Sunday, January 11, 2026
Homeರಾಷ್ಟ್ರೀಯಕೇರಳ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಛಾಟಿತ ಕಾಂಗ್ರೆಸ್ ಶಾಸಕ ಅರೆಸ್ಟ್

ಕೇರಳ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಛಾಟಿತ ಕಾಂಗ್ರೆಸ್ ಶಾಸಕ ಅರೆಸ್ಟ್

Kerala: Expelled Congress MLA arrested in sexual assault case

ಪತ್ತನಂತಿಟ್ಟ, ಜ.11-ಕೇರಳ ರಾಜ್ಯದ ಕಾಂಗ್ರೆಸ್‌‍ ಶಾಸಕ ರಾಹುಲ್‌ ಮಮ್ಕೂಟತಿಲ್‌ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.ಇಂದು ಬೆಳಿಗ್ಗೆ ಪಾಲಕ್ಕಾಡ್‌ನಲ್ಲಿ ಬಂಧಿಸಿ ವಶಕ್ಕೆ ಪಡೆದು ನಂತರ ಇಲ್ಲಿನ ಪೊಲೀಸ್‌‍ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಇತ್ತೀಚೆಗೆ ಪಾಲಕ್ಕಾಡ್‌ ಶಾಸಕರ ವಿರುದ್ಧ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಪ್ರಸ್ತುತ ಕೆನಡಾದಲ್ಲಿರುವ ಸಂತ್ರಸ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮೂಲಗಳ ಪ್ರಕಾರ, ದೂರುದಾರರು ವಿವಾಹಿತ ಮಹಿಳೆಯಾಗಿದ್ದು, ಅವರ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳ ನಂತರ ಮಮ್ಕೂಟತಿಲ್‌ ಅವರೊಂದಿಗೆ ಪರಿಚಯವಾಯಿತು.ಮಮ್ಕೂಟತಿಲ್‌ ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಗರ್ಭಿಣಿಯಾದಾಗ, ಮಮ್ಕೂಟತಿಲ್‌ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದರು ಮತ್ತು ಗರ್ಭಪಾತ ಮಾಡಿಸಿಕೊ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ ಮಮ್ಕೂಟತಿಲ್‌ ತನ್ನಿಂದ ಹಲವು ಬಾರಿ ಹಣ ಪಡೆದಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿದ ನಂತರ, ಪೊಲೀಸರು ಮಮ್ಕೂಟತಿಲ್‌ ಅವರನ್ನು ಕಣ್ಗಾವಲಿನಲ್ಲಿಟ್ಟರು, ನಂತರ ಉಪ ಎಸ್ಪಿ ನೇತೃತ್ವದ ಆರು ಸದಸ್ಯರ ತಂಡವು ರಾತ್ರಿ 12.45 ರ ಸುಮಾರಿಗೆ ಅವರು ತಂಗಿದ್ದ ಹೋಟೆಲ್‌ಗೆ ತಲುಪಿತು ಎಂದು ಮೂಲಗಳು ತಿಳಿಸಿವೆ.

ಅವರನ್ನು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಹೋಟೆಲ್‌ನಿಂದ ವಶಕ್ಕೆ ತೆಗೆದುಕೊಂಡು 5.30 ರ ಸುಮಾರಿಗೆ ಪತ್ತನಂತಿಟ್ಟ ಪೊಲೀಸ್‌‍ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಅವರ ವಿರುದ್ಧ ಇದೇ ರೀತಿಯ ಎರಡು ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಇತ್ತೀಚಿನ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌‍ಐಟಿ ಮುಖ್ಯಸ್ಥ ಜಿ ಪೂಂಗುಜಲಿ ಪೊಲೀಸ್‌‍ ಶಿಬಿರಕ್ಕೆ ಆಗಮಿಸಿ ಮಮ್ಕೂಟತಿಲ್‌ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.ಪ್ರಾಥಮಿಕ ವಿಚಾರಣೆಯ ನಂತರ, ಅವರ ಬಂಧನವನ್ನು ದಾಖಲಿಸಲಾಗಿದೆ.ಸಂಜೆ ವೇಳೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇರಳ ಹೈಕೋರ್ಟ್‌ ಈ ಹಿಂದೆ ಅತ್ಯಾಚಾರ ಮತ್ತು ಮಹಿಳೆಯನ್ನು ಗರ್ಭಪಾತಕ್ಕೆ ಒತ್ತಾಯಿಸಿದ ಆರೋಪಗಳಿಗೆ ಸಂಬಂಧಿಸಿದ ಮೊದಲ ಪ್ರಕರಣದಲ್ಲಿ ಮಮ್ಕೂಟತಿಲ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು.

ಎರಡನೇ ಪ್ರಕರಣದಲ್ಲಿ, ತಿರುವನಂತಪುರಂನ ಸೆಷನ್ಸ್ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು.ನಂತರಮಮ್ಕೂಟಥಿಲ್‌ ಅವರನ್ನು ಕಾಂಗ್ರೆಸ್‌‍ ಪಕ್ಷದಿಂದ ಹೊರಹಾಕಿತು.ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್‌‍ ನಾಯಕ ಶಫಿ ಪರಂಪಿಲ್‌‍, ಕೋಝಿಕ್ಕೋಡ್‌ ಜಿಲ್ಲೆಯ ವಡಕರದಿಂದ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದ ನಂತರ, ಕಳೆದ ವರ್ಷ ಪಾಲಕ್ಕಾಡ್‌ ನಿಂದ ನಡೆದ ಉಪಚುನಾವಣೆಯಲ್ಲಿ ಮಮ್ಕೂಟಥಿಲ್‌ ಸ್ಪರ್ಧಿಸಿದರು.

ಪಾಲಕ್ಕಾಡ್‌ ಜಿಲ್ಲಾ ಕಾಂಗ್ರೆಸ್‌‍ ಸಮಿತಿ (ಡಿಸಿಸಿ) ಅಧ್ಯಕ್ಷ ಎ. ತಂಕಪ್ಪನ್‌ ಅವರು ಮಮ್ಕೂಟಥಿಲ್‌ಗೆ ಇನ್ನು ಮುಂದೆ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಅವರು ಕಾಂಗ್ರೆಸ್‌‍ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬುದು ನಿಜ. ಆದಾಗ್ಯೂ, ದೂರುಗಳು ಬಂದ ನಂತರ ಮತ್ತು ಅವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಪಕ್ಷವು ಅವರನ್ನು ಉಚ್ಚಾಟಿಸಿತು ಎಂದು ತಂಕಪ್ಪನ್‌ ಹೇಳಿದರು.

RELATED ARTICLES

Latest News