Saturday, September 21, 2024
Homeರಾಜ್ಯಜೈಲು ಸುಧಾರಣೆಗೆ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ

ಜೈಲು ಸುಧಾರಣೆಗೆ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ

Formation of committee headed by IPS officers for Jail Reforms

ಬೆಂಗಳೂರು,ಆ.27- ನಟ ದರ್ಶನ್ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೇರಿ ದಂತೆ ಹಲವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಹಿನ್ನಲೆಯಲ್ಲಿ ಜೈಲಿನ ಸಮಗ್ರ ಸುಧಾರಣೆಗೆ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವುದಾಗಿ ಗೃಹಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡುಮೂರು ದಿನಗಳ ಒಳಗಾಗಿ ಈ ಕುರಿತು ಸಮಿತಿಯೊಂದನ್ನು ಪ್ರಕಟಿಸಲಾಗುವುದು. ಜೊತೆಗೆ ಈ ಹಿಂದೆ ಸಚಿವ ಎಚ್.ಕೆ.ಪಾಟೀಲ್ ಅವರ ಸಮಿತಿ ಜೈಲಿನ ಸುಧಾರಣೆಗೆ ನೀಡಿದ್ದ ವರದಿಯನ್ನು ಪರಿಗಣಿಸಲಾಗುವುದು.

ಈವರೆಗೂ ಅದು ತಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದರು. ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಹಾಗೂ ಇತರ ಕೈದಿಗಳನ್ನು ಒಂದು ಬ್ಯಾರೆಕ್ನಿಂದ ಮತ್ತೊಂದು ಬ್ಯಾರೆಕ್ಗೆ ಸುಲಭವಾಗಿ ತಿರುಗಾಡಲು ಅವಕಾಶ ಮಾಡಿಕೊಟ್ಟಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಇದು ಒಂದು ಜೈಲಿನ ವಿಚಾರವಲ್ಲ. ಬೆಳಗಾವಿ ಹಿಂಡಲಗ ಸೇರಿದಂತೆ ರಾಜ್ಯಾದ್ಯಂತ ಜೈಲುಗಳಲ್ಲಿ ಲೋಪಗಳು ಕಂಡುಬಂದಿವೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ, ದರ್ಶನ್ ಗುಂಪಿಗೆ ಸಹಾಯ ಮಾಡಿದವರ ವಿರುದ್ಧ ತನಿಖೆ ನಡೆಸಲಾಗುವುದು. ಈಗಾಗಲೇ 9 ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದರು.

ಜೈಲಿನ ಸುಧಾರಣೆಗೆ ರಾಷ್ಟ್ರ ಮಟ್ಟದಲ್ಲೂ ಮನಮೋಹನ್ ಸಿಂಗ್ ಕಾಲದಲ್ಲಿ ವರದಿಯೊಂದು ಮಂಡನೆಯಾಗಿರುವ ಬಗ್ಗೆ ಮಾಹಿತಿ ಇದೆ. ಅದನ್ನು ಪರಿಶೀಲಿಸಲಾಗುವುದು. ದರ್ಶನ್ ವಿಚಾರ ಒಂದೇ ಅಲ್ಲ ಒಟ್ಟಾರೆ ಜೈಲಿನ ವ್ಯವಸ್ಥೆಗಳನ್ನೇ ಪುನರ್ ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.

ಪರಪ್ಪನ ಅಗ್ರಹಾರ ಕಾರಾಗೃಹವನ್ನು ಮೂರು ವಿಭಾಗಗಳನ್ನಾಗಿ ಮಾಡಲು ಅವಕಾಶವಿಲ್ಲ. ಆಂತರಿಕವಾಗಿ ಸಣ್ಣಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಶಿಕ್ಷಾಧೀನ ಕೈದಿಗಳು, ವಿಚಾರಣಾಧೀನ ಕೈದಿಗಳು, ಮಹಿಳಾ ಕೈದಿಗಳು ಎಂದು ಪ್ರತ್ಯೇಕ ಮಾಡಬಹುದು. ಆದರೆ ಅದರ ಹೊರತಾಗಿ ಘಟಕಗಳವಾರು ವಿಭಜಿಸಲು ಸಾಧ್ಯವಿಲ್ಲ ಎಂದರು.

ಶಿವಮೊಗ್ಗ, ಬಳ್ಳಾರಿ, ಮಂಗಳೂರು ಸೇರಿದಂತೆ ಹಲವು ಜೈಲುಗಳ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ದರ್ಶನ್ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುವ ಅಗತ್ಯವಿಲ್ಲ. ಇದರಲ್ಲಿ ನಾವು ಯಾವುದನ್ನೂ ಮುಚ್ಚಿಡುತ್ತಿಲ್ಲ. ಸಾಕ್ಷಿಗಳನ್ನು ಬೆದರಿಸುವ ಅಗತ್ಯವೂ ನಮಗಿಲ್ಲ ಎಂದರು.

ದರ್ಶನ್ ಅವರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡುವ ಬಗ್ಗೆ ಬಂಧೀಖಾನೆಯ ಅಧಿಕಾರಿಗಳ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ. ಪರಿಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದು ನಂತರ ಕ್ರಮ ಕೈಗೊಳ್ಳಬಹುದು. ಈ ವಿಚಾರದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಜೈಲಿನ ಅಧಿಕಾರಿಗಳೇ ಎರಡುಮೂರು ದಿನಗಳಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.
ರಾಜಭವನ ಚಲೋ ನಡೆಸುತ್ತಿರುವ ವಿವಿಧ ಸಂಘಟನೆಗಳು ಶಾಂತಿ ಪಾಲನೆ ಮಾಡಬೇಕು. ಮೆರವಣಿಗೆ ಹಾಗೂ ಇತರ ವಿಚಾರಗಳ ಬಗ್ಗೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಬೇಕು ಎಂದರು.

RELATED ARTICLES

Latest News