Friday, September 20, 2024
Homeರಾಜ್ಯಸ್ವಾತಂತ್ರ್ಯೋತ್ಸವ ದಿನಾಚರಣೆ ಬಂದೋಬಸ್ತ್‌ಗೆ 1583 ಅಧಿಕಾರಿ-ಸಿಬ್ಬಂದಿ ನಿಯೋಜನೆ

ಸ್ವಾತಂತ್ರ್ಯೋತ್ಸವ ದಿನಾಚರಣೆ ಬಂದೋಬಸ್ತ್‌ಗೆ 1583 ಅಧಿಕಾರಿ-ಸಿಬ್ಬಂದಿ ನಿಯೋಜನೆ

ಬೆಂಗಳೂರು, ಆ.13– ಫೀಲ್ಡ್ ಮಾರ್ಷಲ್‌ ಮಾಣಿಕ್‌ ಷಾ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳೂ ಸೇರಿದಂತೆ 1583 ಸಿಬ್ಬಂದಿಯನ್ನು ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಬಿ. ದಯಾನಂದ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಲ್ಲಾ ವಿಭಾಗಗಳಿಂದ 10 ಮಂದಿ ಡಿಸಿಪಿಗಳು, 17 ಎಸಿಪಿಗಳು, 42 ಇನ್ಸ್ ಸಪೆಕ್ಟರ್‌ಗಳು, 112 ಮಂದಿ ಪಿಎಸ್‌‍ಐಗಳು, 62 ಎಎಸ್‌‍ಐಗಳು, 511 ಮಂದಿ ಕಾನ್‌ಸ್ಟೇಬಲ್‌ಗಳು, 72 ಮಹಿಳಾ ಸಿಬ್ಬಂದಿಗಳೊಂದಿಗೆ 129 ಮಂದಿ ಸಾದ ಉಡುಪಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ 27 ಮಂದಿ ಕ್ಯಾಮೆರಾ ಸಿಬ್ಬಂದಿಗಳನ್ನು ಬಂದೋಬಸ್ತ್‌ ಕರ್ತವ್ಯಕ್ಕೆ ನೇಮಿಸಲಾಗಿದೆ ಎಂದರು.

ಸಂಚಾರ ನಿರ್ವಹಣೆಗಾಗಿ 3 ಮಂದಿ ಡಿಸಿಪಿ, 6 ಎಸಿಪಿ, 19 ಇನ್ಸ್ ಸಪೆಕ್ಟರ್‌, 32 ಸಬ್‌ಇನ್ಸ್ ಸಪೆಕ್ಟರ್‌, 111 ಮಂದಿ ಎಎಸ್‌‍ಐ, 430 ಕಾನ್‌ಸ್ಟೇಬಲ್‌ಗಳು ನಿಗಾ ವಹಿಸಲಿದ್ದಾರೆ.ಅಲ್ಲದೆ, ಮೈದಾನದ ಬಂದೋಬಸ್ತ್‌ ಕರ್ತವ್ಯಕ್ಕೆ 10 ಕೆಎಸ್‌‍ಆರ್‌ಪಿ ಮತ್ತು ಸಿಆರ್‌ ತುಕಡಿಗಳನ್ನು, ಅಗ್ನಿಶಾಮಕ ವಾಹನಗಳು, 2 ಅಂಬುಲೆನ್ಸ್ ಸ ವಾಹನಗಳು, 4 ಖಾಲಿ ವಾಹನಗಳು, ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ-ಸ್ಪಾಟ್‌, 1 ಆರ್‌ಐವಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಒಂದು ಗರುಡ ಫೋರ್ಸ್‌ ಕಾಯ್ದಿರಿಸಲಾಗಿದೆ.

ಮೈದಾನದ ಸುತ್ತ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾ ವಹಿಸಲು 100 ಸಿಸಿ ಟಿವಿ, ಕ್ಯಾಮೆರಾಗಳನ್ನು ಮತ್ತು 4 ಬ್ಯಾಗೆಜ್‌ ಸ್ಕ್ಯಾನರ್‌, 20 ಡಿಎಫ್‌ಎಂಡಿ ಮತ್ತು 40 ಹೆಚ್‌ಹೆಚ್‌ ಎಂಡಿಗಳನ್ನು ಅಳವಡಿಸಲಾಗಿರುತ್ತದೆ.ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವವರ ಭದ್ರತೆಯ ದೃಷ್ಟಿಯಿಂದ ಆಹ್ವಾನಿತರಿಗೆ ಪಾಸ್‌‍ಗಳನ್ನು ವಿತರಿಸಲಾಗಿದೆ.

