರು, ಮೇ 22- ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಫೋನ್‌ ಕದ್ದಾಲಿಕೆಯ ಬಗ್ಗೆ ಖಚಿತ ಮಾಹಿತಿ ಇದ್ದರೆ, ಲಿಖಿತವಾಗಿ ದೂರು ನೀಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅವರ ಕಾಲದಲ್ಲಿ ಫೋನ್‌ ಕದ್ದಾಲಿಕೆ ಮಾಡಿದ್ದರು. ಈ ಅನುಭವವನ್ನೇ ಮುಂದಿಟ್ಟುಕೊಂಡು ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಫೋನ್‌ ಕದ್ದಾಲಿಕೆ ಮಾಡುತ್ತಿಲ್ಲ ಎಂದು ಗೃಹಸಚಿವರೇ ಸ್ಪಷ್ಟನೆ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಸುತ್ತಮುತ್ತಲ ಇರುವವರೇ ತಮಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರಬಹುದು. ಅವರಿಗೆ ಅಂತಹ ಮಾಹಿತಿ ಇರುವುದಾದರೆ ಅಫಿಡವಿಟ್‌ ಅನ್ನು ದಾಖಲಿಸಲಿ ಎಂದು ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದರು.

ಮಳೆಯಿಂದ ಹಾನಿಗೊಳಗಾದ ಕೆಲವು ಪ್ರದೇಶಗಳಿಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು. ಹೆಚ್ಚು ಮಳೆ ಬರಬೇಕು, ಸದ್ಯಕ್ಕೆ ಮಳೆ ಬಂದಷ್ಟೂ ನಮಗೆ ಒಳ್ಳೆಯದು. ತಮಿಳುನಾಡಿಗೆ ನೀರು ಹರಿಯಲಿ. ಭೂಮಿ ಹದವಾಗಲಿ. ಬೆಂಗಳೂರಿನಲ್ಲಿ ಮಾತ್ರ ಮಳೆ ಬೀಳುತ್ತಿದ್ದು, ಬೇರೆ ಕಡೆ ಕಡಿಮೆ ಇದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಯಾವ ರೀತಿ ನಡೆಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚಿಸಲು ಸಂಜೆ ಸಚಿವರ ಸಭೆ ಕರೆಯಲಾಗಿದೆ. ನೀತಿ ಸಂಹಿತೆ ಈಗಲೂ ಜಾರಿಯಲ್ಲಿರುವುದರಿಂದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗುವುದು ಎಂದರು.
ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಹಿನ್ನಡೆಯಾದರೆ ಸಂಬಂಧಪಟ್ಟ ಸಚಿವರ ತಲೆದಂಡ ಮಾಡುವ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.

RELATED ARTICLES

Latest News