Wednesday, October 23, 2024
Homeರಾಜಕೀಯ | Politicsಸಿಎಂ ಭೇಟಿಯಾದ ಸಿ.ಪಿ.ಯೋಗೇಶ್ವರ್‌, ಆಪರೇಷನ್ 'ಸೈನಿಕ' ಯಸಸ್ವಿ

ಸಿಎಂ ಭೇಟಿಯಾದ ಸಿ.ಪಿ.ಯೋಗೇಶ್ವರ್‌, ಆಪರೇಷನ್ ‘ಸೈನಿಕ’ ಯಸಸ್ವಿ

CP Yogeshwar Meet CM Siddaramaiah

ಬೆಂಗಳೂರು,ಅ.23- ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಗೃಹಕಚೇರಿ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಿ.ಪಿ.ಯೋಗೇಶ್ವರ್‌ ಅವರ ಮನವೊಲಿಸಿ ಕಾಂಗ್ರೆಸ್‌‍ ಪಾಳೆಯದತ್ತ ಕರೆತರಲು ದೊಡ್ಡ ದಂಡೇ ಬಿರುಸಿನ ಕಾರ್ಯಾಚರಣೆ ನಡೆಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರ ಮಾರ್ಗದರ್ಶನದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್‌, ಸಚಿವರಾದ ಚೆಲುವರಾಯಸ್ವಾಮಿ, ಜಮೀರ್‌ ಅಹಮದ್‌ ಖಾನ್‌, ಮಂಡ್ಯದ ಶಾಸಕ ಉದಯ್‌ ಬಿರುಸಿನ ಕಾರ್ಯಾಚರಣೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ, ಶಾಸಕರೂ ಆಗಿರುವ ಮುಖ್ಯಮಂತ್ರಿಗಳ ಸಲಹೆಗಾರ ಎ.ಎಸ್‌‍.ಪೊನ್ನಣ್ಣ ತೆರೆಮರೆಯಲ್ಲಿ ಮಾತುಕತೆ ನಡೆಸಿದರು.

ಇಂದು ಬೆಳಿಗ್ಗೆ ಡಿ.ಕೆ.ಶಿವಕುಮಾರ್‌ರವರ ಮನೆಗೆ ಸಿ.ಪಿ.ಯೋಗೇಶ್ವರ್‌ ಆಗಮಿಸಿದರು. ಅಲ್ಲಿಂದ ಒಂದೇ ಕಾರಿನಲ್ಲಿ ಸಿ.ಪಿ.ಯೋಗೇಶ್ವರ್‌ರವರನ್ನು ಕೂರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೆರಳಿದರು. ಅಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾದ ಬಳಿಕ ಸಿ.ಪಿ.ಯೋಗೇಶ್ವರ್‌ ಕಾಲಿಗೆ ಬಿದ್ದು, ಕೈ ಕುಲುಕಿ ಆಶೀರ್ವಾದ ಪಡೆದುಕೊಂಡರು.

ಸಿ.ಪಿ.ಯೋಗೇಶ್ವರ್‌ರವರನ್ನು ಸೆಳೆಯಲು ಸಮಾಜವಾದಿ ಪಕ್ಷ, ಬಿಎಸ್‌‍ಪಿ ಹರಸಾಹಸ ನಡೆಸಿದ್ದರು. ಬಿಜೆಪಿ ನಾಯಕರು ಕೂಡ ತಮ ಪಕ್ಷದಲ್ಲೇ ಉಳಿಸಿಕೊಳ್ಳಲು ನಾನಾ ರೀತಿಯ ತಂತ್ರಗಾರಿಕೆ ನಡೆಸಿದ್ದರು. ಆದರೆ ಇದೆಲ್ಲದಕ್ಕೂ ಮೀರಿ ಡಿ.ಕೆ.ಶಿವಕುಮಾರ್‌ ರಣಬಲೆಯನ್ನೇ ಹೆಣೆದಿದ್ದರು.

ಈ ಮೊದಲು ವಿಧಾನಸಭೆಯ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ರವರನ್ನು ಕಾಂಗ್ರೆಸ್‌‍ಗೆ ಸೆಳೆದುಕೊಳ್ಳಲು ಇದೇ ರೀತಿಯ ರಣತಂತ್ರ ರೂಪಿಸಲಾಗಿತ್ತು. ಬಿಜೆಪಿಯ ಲಕ್ಷ್ಮಣ್‌ ಸವದಿಯವರನ್ನು ಕೂಡ ಕರೆತರಲು ಅಷ್ಟೇ ಚುರುಕಿನ ಕಾರ್ಯಾಚರಣೆ ನಡೆಸಿದ್ದರು. ಕೊನೆ ಕ್ಷಣದವರೆಗೂ ಗುಟ್ಟು ಬಿಟ್ಟುಕೊಡದೆ ನಮಗೂ, ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುವ ಮೂಲಕ ತಮ ಗುರಿಯನ್ನು ಸಾಧಿಸುವಲ್ಲಿ ಡಿ.ಕೆ.ಶಿವಕುಮಾರ್‌ ಯಶಸ್ವಿಯಾಗಿದ್ದಾರೆ.

