Saturday, October 19, 2024
Homeರಾಷ್ಟ್ರೀಯ | National`ರತ್ನ' ಕಳೆದುಕೊಂಡ ಭಾರತ : ಟಾಟಾ ಸಾಮ್ರಾಟನ ಯುಗಾಂತ್ಯ

`ರತ್ನ’ ಕಳೆದುಕೊಂಡ ಭಾರತ : ಟಾಟಾ ಸಾಮ್ರಾಟನ ಯುಗಾಂತ್ಯ

Ratan Tata: Indian Tycoon dies aged 86

ಮುಂಬೈ,ಅ.10– ಭಾರತದ ಕೈಗಾರಿಕೋದ್ಯಮಕ್ಕೆ ಹೊಸ ಮುನ್ನುಡಿ ಬರೆದು ದೇಶದೆಲ್ಲೆಡೆ ಮನೆಮಾತಾಗಿದ್ದ ಪದಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಡಾ.ಇ.ಮೋಸೆಸ್ ರಸ್ತೆಯಲ್ಲಿರುವ ವರ್ಲಿಯಲ್ಲಿರುವ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿತು.

ತಮ ಜೀವನವನ್ನೇ ದೇಶ ಸೇವೆಗೆ ಸಮರ್ಪಣೆ ಮಾಡಿಕೊಂಡಿದ್ದ ಭಾರತದ ದೈತ್ಯ ಉದ್ಯಮಿಯು ಪಂಚಭೂತಗಳಲ್ಲಿ ಲೀನವಾದರು.
ರತನ್ ಟಾಟಾ ಇನ್ನು ಮುಂದೆ ಕೇವಲ ನೆನಪು ಮಾತ್ರ.ರತನ್ ಟಾಟಾ ಅವರ ಗೌರವಾರ್ಥ ಇಂದು ಒಂದು ದಿನದ ಶೋಕಾಚರಣೆಯನ್ನು ಘೋಷಿಸಲಾಗಿತ್ತು.ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧದಲ್ಲಿ ಹಾರಿಸಲಾಗಿದ್ದು, ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.

ಕೇಂದ್ರ ಸರ್ಕಾರದ ಪರವಾಗಿ ಗೃಹ ಸಚಿವ ಅಮಿತ್ ಷಾ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್, ಸೇರಿದಂತೆ ಅನೇಕ ಗಣ್ಯರು ಆಗಲಿದ ಮಹಾಚೇತನದ ಅಂತಿಮ ಸಂಸ್ಕಾರಕ್ಕೆ ಸಾಕ್ಷಿಯಾದರು. ಸದಾ ಜನಜಂಗುಳಿ, ವಾಣಿಜ್ಯ ವಹಿವಾಟು, ವಾಹನಗಳಿಂದ ತುಂಬಿ ತುಳುಕುತ್ತಿದ್ದ ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಗರಿ ಅಕ್ಷರಶಃ ಸ್ತಬ್ಧಗೊಂಡಿತ್ತು.

ಇದಕ್ಕೂ ಮುನ್ನ ಕಳೆದ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದ ರತನ್ ಟಾಟಾ ಅವರ ಕಳೇಬರವನ್ನು ನಗರದಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಮೃತರ ಗೌರವಾರ್ಥವಾಗಿ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಲಾಗಿತ್ತು. ಭಾರತದ ಕ್ರಿಕೆಟ್ ಮಾಜಿ ಆಟಗಾರ ಸಚಿನ್ ತೆಂಡಲ್ಕೂರ್, ಉದ್ಯಮಿಗಳಾದ ಮುಖೇಶ್ ಅಂಬಾನಿ, ಅದಾನಿ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಬ್ರೀಚ್ ಕ್ಯಾಂಡಿ ಅಸ್ಪತ್ರೆಯಿಂದ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ರತನ್ ಟಾಟಾ ಅವರ ಪಾರ್ಥೀವ ಶರೀರವನ್ನು ಅವರ ನಿವಾಸಕ್ಕೆ ತರಲಾಯಿತು.

ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್‌್ಸ (ಎನ್ಸಿಪಿಎ) ಲಾನ್‌್ಸನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆಯಿಂದಲೇ ಅವರ ನಿವಾಸದ ಬಳಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ಮೇರು ಚೇತನದ ಅಂತಿಮ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು.

