Sunday, September 22, 2024
Homeರಾಜ್ಯವಿಚ್ಛೇದನಕ್ಕೆ ಬಂದಿದ್ದ ದಂಪತಿಗೆ ಗವಿಸಿದ್ದೇಶ್ವರ ಶ್ರೀಗಳ ಬಳಿ ಹೋಗುವಂತೆ ಸಲಹೆ ನೀಡಿದ ನ್ಯಾಯಮೂರ್ತಿಗಳು

ವಿಚ್ಛೇದನಕ್ಕೆ ಬಂದಿದ್ದ ದಂಪತಿಗೆ ಗವಿಸಿದ್ದೇಶ್ವರ ಶ್ರೀಗಳ ಬಳಿ ಹೋಗುವಂತೆ ಸಲಹೆ ನೀಡಿದ ನ್ಯಾಯಮೂರ್ತಿಗಳು

Karnataka High Court advises couple to seek guidance from spiritual guru to save marriage

ಬೆಂಗಳೂರು,ಸೆ.22- ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗೆ ಗವಿಸಿದ್ದೇಶ್ವರ ಶ್ರೀಗಳ ಭೇಟಿ ಮಾಡಿ ಸಮಾಲೋಚಿಸಿ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.ನಾಲ್ಕು ವರ್ಷದ ಹಿಂದೆ ಗದಗ ಜಿಲ್ಲೆಯ ದಂಪತಿ ವಿಚ್ಛೇದನ ಬೇಕೆಂದು ಧಾರವಾಡ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸೆಪ್ಟೆಂಬರ್‌ 17ರಂದು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್‌ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರು, ದಂಪತಿಗೆ ಬುದ್ಧಿವಾದ ಹೇಳಿದ್ದಾರೆ. ಗಂಡ-ಹೆಂಡತಿ ಜಗಳ ಸಾಮಾನ್ಯ. ಸಣ್ಣ ವಿಚಾರಕ್ಕೆ ಮುನಿಸಿಕೊಂಡು ದೂರ ಆಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸಮಸ್ಯೆ ಇದ್ದರೆ ಕೂತು ಬಗೆಹರಿಸಿಕೊಳ್ಳಿ. ಏನಾದರೂ ಮಾನಸಿಕವಾಗಿ ಸಮಸ್ಯೆ ಇದ್ದರೆ ಮನೋವೈದ್ಯರ ಬಳಿಗೆ ಹೋಗಿ ಎಂದು ತಿಳಿ ಹೇಳಿದ್ದಾರೆ.

ಈ ವೇಳೆ ದಂಪತಿ ನಾವು ಮನೋವೈದ್ಯರ ಬಳಿ ಹೋಗಿದ್ದೇವೆ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಗ ನ್ಯಾಯಮೂರ್ತಿಗಳು ಯಾವುದಾದರೂ ಮಠಾಧೀಶರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ನ್ಯಾಯಾಧೀಶರ ಮಾತಿಗೆ ಒಪ್ಪಿದ ಪತಿ ಗದಗದ ತೋಂಟದಾರ್ಯ ಮಠದ ಸ್ವಾಮೀಜಿ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.

ಕೋರ್ಟ್‌ನಲ್ಲಿ ಪತಿಯ ಮಾತಿಗೆ ಒಪ್ಪದ ಹೆಂಡತಿ ತೋಂಟದಾರ್ಯ ಮಠ ಬೇಡ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗುತ್ತೇವೆ ಎಂದಿದ್ದಾರೆ. ಈ ವೇಳೆ ನ್ಯಾಯಮೂರ್ತಿಗಳು ಒಳ್ಳೆಯದೇ ಆಯ್ತು. ಗವಿಸಿದ್ದೇಶ್ವರ ಸ್ವಾಮೀಜಿ ವಿವೇಕಾನಂದರಂತೆ ಇದ್ದಾರೆ. ಅವರ ಭಾಷಣ ಕೇಳಿದ್ದೇನೆ. ಅವರ ಬಳಿಯೇ ಹೋಗಿ ಎಂದು ಸಲಹೆ ಕೊಟ್ಟಿದ್ದಾರೆ.

