Friday, September 20, 2024
Homeರಾಷ್ಟ್ರೀಯ | Nationalತಿರುಪತಿ ಲಡ್ಡುನಲ್ಲಿ ಪ್ರಾಣಿಗಳ ಕೊಬ್ಬ ಬಳಸಿದ್ದು ದೃಢ, ತುಪ್ಪದ ಗುಣಮಟ್ಟಪರೀಕ್ಷೆಗೆ ಸಮಿತಿ ರಚನೆ

ತಿರುಪತಿ ಲಡ್ಡುನಲ್ಲಿ ಪ್ರಾಣಿಗಳ ಕೊಬ್ಬ ಬಳಸಿದ್ದು ದೃಢ, ತುಪ್ಪದ ಗುಣಮಟ್ಟಪರೀಕ್ಷೆಗೆ ಸಮಿತಿ ರಚನೆ

Amid laddoo row, Tirupati temple sets up panel to examine ghee quality

ತಿರುಪತಿ,ಸೆ.20- ಇತಿಹಾಸ ಪ್ರಸಿದ್ದ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಸ್ವತಃ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರನಾಯ್ಡು ಆರೋಪಿಸಿದ ಬೆನ್ನಲ್ಲೇ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್‌ ವರದಿಯಲ್ಲಿ ದೃಢಪಟ್ಟಿದ್ದು ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ದೇವಸ್ಥಾನದ ಆಡಳಿತ ಸಮಿತಿಯೊಂದನ್ನು ಸ್ಥಾಪಿಸಿದೆ.

ಡಾ.ಸುರೇಂದ್ರನಾಥ್‌, ಡಾ.ವಿಜಯ್‌ ಭಾಸ್ಕರ್‌ ರೆಡ್ಡಿ, ಡಾ.ಸ್ವರ್ಣಲತಾ ಮತ್ತು ಡಾ.ಮಹದೇವನ್‌ ಅವರನ್ನೊಳಗೊಂಡ ನಾಲ್ಕು ತಜ್ಞರ ಸಮಿತಿ ರಚಿಸಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್‌ ತಿಳಿಸಿದ್ದಾರೆ.

ಟೆಂಡರ್‌ಗಳಲ್ಲಿ ಗುಣಮಟ್ಟದ ತುಪ್ಪ ಖರೀದಿಸಲು ಸೇರಿಸಬೇಕಾದ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಸಮಿತಿಯು ಸಲಹೆ ನೀಡಲಿದೆ ಎಂದು ಅವರು ಹೇಳಿದರು. ಗುತ್ತಿಗೆದಾರರು ಕಲಬೆರಕೆ ಮತ್ತು ಕಡಿಮೆ ಗುಣಮಟ್ಟದ ತುಪ್ಪವನ್ನು ಸರಬರಾಜು ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.

ಯಾವುದೇ ಕಲಬೆರಕೆ ಪರೀಕ್ಷಾ ಸಾಧನಗಳಿಲ್ಲದ ಕಾರಣ ಸಂಗ್ರಹಣೆಯ ಮೂಲಕ ಕಚ್ಚಾವಸ್ತುಗಳು ಮತ್ತು ತುಪ್ಪವನ್ನು ಸಂಸ್ಕರಿಸುವ ವ್ಯವಸ್ಥೆಗಳಲ್ಲಿ ಮಿತಿಗಳು ಮತ್ತು ನಿರ್ಬಂಧಗಳಿವೆ ಎಂದು ಒಪ್ಪಿಕೊಂಡಿದ್ದರು.

ಈ ಹಿಂದಿನ ವೈಎಸ್‌‍ಆರ್‌ಪಿ ಆಡಳಿತಾವಧಿಯಲ್ಲಿ ಲಡ್ಡು ತಯಾರಿಕೆಗೆ ಸರಬರಾಜು ಮಾಡಲಾದ ತುಪ್ಪವು ವಿವಿಧ ಸಂಶಯಾಸ್ಪದ ಅಂಶಗಳನ್ನು ಒಳಗೊಂಡಿದೆ. ತುಪ್ಪವು ಸೋಯಾಬೀನ್‌, ಗೋವಿನ ಜೋಳದ ಎಣ್ಣೆ, ಆಲಿವ್‌ ಎಣ್ಣೆ, ಗೋಧಿ ಹೊಟ್ಟಿನ ಎಣ್ಣೆ, ಜೋಳದ ಎಣ್ಣೆ, ಹತ್ತಿಬೀಜದ ಎಣ್ಣೆ, ಮೀನಿನ ಎಣ್ಣೆ, ಗೋವಿನ ಕೊಬ್ಬು, ತಾಳೆ ಎಣ್ಣೆ ಮತ್ತು ಹಂದಿಯ ಕೊಬ್ಬನ್ನು ಒಳಗೊಂಡಿತ್ತು. ಇದರಲ್ಲಿ, ಸಾಂಪ್ರದಾಯಿಕ ಹಸುವಿನ ತುಪ್ಪಕ್ಕೆ ದೂರವಾದ ಮಿಶ್ರಣವಿದೆ ಎಂದು ಆರೋಪಿಸಿದ್ದರು.

