Friday, September 20, 2024
Homeರಾಜಕೀಯ | Politicsಸಂಪುಟ ಪುನಾರಚನೆ ಬಗ್ಗೆ ಅನಗತ್ಯ ಗೊಂದಲ ಬೇಡ : ಎಂ.ಬಿ.ಪಾಟೀಲ್‌

ಸಂಪುಟ ಪುನಾರಚನೆ ಬಗ್ಗೆ ಅನಗತ್ಯ ಗೊಂದಲ ಬೇಡ : ಎಂ.ಬಿ.ಪಾಟೀಲ್‌

ಬೆಂಗಳೂರು,ಜು.31- ಸಚಿವ ಸಂಪುಟ ಚರ್ಚೆಯ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಅನಗತ್ಯವಾಗಿ ಗೊಂದಲಗಳನ್ನು ಮೂಡಿಸಲಾಗುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ವದಂತಿಗಳು ಆಧಾರ ರಹಿತ.ದೆಹಲಿಗೆ ಭೇಟಿ ನೀಡಿದ್ದ ಇಬ್ಬರು ನಾಯಕರು ಅಲ್ಲಿ ನಡೆಯುವ ಚರ್ಚೆ ಬಗ್ಗೆ ಮಾಹಿತಿ ನೀಡಿಲ್ಲ. ಎಲ್ಲವನ್ನೂ ಊಹೆ ಮಾಡಿಕೊಂಡೇ ಚರ್ಚೆ ನಡೆಸಲಾಗುತ್ತಿದೆ.

ಮುಡಾ, ಮಹರ್ಷಿ ವಾಲೀಕಿ ನಿಗಮದ ಹಗರಣದ ಚರ್ಚೆ ಎಂಬ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಆದರೆ ತಮಗೆ ಅಲ್ಲಿ ನಡೆದಿರುವ ಚರ್ಚೆ ಬಗ್ಗೆ ಮಾಹಿತಿ ಇಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆ, ಪುನರ್‌ ರಚನೆಯ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದು ಹೇಳಿದರು.

ಸಚಿವ ಜಮೀರ್‌ ಅಹಮದ್‌ ಖಾನ್‌ ಮುಂದೆ ತಾವು ಸಚಿವರಾಗಿ ಇರುವ ಅಥವಾ ಇಲ್ಲದಿರುವ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ್‌, ಯಾವುದೋ ಭಾವನಾತಕ ಸಂದರ್ಭದಲ್ಲಿ ಮಾತನಾಡಿದ್ದಾರೆ. ಅದೇ ರೀತಿ ಸಂಪುಟ ಸೇರುವವರಿಗೂ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಆದರೆ ಅಂತಿಮವಾಗಿ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ರಾಜ್ಯಸರ್ಕಾರದ ಯಾವುದೇ ನಿಗಮಗಳಿದ್ದರೂ ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಿಗೂ ವ್ಯವಸ್ಥಾಪಕ ನಿರ್ದೇಶಕರೇ ಹೊಣೆ. ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವರಾಗಿದ್ದ ಬಿ.ನಾಗೇಂದ್ರ ಅವರ ಪಾತ್ರ ಇಲ್ಲ. ಸಚಿವರು ಮೌಖಿಕವಾಗಿ ಹೇಳುವುದಲ್ಲ. ಲಿಖಿತವಾಗಿ ಹೇಳಿದರೂ ಕೂಡ ವ್ಯವಸ್ಥಾಪಕ ನಿರ್ದೇಶಕರು ಅದನ್ನು ಪಾಲಿಸಬೇಕಿಲ್ಲ. ನಿಗಮಗಳಿಗೆ ಪ್ರತ್ಯೇಕ ಆಡಳಿತ ಮಂಡಳಿ ಇರುತ್ತದೆ.

ಅಲ್ಲಿ ಚರ್ಚೆ ಮಾಡಿ ನಿರ್ಧರಿಸಿ ಅನಂತರ ಕ್ರಮ ಕೈಗೊಳ್ಳಬೇಕು ಎಂದರು. ನಮ ಸರ್ಕಾರದಲ್ಲಿ ವಾಲೀಕಿ ಅಭಿವೃದ್ಧಿ ನಿಗಮದ ಹಗರಣ ಮಾತ್ರ ನಡೆದಿದೆ. ಅದಕ್ಕೆ ವಿರುದ್ಧವಾಗಿ ಈಗಾಗಲೇ ತನಿಖೆ ಕೈಗೊಳ್ಳಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿದಿನ ಒಂದೊಂದು ಹಗರಣ ಕೇಳಿಬರುತ್ತಿತ್ತು, ಸಾವಿರಾರು ಅಕ್ರಮಗಳು ನಡೆದಿವೆ, ಸಾವಿರಾರು ಕೋಟಿ ರೂ.ಗಳ ದುರುಪಯೋಗವಾಗಿದೆ ಎಂದು ತಿರುಗೇಟು ನೀಡಿದರು.

