ವಯನಾಡ್(ಕೇರಳ),ಆ.4- ನೂರಾರು ಜನರ ಸಾವಿಗೆ ಕಾರಣವಾದ ಉತ್ತರ ಕೇರಳದ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ವರ್ಗೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಾನೂನು ಅಂಶಗಳನ್ನು ಪರಿಶೀಲಿಸಲಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಇಂದು ತಿಳಿಸಿದ್ದಾರೆ.
ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲಲಾಗಳಲ್ಲಿ ನೂರಾರು ಮನೆಗಳನ್ನು ಕೊಚ್ಚಿಕೊಂಚು ಹೋದ ಭೂಕುಸಿತದ ಮೌಲ್ಯಮಾಪನ ಮಾಡಿದ ಬಳಿಕ ಕೇಂದ್ರವು ಕಾನೂನು ಸಂಗತಿಗಳನ್ನು ಪರಿಶೀಲಿಸಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಗೋಪಿ ಹೇಳಿದರು.
ವಯನಾಡಿನಲ್ಲಿ ಭೂಕುಸಿತ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಿ ದುರಂತದ ಪರಿಣಾಮವನ್ನು ಅಧ್ಯಯನ ಮಾಡಬೇಕು ಎಂದು ನುಡಿದರು.
ವಿಕೋಪಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ತಮಗೆ ಕಂಡುಬಂದದ್ದನ್ನು ಮತ್ತು ಮನವರಿಕೆ ಆಗುವುದನ್ನು ಕೇಂದ್ರ ಸರ್ಕಾರದ ಮುಂದೆ ಪ್ರಸ್ತುತಪಡಿಸುವುದಾಗಿ ಅವರು ಪ್ರತಿಪಾದಿಸಿದರು.ರಾಜ್ಯಸರ್ಕಾರವು ಭೂಕುಸಿತಗಳ ಪರಿಣಾಮವನ್ನು ಅಂದಾಜಿಫಿ ಕೇಂದ್ರ ಸರ್ಕಾರದ ನೆರವಿಗೆ ಮನವಿ ಸಲ್ಲಿಸಬೇಕೆಂದು ಅವರು ಸೂಚಿಸಿದರು.