ಸಜ್ಜನ, ಸರಳ, ನಿಗರ್ವಿ ವ್ಯಕ್ತಿತ್ವ :
ಆರು ಖಂಡಗಳ 100ಕ್ಕೂ ಹೆಚ್ಚು ದೇಶಗಳಲ್ಲಿ 30ಕ್ಕೂ ಅಧಿಕ ಕಂಪನಿಗಳನ್ನು ನಿಯಂತ್ರಿಸುತ್ತಿದ್ದರೂ, ರತನ್ ಟಾಟಾ ಅವರ ಬಹಳ ಸರಳ ಜೀವನ ಎಲ್ಲರಲ್ಲಿಯೂ ಸೋಜಿಗ ಉಂಟು ಮಾಡುತ್ತಿತ್ತು. ತಮ ಅಗಾಧ ಪ್ರಭಾವ ಹಾಗೂ ಯಶಸ್ಸಿನ ನಡುವೆಯೂ ಅವರು ಕೊಟ್ಯಾಧಿಪತಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಅವರು ಜನಮಾನಸದಲ್ಲಿ ಸದಾ ಉಳಿಯುವ ವಿಶಿಷ್ಟ ವ್ಯಕ್ತಿಯಾಗಿ ಉಳಿದುಹೋದರು.

ಜಮ್ಶೆಡ್ ಜಿ ಟಾಟಾ ಅವರ ಮರಿ ಮೊಮಗನಾಗಿ, ದೇಶದ ಅತ್ಯಂತ ಪ್ರತಿಷ್ಠಿತ ಉದ್ಯಮ ಕುಟುಂಬದಲ್ಲಿ 1937ರ ಡಿ 28ರಂದು ಜನಿಸಿದ ರತನ್ ಟಾಟಾ ಅವರು ಯಾವುದೇ ಹಮುಬಿಮುಗಳನ್ನು ಪ್ರದರ್ಶಿಸಿದವರಲ್ಲ. ಬಾಲ್ಯದಲ್ಲಿಯೇ ಅವರ ತಂದೆ ಮತ್ತು ತಾಯಿ ಪರಸ್ಪರ ದೂರವಾಗಿದ್ದರು.

ಹೀಗಾಗಿ ಅವರು ಪೋಷಕರಿಗಿಂತ ಹೆಚ್ಚು ಸಮಯವನ್ನು ಅಜ್ಜಿ ನವಾಜ್ ಭಾಯಿ ಟಾಟಾ ಅವರ ಪಾಲನೆಯಲ್ಲಿ ಬೆಳೆದಿದ್ದರು. ಸಿರಿವಂತ ಕುಟುಂಬದಲ್ಲಿ ಜನಿಸುವ ಸೌಭಾಗ್ಯ ಅವರದಾಗಿದ್ದರೂ, ಕೌಟುಂಬಿಕ ಜೀವನದ ಪ್ರೀತಿ, ಆನಂದವನ್ನು ಕಾಣಲು ಸಾಧ್ಯವಾಗಲಿಲ್ಲ. ಕೊನೆಯವರೆಗೂ ಅವಿವಾಹಿತರಾಗಿಯೇ ಉಳಿದ ಅವರು, ಆ ಕೌಟುಂಬಿಕ ಬದುಕನ್ನು ತಾವೂ ಕಟ್ಟಿಕೊಳ್ಳಲಿಲ್ಲ. ಈ ಕಾರಣದಿಂದ ಸವಲತ್ತು ಮತ್ತು ಕಷ್ಟ ಎರಡೂ ಅವರ ಅರಿವಿಗೆ ಬಂದಿತ್ತು.

ರತನ್ ಟಾಟಾ ಇನ್ನು ಮುಂದೆ ನಮೊಂದಿಗೆ ಇಲ್ಲದಿದ್ದರೂ, ಅವರ ನಮ್ರತೆ, ಉದಾರತೆ ಮತ್ತು ಉದ್ದೇಶದ ಪರಂಪರೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಟಾಟಾ ಕುಟುಂಬವು ತಿಳಿಸಿದೆ. ಟಾಟಾ ಟ್ರಸ್ಟ್ಗಳು ಲಾಭೋದ್ದೇಶವಿಲ್ಲದ ಸಮೂಹವಾಗಿದೆ.

ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದವಿಭೂಷಣವನ್ನು ಪಡೆದ ರತನ್ ಟಾಟಾ ಅವರು ಟಾಟಾ ಟ್ರಸ್ಟ್ನ ಅಧ್ಯಕ್ಷರಾಗಿದ್ದರು. ರತನ್ ಟಾಟಾ ಅವರ ಭೌತಿಕ ಉಪಸ್ಥಿತಿಯನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ಅವರು ನಮ ಹೃದಯ ಮತ್ತು ಮನಸ್ಸಿನಲ್ಲಿ ಎಂದಿಗೂ ಶಾಶ್ವತ ಎಂದು ಭಾವನಾತಕವಾಗಿ ಟಾಟಾ ಸಮೂಹದ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಹೇಳಿದ್ದಾರೆ.

ಗಣ್ಯರ ಸಂತಾಪ :
ಚಂದ್ರಶೇಖರನ್ರಿಂದ ಸಂತಾಪ: ಟಾಟಾ ಸನ್‌್ಸನ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಟಾಟಾ ಗ್ರೂಪ್ನ ವರಿಷ್ಠರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟಾಟಾ ಗ್ರೂಪ್ಗೆ ಮಾತ್ರವಲ್ಲದೇ ನಮ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ನಿಜವಾದ ಹಾಗೂ ಅಸಾಧಾರಣ ನಾಯಕರಾದ ರತನ್ ನೇವಲ್ ಟಾಟಾ ಅವರಿಗೆ ಭಾರವಾದ ಹೃದಯ ಹಾಗೂ ಭಾವನೆಯೊಂದಿಗೆ ವಿದಾಯ ಹೇಳುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.

ಟಾಟಾ ಗ್ರೂಪ್ಗೆ ಟಾಟಾ ಅವರು ಅಧ್ಯಕ್ಷರಿಗಿಂತ ಹೆಚ್ಚು. ನನಗೆ, ಅವರು ಮಾರ್ಗದರ್ಶಕರಾಗಿದ್ದರು. ಅಷ್ಟೇ ಅಲ್ಲ ಸ್ನೇಹಿತರಾಗಿದ್ದರು. ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯತೆಗೆ ಅಚಲವಾದ ಬದ್ಧತೆಯೊಂದಿಗೆ ಟಾಟಾ ಗ್ರೂಪ್ ಅವರ ಉಸ್ತುವಾರಿಯಲ್ಲಿ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಿಕೊಂಡಿತ್ತು. ಅಷ್ಟೇ ಅಲ್ಲ ಕಂಪನಿ ಯಾವಾಗಲೂ ತಮ ನೈತಿಕ ದಿಕ್ಸೂಚಿಗೆ ಬದ್ಧವಾಗಿದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.

ರತನ್ ಅವರ ತತ್ವಗಳ ಅಡಿ ಕೆಲಸ ಮುಂದುವರೆಯುತ್ತೆ: ಲೋಕೋಪಕಾರ ಮತ್ತು ಸಮಾಜದ ಅಭಿವೃದ್ಧಿಗೆ ಟಾಟಾ ಅವರ ಸಮರ್ಪಣೆ ಕೋಟ್ಯಂತರ ಜನರ ಜೀವನವನ್ನು ಮುಟ್ಟಿದೆ. ಶಿಕ್ಷಣದಿಂದ ಆರೋಗ್ಯದವರೆಗೆ ಅವರು ತೆಗೆದುಕೊಂಡ ಉಪಕ್ರಮಗಳು ಸಮಾಜದಲ್ಲಿ ತಮದೇ ಛಾಪನ್ನು ಮೂಡಿಸಿವೆ. ಮುಂದಿನ ಪೀಳಿಗೆಗೆ ಅವರ ಆದರ್ಶಗಳು ಮುಂದುವರೆಯುತ್ತವೆ ಎಂದಿದ್ದಾರೆ.

ಇಡೀ ಟಾಟಾ ಕುಟುಂಬದ ಪರವಾಗಿ ನಾನು ಅವರ ಪ್ರೀತಿಪಾತ್ರರಿಗೆ ನಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರು ಉತ್ಸಾಹದಿಂದ ಪ್ರತಿಪಾದಿಸಿದ ತತ್ವಗಳನ್ನು ಎತ್ತಿಹಿಡಿಯಲು ನಾವು ಶ್ರಮಿಸುತ್ತಿರುವಾಗ ಅವರ ಪರಂಪರೆಯು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಟಾಟಾ ಸನ್‌್ಸನ ಅಧ್ಯಕ್ಷ ಎನ್.ಚಂದ್ರಶೇಖರನ್ ತಿಳಿಸಿದ್ದಾರೆ.

RELATED ARTICLES

Latest News