Sunday, September 29, 2024
Homeರಾಜ್ಯಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿ

ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿ

Kumaraswamy Press Meet

ಬೆಂಗಳೂರು,ಸೆ.28– ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರ ಮೇಲಿರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ನೀಡುವುದಾಗಿ ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಯವರು ತಿಳಿಸಿದರು.

ಸುದ್ದಿಗೋಷ್ಠಿಯ ನ್ನುದ್ದೇಶಿಸಿ ಮಾತ ನಾಡಿದ ಅವರು, ಈ ಅಧಿಕಾರಿಯ ಕೈಕೆಳಗಿನ ಅಧಿಕಾರಿ ಹಾಗೂ ಶ್ರೀಧರ್ ಎಂಬುವವರು 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂಬ ದೂರನ್ನುನೀಡಿದ್ದಾರೆ. ಆದರೂ ರಾಜ್ಯಸರ್ಕಾರ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅವರ ಮೇಲಿರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಗೃಹಕಾರ್ಯದರ್ಶಿಯವರಿಗೆ ನೀಡಲಾಗುವುದು. ಚಂದ್ರಶೇಖರ್ರವರ ಪತ್ನಿ ಹೆಸರಿನಲ್ಲಿ 38 ಮಹಡಿಯ ಕಟ್ಟಡವನ್ನು ರಾಜಕಾಲುವೆ ಮೇಲೆ ಕಟ್ಟುತ್ತಿದ್ದಾರೆ. ಅದರ ಬಗ್ಗೆ ಯಾವುದೇ ಕ್ರಮವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಅಧಿಕಾರಿ ಲೋಕಾಯುಕ್ತ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಕೋರುವ ಉದ್ಧಟತನ ತೋರಿದ್ದಾರೆ. ಇವರಿಗೆ ಆ ಅಧಿಕಾರ ಕೊಟ್ಟವರು ಯಾರು?, ಇಂತಹ ಆರೋಪಗಳನ್ನು ಹೊತ್ತಿರುವ ಆ ಅಧಿಕಾರಿಯನ್ನು ಉನ್ನತ ಹುದ್ದೆಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಯಾವ ರೀತಿ ಗೌರವ ಕೊಡುತ್ತಿದ್ದಾರೆ ಎಂಬುದಕ್ಕೆ ತಾಜಾ ನಿದರ್ಶನ. ಸಿದ್ದರಾಮಯ್ಯನವರು ವಿರೋಧಪಕ್ಷದ ನಾಯಕರಾಗಿದ್ದಾಗ ರಾಜ್ಯಪಾಲರ ಕರ್ತವ್ಯ ಹಾಗೂ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ. ಆಗ ಸರ್ಕಾರ ತಪ್ಪು ಮಾಡಿದಾಗ ತಿದ್ದುವ ಅಧಿಕಾರ ರಾಜ್ಯಪಾಲರಿಗಿದೆ ಎಂದು ಹೇಳಿದ್ದಾರೆ. ಅದನ್ನೊಮೆ ಕೇಳುವುದು ಒಳ್ಳೆಯದು ಎಂದರು.

ಬೇರೆಯವರ ಮೇಲೆ ದೂರು ಕೊಟ್ಟ ತಕ್ಷಣ ಎಫ್ಐಆರ್ ಹಾಕಿ ಬಂಧಿಸಲಾಗುತ್ತದೆ. ಇಂತವರ ಮೇಲೆ ಇನ್‌್ಸಪೆಕ್ಟರ್ನವರೇ ದೂರು ಕೊಟ್ಟಿದ್ದರೂ ಏಕೆ ಕ್ರಮವಿಲ್ಲ ಎಂದು ದೂರಿನಲ್ಲಿನ ಕೆಲವು ಅಂಶಗಳನ್ನು ಉಲ್ಲೇಖಿಸಿದರು.