ಪರಸ್ಪರ ದೂರವಾಗಿದ್ದ ಪತಿ-ಪತ್ನಿಗೆ ಗವಿ ಮಠಕ್ಕೆ ಹೋಗಿ, ಶ್ರೀಗಳ ಆಶೀರ್ವಾದ ಪಡೆದು ಹೊಸ ಜೀವನ ನಡೆಸಿ ಅಂತ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ. ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ದಂಪತಿಗಳು ಗವಿಸಿದ್ದೇಶ್ವರ ಮಠಕ್ಕೆ ಹೋಗುವುದಾಗಿ ಒಪ್ಪಿದ್ದಾರೆ.

ಶ್ರೀಗಳನ್ನು ಭೇಟಿ ಸರಿಯಾದ ನಿರ್ಧಾರ:
ಕೊಪ್ಪಳದ ಗವಿಸಿದ್ದೇಶ್ವರ ಮಠದ ಭಕ್ತ ಶಿವಾನಂದ ಪಾಟೀಲ ಮಾತನಾಡಿ, ತಮ ಸಮಸ್ಯೆಗಳಿಗೆ ಗವಿಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗುತ್ತಿರುವುದು ಸರಿಯಾದ ನಿರ್ಧಾರವಾಗಿದ್ದು, ಮಠದ ಸಂಪ್ರದಾಯದಲ್ಲಿ ನ್ಯಾಯಾಲಯದಿಂದ ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದಲು. ಅನೇಕ ದಂಪತಿಗಳು ಈ ಮಾರ್ಗವನ್ನು ಅನುಸರಿಸಿದರೆ, ನ್ಯಾಯಾಲಯಗಳ ಮೇಲೆ ಕಡಿಮೆ ಒತ್ತಡವಿರುತ್ತದೆ ಮತ್ತು ಜನರು ಸಂತೋಷದ ಜೀವನವನ್ನು ನಡೆಸಬಹುದು.

ಅನೇಕ ಜನರು ತಮ ಸಮಸ್ಯೆಗಳಿಗಾಗಿ ದಾರ್ಶನಿಕರನ್ನು ಭೇಟಿಯಾಗುತ್ತಾರೆ. ಆದರೆ ವೈವಾಹಿಕ ಗೊಂದಲದ ವಿಷಯಕ್ಕೆ ಬಂದಾಗ, ಅವರು ದಾರ್ಶನಿಕರಿಂದ ಸಲಹೆಗಳನ್ನು ಪಡೆಯಲು ಬರುವುದಿಲ್ಲ. ಆದರೆ ಅವರು ನೇರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ ಮತ್ತು ಈ ಬೆಳವಣಿಗೆಯು ಭವಿಷ್ಯಕ್ಕಾಗಿ ಒಂದು ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

800 ವರ್ಷಗಳಷ್ಟು ಹಳೆಯ ಐತಿಹಾಸಿಕ ಮಠ: ಅಂದಹಾಗೆ ಕರ್ನಾಟಕದ ಅಗ್ರಮಾನ್ಯ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಒಂದಾಗಿರುವ ಗವಿಸಿದ್ದೇಶ್ವರ ಮಠ ಕೊಪ್ಪಳ ಜಿಲ್ಲೆಯಲ್ಲಿದೆ. ಇದನ್ನು ಗವಿಮಠ ಎಂತಲೂ ಕರೆಯುತ್ತಾರೆ. ಇದು ಉತ್ತರ ಕರ್ನಾಟಕದ ಹಳೆಯ ಮಠಗಳಲ್ಲಿ ಒಂದು. 800 ವರ್ಷಗಳಷ್ಟು ಹಳೆಯದಾಗಿರುವ ಲಿಂಗಾಯತ ಮಠಗಳಲ್ಲಿ ಈ ಮಠ ವೂ ಒಂದಾಗಿದೆ.

RELATED ARTICLES

Latest News