ಗೇಟ್‌-2ರಲ್ಲಿ ಪಿಂಕ್‌ ಬಣ್ಣದ ವಿವಿಐಪಿ ಪಾಸ್‌‍ ಹೊಂದಿರುವವರಿಗೆ ಪ್ರವೇಶಿಸಿ, ಬ್ಲಾಕ್‌ 1 ಮತ್ತು 1ಎನಲ್ಲಿ ಆಸಿನರಾಗುವುದು. ಪಿಂಕ್‌ ಬಣ್ಣದ ವಿಐಪಿ ಪಾಸ್‌‍ ಹೊಂದಿರುವವರು ಗೇಟ್‌ ನಂ 2ರಲ್ಲೇ ಪ್ರವೇಶಿಸಿ ಬ್ಲಾಕ್‌ ನಂ 2 ಮತ್ತು 3ರಲ್ಲಿ ಅಸಿನರಾಗುವುದು.ಗೇಟ್‌ ನಂ 4ರಲ್ಲಿ ಬಿಳಿ ಬಣ್ಣದ ಪಾಸ್‌‍ ಹೊಂದಿರುವವರಿಗೆ ಪ್ರವೇಶವಿದ್ದು, ಅವರು ಬ್ಲಾಕ್‌ 4,5 ಮತ್ತು 6ರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ.

ಗೇಟ್‌ ನಂ 4ರಲ್ಲಿ ಮಾಧ್ಯಮದವರು ಪ್ರವೇಶಿಸಿ ಮೀಡಿಯಾ ಬಾಕ್ಸ್ಸಗೆ ತೆರೆಳುವುದು. ಗೇಟ್‌ ನಂ 5ರಲ್ಲಿ ಹಸಿರು ಬಣ್ಣದ ಪಾಸ್‌‍ ಹೊಂದಿರುವ ಸಾರ್ವಜನಿಕರಿಗೆ ಪ್ರವೇಶವಿದ್ದು, ಅವರು ಬ್ಲಾಕ್‌ ನಂ 7, 8,9ರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.ಕಾರ್ಯಕ್ರಮದ ಭದ್ರತಾ ದೃಷ್ಟಿಯಿಂದ ಗೇಟ್‌ಗಳ ಬಳಿ ತಪಾಸಣೆಗೆ ಒಳಪಟ್ಟು ಪೊಲೀಸರೊಂದಿಗೆ ಸಹಕರಿಸುವಂತೆ ಬಿ. ದಯಾನಂದ ಅವರು ಮನವಿ ಮಾಡಿದ್ದಾರೆ.

ಸೂಚನೆ:
ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 8.30ರ ಒಳಗೆ ತಮ ಆಸನಗಳಲ್ಲಿ ಆಸೀನರಾಗತಕ್ಕದ್ದು. ಯಾವುದೇ ಕಾರಣಕ್ಕೂ ಮೈದಾನದೊಳಗೆ ಪ್ರವೇಶಿಸತಕ್ಕದ್ದಲ್ಲ. ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು ಮಣಿಪಾಲ್ ಸೆಂಟರ್‌ ಕಡೆಯಿಂದ ಕಬ್ಬನ್‌ ರಸ್ತೆ ಮೂಲಕ ಗೇಟ್‌ ನಂ. 4ಕ್ಕೆ ಆಗಮಿಸಲು ಸೂಚಿಸಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ವ್ಯಕ್ತಿಯೊಬ್ಬರು ಅನಗತ್ಯ ಲಗೇಜು ಹಾಗೂ ಇತರೇ ವಸ್ತುಗಳನ್ನು ತರುವಂತಿಲ್ಲ. ಯಾವುದಾದರೂ ಅನುಮಾನಾಸ್ಪದ ವಸ್ತುಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಸಮವಸ್ತ್ರದಲ್ಲಿರುವ ಪೊಲೀಸ್‌‍ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