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಇದರ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದರು.ಮುಡಾ ಹಾಗೂ ಇತರ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್‌‍ ಪಕ್ಷಗಳು ಪಾದಯಾತ್ರೆ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ನಾವು ಏನನ್ನೂ ಮಾಡಬೇಕಿಲ್ಲ. ಜನರಿಗೆ ಸತ್ಯ ಗೊತ್ತಿದೆ. ನಾವು ನಮ ಪಕ್ಷದ ಸಂಘಟನೆ ವಿಚಾರವಾಗಿ ಸಭೆ ಸಮಾರಂಭಗಳನ್ನು ನಡೆಸಲಿದ್ದೇವೆ ಎಂದರು.

ವನ್ಯಜೀವಿ ಮಂಡಳಿಗೆ ತಮ ಪುತ್ರನನ್ನು ನೇಮಿಸಿರುವುದು ತಪ್ಪಲ್ಲ. ಆತ ಯುನೆಸ್ಕೊದಲ್ಲಿ ವನ್ಯಜೀವಿ ವಿಚಾರದ ಕುರಿತು ಅಧ್ಯಯನ ನಡೆಸಿದ್ದಾನೆ ಮತ್ತು ಅತ್ಯಂತ ಕಿರಿಯ ವನ್ಯಜೀವಿ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದಾನೆ. ಟೈಮ್ಸೌ ಸೇರಿದಂತೆ ಹಲವಾರು ಪ್ರಶಸ್ತಿಗಳು ಆತನಿಗೆ ಬಂದಿವೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯವರು ಬೇಕಾದರೆ ಪಾದಯಾತ್ರೆ ಮಾಡಿಕೊಳ್ಳಲಿ. ತಮ ಸರಕಾರವಿದ್ದಾಗ ನಡೆದ ಶೇ.40ರಷ್ಟು ಕಮೀಷನ್‌, ಕೋವಿಡ್‌ ಕಾಲದ ಹಗರಣ, ಮಾರಿಷಸ್‌‍ನಲ್ಲಿ ಇಟ್ಟಿದ್ದಾರೆ ಎನ್ನಲಾಗುತ್ತಿರುವ ಹತ್ತು ಸಾವಿರ ಕೋಟಿ ರೂಪಾಯಿ ಹಗರಣಗಳ ಬಗ್ಗೆ ಅವರು ಜನತೆಗೆ ಸತ್ಯ ತಿಳಿಸಲಿ ಎಂದು ಸಚಿವರು ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ವಿಜಯೇಂದ್ರ, ಅಶ್ವತ್ಥನಾರಾಯಣ, ಅಶೋಕ, ರಮೇಶ್‌ ಜಾರಕಿಹೊಳಿ, ಯತ್ನಾಳ ಹೀಗೆ ಇಪ್ಪತ್ತು ಗುಂಪುಗಳಿವೆ. ಪಾದಯಾತ್ರೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌‍ ಮಧ್ಯೆಯೇ ಒಮತವಿಲ್ಲ. ಬಿಜೆಪಿಯಲ್ಲೂ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಬೇರೆ ತರಹ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ. ಈಗಾಗಲೇ ಅವರು ಇದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ ಎಂದು ಅವರು ಪ್ರತಿಪಾದಿಸಿದರು.ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆಯ ನೀತಿ ಮಾಡಿದ್ದೇ ಬಿಜೆಪಿಯವರು. ಸೈಟುಗಳನ್ನು ಹಂಚಿದ್ದೂ ಅವರೇ. ಈಗ ಜನರ ದಿಕ್ಕು ತಪ್ಪಿಸಲು ಪಾದಯಾತ್ರೆಯ ನಾಟಕ ಆಡಲು ಹೊರಟಿದ್ದಾರೆ ಎಂದು ಟೀಕಿಸಿದರು.

RELATED ARTICLES

Latest News