Wednesday, October 23, 2024
Homeಜಿಲ್ಲಾ ಸುದ್ದಿಗಳು | District Newsದಾವಣಗೆರೆ ಟಿ.ತುಂಬಿಗೇರೆ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 5 ಮಂದಿ ಸಾವು..!

ದಾವಣಗೆರೆ ಟಿ.ತುಂಬಿಗೇರೆ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 5 ಮಂದಿ ಸಾವು..!

suspected consumption of contaminated water, 5 people died

ದಾವಣಗೆರೆ, ಅ.23- ಕಲುಷಿತ ನೀರು ಸೇವಿಸಿ ಟಿ ತುಂಬಿಗೇರೆ ಗ್ರಾಮದಲ್ಲಿ 50ಕ್ಕೂ ಹೆಚ್ಚು ಜನರು ವಾಂತಿ-ಭೇದಿಯಿಂದ ಬಳಲುತ್ತಿದ್ದು, ಕಳೆದ ಮೂರು ದಿನಗಳಿಂದ ನವಜಾತ ಶಿಶು ಸೇರಿದಂತೆ ಐವರು ಸಾವನ್ನಪ್ಪಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

ವಿಜಯನಗರದ ಹರಪ್ಪನಹಳ್ಳಿ ತಾಲೂಕಿನ ತುಂಬಿಗೆರೆ ಗ್ರಾಮದ ಸುರೇಶ್(30), ಮಹಾಂತೇಶ್(45), ಗೌರಮ(60), ಹನುಮಂತಪ್ಪ(38) ಹಾಗೂ 8 ತಿಂಗಳ ಗಂಡು ಮಗು ಮೃತಪಟ್ಟಿದೆ. ಗ್ರಾಮದ 50ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ನರಳುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ದಿನ ಇಬ್ಬರು ಮೃತಪಟ್ಟಿದ್ದು, ಕಳೆದ ವಾರ ಮೂವರು ಸಾವನ್ನಪ್ಪಿದ್ದಾರೆ. ಈ ಸರಣಿ ಸಾವಿನಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಒಂದು ಕಡೆ ಕಲುಷಿತ ನೀರು ಸೇವನೆಯಿಂದ ಗರ್ಭಿಣಿ ನಿಂಗಮ ಎಂಬುವರಿಗೆ ವಾಂತಿ- ಭೇದಿ ಕಾಣಿಸಿಕೊಂಡಿದ್ದು ಹೆರಿಗೆ ವೇಳೆ ಜನ ನೀಡಿದ ಗಂಡು ಮಗು ಮೃತಪಟ್ಟಿದೆ. ಗ್ರಾಮಕ್ಕೆ ಸರಬರಾಜಾಗುವ ನೀರು ಕಲುಷಿತವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅಧಿಕಾರಿಗಳು ಈ ಕೂಡಲೇ ಈ ಬಗ್ಗೆ ಗಮನಹರಿಸದಿದ್ದರೆ ಇನ್ನಷ್ಟು ಸಾವು-ನೋವುಗಳಾಗುವ ಸಂಭವವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕಲುಷಿತ ನೀರು ಸೇವನೆಯಿಂದ ಈ ದುರ್ಘಟನೆ ಸಂಭವಿಸಿದೆಯೇ ಅಥವಾ ಅವರಿಗೆ ಬೇರೆ ಯಾವುದಾದರೂ ಆರೋಗ್ಯ ಸಮಸ್ಯೆ ಇತ್ತೇ ಎಂಬ ಬಗ್ಗೆ ಆರೋಗ್ಯ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

RELATED ARTICLES

Latest News