ಆಂಧ್ರಪ್ರದೇಶದ ಮೂಲದವರಾದ ಚಂದ್ರಶೇಖರ್ ಹಿಮಾಚಲ ಪ್ರದೇಶದ ಕೇಡರ್ನಲ್ಲಿ ಆಯ್ಕೆಯಾದವರು. 2008-09 ರಲ್ಲಿ ಕರ್ನಾಟಕದಲ್ಲಿ ನಿಯೋಜನೆ ಮೇಲೆ ಕೆಲಸ ಮಾಡಲು ರಾಜ್ಯಕ್ಕೆ ಬಂದವರು. ಗರಿಷ್ಠ 5 ವರ್ಷ ಈ ರೀತಿ ಸೇವೆ ಸಲ್ಲಿಸಬಹುದಷ್ಟೇ. ಆದರೆ ಇವರು ಹಿಮಾಚಲ ಪ್ರದೇಶದ ಹವಾಮಾನ ತಮ ಆರೋಗ್ಯಕ್ಕೆ ಅನುಕೂಲಕರವಾಗಿಲ್ಲ ಎಂದು ತಮ ಆರೋಗ್ಯದ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಲ್ಲೇ ಉಳಿದುಕೊಂಡಿದ್ದಾರೆ ಎಂದು ಆರೋಪಿಸಿದರು.

ಈ ಅಧಿಕಾರಿಗೆ ಸಂಬಂಧಿಸಿದಂತೆ ಹಲವು ಅವ್ಯವಹಾರಗಳ ಆರೋಪಗಳು ಕೇಳಿಬಂದಿವೆ. ಇವರಿಗೆ ಲೋಕಾಯುಕ್ತ ಮತ್ತು ಆಂತರಿಕ ಭದ್ರತಾ ವಿಭಾಗದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇಂತಹ ಅಧಿಕಾರಿಯನ್ನು ಮುಂದಿಟ್ಟುಕೊಂಡು ನಾವು ಹೇಳಿದಂತೆ ವಿರೋಧಪಕ್ಷದವರನ್ನು ಮುಗಿಸಲು ಶ್ರಮ ವಹಿಸಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಸೂಚನೆ ಕೊಟ್ಟಿದ್ದಾರೆ. ಈ ಕಾರ್ಯ ಮಾಡುವವರಿಗೆ ಸಿಐಡಿಯ ಮುಖ್ಯಸ್ಥ ಸ್ಥಾನ ಇಲ್ಲವೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆ ನೀಡುವ ಮಾತು ಕೂಡ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೆಟ್ಟ ಸಂಪ್ರದಾಯಕ್ಕೆ ನಾಂದಿ :
ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ರಾಜ್ಯಸರ್ಕಾರ ನಾಂದಿ ಹಾಡಿದೆ ಎಂದು ಆರೋಪಿಸಿದರು. ಇದೇ ಪರಿಸ್ಥಿತಿ ರಾಜ್ಯದಲ್ಲಿ ಮುಂದುವರೆದರೆ ಮುಂದೆ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಗಂಗೇನಹಳ್ಳಿ ಡಿ ನೋಟಿಫಿಕೇಷನ್ ನಾನು ಮಾಡಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಅದಕ್ಕೆ ಸಂಬಂಧಿಸಿದ ಕಡತ ನನ್ನ ಮುಂದೆ ಬಂದಾಗ ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಅಷ್ಟೇ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ನೋಟೀಸ್ ನೀಡಿರಲಿಲ್ಲ.

ಪತ್ರಿಕೆಯೊಂದರಲ್ಲಿ ವರದಿಯಾಗಿದ್ದನ್ನು ಗಮನಿಸಿ ನಿನ್ನೆ ನಾನೇ ಲೋಕಾಯುಕ್ತ ಕಚೇರಿಗೆ ಹೋಗಿದ್ದೆ. ಅಲ್ಲಿ ಹತ್ತು ನಿಮಿಷಗಳ ಕಾಲ ಉತ್ತರ ಕೊಟ್ಟಿದ್ದೇನೆ. ಅಧಿಕಾರಿಗಳಿಗೆ ತೊಂದರೆಯಾಗಬಾರದು ಎಂದು ಆ.21 ನೇ ತಾರೀಖಿನಂದು ಟೈಪು ಮಾಡಿ ಇಟ್ಟುಕೊಂಡಿದ್ದ ನೋಟಿಸ್ಗೆ ಸಹಿ ಹಾಕಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

RELATED ARTICLES

Latest News