ತುಪ್ಪದ ಗುಣಮಟ್ಟದ ನಿಯಂತ್ರಣದಲ್ಲಿ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಸರ್ಕಾರದ ಸ್ಪಷ್ಟ ಲೋಪ ಎದ್ದು ಕಾಣುತ್ತಿದೆ ಎಂದು ರೆಡ್ಡಿ ಟೀಕಿಸಿದ್ದಾರೆ. ಪ್ರೀಮಿಯಂ ಗುಣಮಟ್ಟದ ತುಪ್ಪದ ಬೆಲೆ ಸಾಮಾನ್ಯವಾಗಿ ಪ್ರತಿ ಕೆ.ಜಿಗೆ 1,000 ರೂ. ಇರುತ್ತದೆ. ಆದರೆ ಇಲ್ಲಿ ತುಪ್ಪವನ್ನು ಕೆ.ಜಿಗೆ ಕೇವಲ 320 ರೂ.ಗೆ ನೀಡಲಾಗಿದೆ.

ಇಷ್ಟೊಂದು ಕಡಿಮೆ ಬೆಲೆಗೆ ಕಳಪೆ ಸರಬರಾಜು ಅಥವಾ ಭ್ರಷ್ಟಾಚಾರದ ಮೂಲಕ ಮಾತ್ರ ತುಪ್ಪವನ್ನು ಪೂರೈಸಬಹುದು ಎಂದು ಟೆಂಡರ್‌ ಪ್ರಕ್ರಿಯೆಯ ಬಗ್ಗೆ ಅವರು ಪ್ರಶ್ನಿಸಿದ್ದಾರೆ.15,000 ಕೆಜಿ ತುಪ್ಪದ ಟೆಂಡರ್‌ ಲಂಚದ ಹಿನ್ನೆಲೆ ಹೊಂದಿದೆ ಎಂದು ಆರೋಪಿಸಿದ ಅವರು, ಸರ್ಕಾರಿ ಕಂಟ್ರಾಕ್ಟ್‌ಗಳಲ್ಲಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ವೈಎಸ್‌‍ಆರ್‌ಪಿ ಸರ್ಕಾರವು ಕೇವಲ 75 ಲಕ್ಷ ರೂ.ಗಳ ಹೂಡಿಕೆಯೊಂದಿಗೆ ತುಪ್ಪ ಪ್ರಮಾಣೀಕರಣಕ್ಕಾಗಿ ಮೀಸಲಾದ ಲ್ಯಾಬ್‌ ಅನ್ನು ಸುಲಭವಾಗಿ ಸ್ಥಾಪಿಸಬಹುದಿತ್ತು ಎಂದು ರೆಡ್ಡಿ ಗಮನಸೆಳೆದರು. ವೆಂಕಟ ರಮಣ ರೆಡ್ಡಿ ಆರೋಪಗಳು, ವೈಎಸ್‌‍ಆರ್‌ಪಿ ಆಡಳಿತದ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಅಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಭರವಸೆ ಸೇರಿ ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆದವು. ವಿಶೇಷವಾಗಿ ಆಂಧ್ರಪ್ರದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಉತ್ಪನ್ನವಾದ ತಿರುಪತಿ ಲಡ್ಡು ಗುಣಮಟ್ಟದ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

ನಾಯ್ಡು ಹೇಳಿದ್ದೇನು?:
ಹಿಂದಿನ ವೈಎಸ್‌‍ಆರ್‌ಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸಿದ್ದರು ಎಂದು ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

RELATED ARTICLES

Latest News