Sunday, September 29, 2024
Homeರಾಜ್ಯಇಂದು ಸಿಎಂ ವಿರುದ್ಧದ ಅಭಿಯೋಜನೆ ತೀರ್ಪು : ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಒಂದೆಡೆ ಸೇರಿದ ಸಚಿವರು

ಇಂದು ಸಿಎಂ ವಿರುದ್ಧದ ಅಭಿಯೋಜನೆ ತೀರ್ಪು : ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಒಂದೆಡೆ ಸೇರಿದ ಸಚಿವರು

Karnataka High Court verdict on CM Siddaramaiah’s plea today

ಬೆಂಗಳೂರು,ಸೆ.24- ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆ ಹಾಗೂ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಣಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಯ ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಹೈ ಅಲರ್ಟ್‌ ಮಾದರಿಯಲ್ಲಿ ಪೂರ್ವ ತಯಾರಿ ನಡೆಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒತ್ತಡದ ನಡುವೆಯೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಉಳಿದಂತೆ ಸಚಿವರಾದ ಕೃಷ್ಣಾಭೈರೇಗೌಡ, ಎಚ್‌.ಕೆ.ಪಾಟೀಲ್‌, ಡಾ.ಜಿ.ಪರಮೇಶ್ವರ್‌, ದಿನೇಶ್‌ಗುಂಡೂರಾವ್‌, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಸಂಪುಟದ ಕೋರ್‌ಟೀಂನಲ್ಲಿರುವ ಸದಸ್ಯರು ತಮೆಲ್ಲಾ ಪ್ರವಾಸ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಕೇಂದ್ರಸ್ಥಾನದಲ್ಲಿ ಬೀಡುಬಿಟ್ಟಿದೆ.

ತೀರ್ಪಿನ ಬಳಿಕ ಯಾವುದೇ ರೀತಿಯ ಪರಿಸ್ಥಿತಿಗಳು ಎದುರಾದರೂ ಅದನ್ನು ನಿಭಾಯಿಸಲು ಸರ್ಕಾರ ತಯಾರಿ ನಡೆಸಿದೆ. ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದೇ ರಾಜಕೀಯಪ್ರೇರಿತ ಎಂಬ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಕಾನೂನು ಸಂಘರ್ಷಕ್ಕಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ತಂಡ ಮುಂದಾಗಿತ್ತು.

ರಾಜ್ಯದ ಕಾಂಗ್ರೆಸ್‌‍ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜಭವನವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಆರಂಭದಿಂದಲೂ ಮಾಡಲಾಗುತ್ತಿದೆ. ರಾಜ್ಯಪಾಲರು ಉದ್ದೇಶಪೂರ್ವಕವಾಗಿಯೇ ಕ್ಷುಲ್ಲಕ ವಿಚಾರಗಳಿಗೆಲ್ಲಾ ಹಸ್ತಕ್ಷೇಪ ನಡೆಸುವ ಮೂಲಕ ಪದೇಪದೇ ಮುಜುಗರ ಉಂಟುಮಾಡುತ್ತಿದ್ದಾರೆ. ಸಾಂವಿಧಾನಿಕ ಬಾಧ್ಯತೆಗಳು ಹಾಗೂ ವಿಧಿಗಳನ್ನು ಮೀರಿ ರಾಜಕೀಯ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂಬೆಲ್ಲಾ ಟೀಕೆಗಳನ್ನು ಕಾಂಗ್ರೆಸ್‌‍ನ ನಾಯಕರು, ಸಚಿವರು ಹಾಗೂ ಶಾಸಕರು ಬಹಿರಂಗವಾಗಿಯೇ ಮಾಡಿದರು.

ಅಭಿಯೋಜನೆಗೆ ಅನುಮತಿ ನೀಡಿದ ಬಳಿಕವಂತೂ ಕಾಂಗ್ರೆಸ್‌‍ ನೇರವಾಗಿ ಬೀದಿಗಿಳಿದಿತ್ತು. ರಾಜ್ಯಪಾಲರ ನಡವಳಿಕೆಯನ್ನು ಕಾನೂನಾತಕವಾಗಿ ಎದುರಿಸುವುದಾಗಿ ಘೋಷಿಸಿದ್ದಲ್ಲದೆ, ಹಲವು ಸುತ್ತಿನ ಸಂಘರ್ಷದ ನಡವಳಿಕೆಗಳನ್ನು ಅನುಸರಿಸಿತ್ತು.
ಈಗಾಗಲೇ ಹೈಕೋರ್ಟ್‌ನಲ್ಲಿ ಕಾನೂನು ಸಮರ ನಡೆಸಲಾಗಿದೆ. ಯಾವುದೇ ಸಂದರ್ಭ ಬಂದರೂ ಕುಗ್ಗದೆ ಮುಖ್ಯಮಂತ್ರಿಯವರು ಎಂದಿನಂತೆಯೇ ಜವಾಬ್ದಾರಿಯಿಂದ ಮುಂದುವರೆಯಬೇಕೆಂದು ಒಂದಷ್ಟು ಜನ ಪ್ರತಿಪಾದಿಸುತ್ತಿದ್ದಾರೆ.

ಮೇಲ್ನೋಟಕ್ಕೆ ಸಂಪುಟದ ಸಚಿವರಲ್ಲಿ ಹಾಗೂ ಹೈಕಮಾಂಡ್‌ ನಾಯಕರಿಂದಲೂ ಇದೇ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ ಒಳಗೊಳಗೇ ಸಿದ್ದರಾಮಯ್ಯ ವಿರುದ್ಧ ಮಸಲತ್ತುಗಳು ನಡೆಯುತ್ತಲೇ ಇವೆ.

ಒಂದು ವೇಳೆ ಎಫ್‌ಐಆರ್‌ ದಾಖಲಾಗಿದ್ದೇ ಆದರೆ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ ಎಂಬ ವಿರೋಧಪಕ್ಷಗಳ ಅಭಿಪ್ರಾಯಗಳಿಗೆ ಆಡಳಿತ ಪಕ್ಷದಲ್ಲೂ ಮೌನಸಮತಿ ದೊರೆಯುತ್ತಿದೆ. ಹೀಗಾಗಿ ಹೈಕೋರ್ಟ್‌ನ ತೀರ್ಪು ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವನ್ನು ನಿರ್ಣಯಿಸುವುದಷ್ಟೇ ಅಲ್ಲ, ರಾಜ್ಯ ರಾಜಕೀಯಕ್ಕೂ ಹೊಸ ದಿಕ್ಕು ನೀಡಲಿದೆ.

RELATED ARTICLES

Latest News