ನಿಷಿದ್ಧ ವಸ್ತುಗಳು:
ಮೈದಾನದೊಳಗೆ ಸಿಗರೇಟ್‌, ಬೆಂಕಿ ಪೆಟ್ಟಿಗೆ, ಹರಿತವಾದ ವಸ್ತು ಹಾಗೂ ಚಾಕು- ಚೂರಿಗಳು, ಕರಪತ್ರಗಳು, ಕಪ್ಪು ಕರವಸ್ತ್ರಗಳು, ಬಣ್ಣದ ದ್ರಾವಣಗಳು, ತಿಂಡಿ- ತಿನಿಸುಗಳು, ವಿಡಿಯೋ ಮತ್ತು ಸ್ಟಿಲ್‌ ಕ್ಯಾಮೆರಾಗಳು, ಮದ್ಯದ ಬಾಟಲ್‌ಗಳು, ಮಾದಕ ವಸ್ತುಗಳು, ನೀರಿನ ಬಾಟಲ್‌ಗಳು ಹಾಗೂ ಕ್ಯಾನ್‌ಗಳು, ಕೊಡೆ(ಛತ್ರಿ), ಶಸಾ್ತ್ರಸ್ತ್ರಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ತರುವಂತಿಲ್ಲ.

ವಾಹನಗಳ ನಿಲುಗಡೆ:
ಕಾರ್‌ ಪಾಸುಗಳನ್ನು ಹೊಂದಿರುವ ಎಲ್ಲಾ ಆಹ್ವಾನಿತರು ಪಾಸ್‌‍ಗಳಲ್ಲಿ ನಿಗದಿಪಡಿಸಿದ ಗೇಟ್‌ಗಳಲ್ಲಿ ಇಳಿದುಕೊಂಡು ನಿಗದಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತೆ ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ತುರ್ತು ಸೇವಾ ವಾಹನಗಳಾದ ಅಂಬುಲೆನ್ಸ್ , ಅಗ್ನಿಶಾಮಕದಳದ ವಾಹನಗಳು, ನೀರಿನ ಟ್ಯಾಂಕರ್‌, ಕೆಎಸ್‌‍ಆರ್‌ಪಿ, ಕ್ಯೂ.ಆರ್‌ಟಿ, ಬಿಬಿಎಂಪಿ ಹಾಗೂ ಪಿಡಬ್ಲ್ಯೂಡಿ ವಾಹನಗಳು ಪ್ರವೇಶ ದ್ವಾರ-2ರ ಮುಖಾಂತರ ಪರೇಡ್‌ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್‌ ವಾಲ್‌ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.ಕಾರ್ಯಕ್ರಮದಲ್ಲಿ ಬರುವ ಎಲ್ಲಾ ಮಾಧ್ಯಮದವರ ವಾಹನಗಳು ಪ್ರವೇಶ ದ್ವಾರ-4ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.

ವಾಹನ ನಿಲುಗಡೆ ನಿಷಿದ್ಧ ರಸ್ತೆಗಳು:
ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್‌‍ ನಿಲ್ದಾಣದವರೆಗೆ ಮತ್ತು ಕಬ್ಬನ್‌ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್‌. ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ ಹಾಗೂ ಎಂಜಿ ರಸ್ತೆ ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಸ ವೃತ್ತದವರೆಗೆ.

ಸಾರ್ವಜನಿಕರಲ್ಲಿ ಮನವಿ:
ಮಾಣಿಕ್‌ ಷಾ ಪೆರೇಡ್‌ ಮೈದಾನ ಮತ್ತು ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕೊರತೆ ಇರುವುದರಿಂದ ಹಾಗೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾರ್ವಜನಿಕರು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಸೇವೆಗಳನ್ನು ಬಳಸಲು ಕೋರಲಾಗಿದೆ.
ಯಾವುದೇ ಸಹಾಯಕ್ಕಾಗಿ ಪೊಲೀಸರು ಸದಾ ನಿಮೊಂದಿಗಿರಲಿದ್ದು, ದಯವಿಟ್ಟು ಸ್ಥಳದಲ್ಲಿರುವ ಪೊಲೀಸರನ್ನು ಸಂಪರ್ಕಿಸಿ ಅಥವಾ 112ಗೆ ಕರೆ ಮಾಡಲು ಸೂಚಿಸಲಾಗಿದೆ. ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯನ್ನು ಯಶಸ್ವಿಗೊಳಿಸಲು ತಮ ಸಹಕಾರ ಬಯಸುವುದಾಗಿ ನಗರ ಸಂಚಾರಿ ಪೊಲೀಸರು ಕೋರಿದ್ದಾರೆ.

RELATED ARTICLES

Latest News