ಮೊನ್ನೆಯಿಂದಲೂ ಸಿ.ಪಿ.ಯೋಗೇಶ್ವರ್‌ರವರ ಬೆನ್ನತ್ತಿದ್ದ ಕಾಂಗ್ರೆಸ್‌‍ ನಾಯಕರು ಹೋದಲ್ಲಿ, ಬಂದಲೆಲ್ಲಾ ತಮದೇ ಆದ ಗುಪ್ತದಳದ ಮೂಲಕ ಮಾಹಿತಿ ಸಂಗ್ರಹಿಸಿ ಸಿ.ಪಿ.ಯೋಗೇಶ್ವರ್‌ರವರ ಜೊತೆ ನಿರಂತರ ಸಂಪರ್ಕ ಸಾಧಿಸಿದ್ದರು.

ಡಿ.ಕೆ.ಸುರೇಶ್‌ ಹಾಗೂ ಸಿ.ಪಿ.ಯೋಗೇಶ್ವರ್‌ರವರು ಕೆಲ ದಿನಗಳ ಹಿಂದೆ ಪರಸ್ಪರ ಕಟು ಟೀಕೆಗಳನ್ನು ಮಾಡಿಕೊಂಡಿದ್ದರು. ಅದರ ಹೊರತಾಗಿಯೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ಗೆ ಚನ್ನಪಟ್ಟಣದಲ್ಲಿ 80 ಸಾವಿರ ಮತಗಳು ಬಿದ್ದಿದ್ದವು. ಮೇಲ್ನೋಟಕ್ಕೆ ಇದು ಯೋಗೇಶ್ವರ್‌ ಬಿಜೆಪಿಯಲ್ಲಿದ್ದು, ಜೆಡಿಎಸ್‌‍ ಪರವಾಗಿ ಕೆಲಸ ಮಾಡಿದಂತೆ ಕಂಡುಬಂದರೂ ಒಳಗೊಳಗೇ ಕಾಂಗ್ರೆಸ್‌‍ಗೆ ತಮ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ ಎಂಬಂತಾಗಿತ್ತು.

ಕೌಟುಂಬಿಕ ಕಲಹಕ್ಕಾಗಿ ಯೋಗೇಶ್ವರ್‌ರವರ ಪುತ್ರಿ ನಿಶಾ ಕೆಲ ದಿನಗಳ ಹಿಂದೆ ಡಿ.ಕೆ.ಶಿವಕುಮಾರ್‌ರವರನ್ನು ಭೇಟಿ ಮಾಡಿ ತಂದೆಯ ವಿರುದ್ಧ ದೂರು ನೀಡಿದ್ದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್‌‍ ನಾಯಕಿಯಾಗಿ ತಂದೆಯ ವಿರುದ್ಧ ರಾಜಕಾರಣ ಮಾಡಲು ನಿಶಾ ಸಿದ್ಧರಾಗಿದ್ದರು. ಆದರೆ ರಾಜಕೀಯಕ್ಕಾಗಿ ತಾವು ಕುಟುಂಬವನ್ನು ಒಡೆಯುವುದಿಲ್ಲ ಎಂದು ಹೇಳಿದ್ದ ಡಿ.ಕೆ.ಶಿವಕುಮಾರ್‌ ಅವರು ನಿಶಾ ಅವರನ್ನು ಸಿ.ಪಿ.ಯೋಗೇಶ್ವರ್‌ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ನಿರಾಕರಿಸಿದ್ದರು.

ಕಳೆದ ಆ.15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು. ಆ ಕಾರ್ಯಕ್ರಮದಲ್ಲಿ ಸಿ.ಪಿ.ಯೋಗೇಶ್ವರ್‌ರವರು ಡಿ.ಕೆ.ಶಿವಕುಮಾರ್‌ರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಕುತೂಹಲ ಕೆರಳಿಸಿದ್ದರು. ಆಗಲೇ ಸಿ.ಪಿ.ಯೋಗೇಶ್ವರ್‌ರವರು ಕಾಂಗ್ರೆಸ್‌‍ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳು ಕೇಳಿಬಂದಿದ್ದವು.
ಆದರೆ ಮೊದಲಿನಿಂದಲೂ ಎಲ್ಲವನ್ನೂ ತಳ್ಳಿಹಾಕುತ್ತಾ ಬಂದಿದ್ದ ಸಿ.ಪಿ.ಯೋಗೇಶ್ವರ್‌ ಇಂದು ಕೊನೆಗೂ ಕೈ ಹಿಡಿದಿದ್ದಾರೆ.

RELATED ARTICLES

Latest News