Sunday, January 25, 2026
Homeರಾಜ್ಯಕಾಂಗ್ರೆಸ್‌‍ ಪಾಲಿಗೆ ಬ್ರಹಾಸ್ತ್ರವಾದ 400 ಕೋಟಿ ರೂ. ಹಣವಿದ್ದ ಕಂಟೈನರ್ ಹೈಜಾಕ್ ಪ್ರಕರಣ

ಕಾಂಗ್ರೆಸ್‌‍ ಪಾಲಿಗೆ ಬ್ರಹಾಸ್ತ್ರವಾದ 400 ಕೋಟಿ ರೂ. ಹಣವಿದ್ದ ಕಂಟೈನರ್ ಹೈಜಾಕ್ ಪ್ರಕರಣ

new weapon for the Congress party is the container hijack case

ಬೆಂಗಳೂರು, ಜ.25- ಜನರ ತೆರಿಗೆ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿ ವಿವಿಧ ರಾಜ್ಯಗಳ ಚುನಾವಣೆಗೆ ಬಳಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಳಿ ಬರುತ್ತಿದ್ದ ಆರೋಪಕ್ಕೆ ಪ್ರತಿಯಾಗಿ ಬೆಳಗಾವಿಯ ಖಾನಾಪುರದ ಬಳಿ ದರೋಡೆಯಾಗಿರುವ ಬಾರಿ ಪ್ರಮಾಣದ ನಗದು ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಸ್ತ್ರ ನೀಡಿದಂತಾಗಿದೆ.

ಬಿಜೆಪಿಯ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ದೆಹಲಿಯ ಹೈಕಮಾಂಡ್ ನ ಎಟಿಎಂ ಎಂದು ಪದೇಪದೇ ಟೀಕೆ ಮಾಡುತ್ತಿದ್ದರು. ಇದನ್ನು ಕಾಂಗ್ರೆಸ್ಸಿನ ನಾಯಕರು ಬಲವಾಗಿ ತಳ್ಳಿ ಹಾಕುವ ಪ್ರಯತ್ನ ಮಾಡಿದ್ದು ಹೆಚ್ಚಾಗಿ ಕಂಡುಬಂದಿಲ್ಲ. ಆದರೆ ಜನರ ಮನಸ್ಸಿನಲ್ಲಂತೂ ರಾಷ್ಟ್ರೀಯ ಕಾಂಗ್ರೆಸ್ ಗೆ ಕರ್ನಾಟಕ ಸರ್ಕಾರ ಹಣ ರವಾನೆ ಮಾಡುತ್ತಿದೆ ಎಂಬ ಅಭಿಪ್ರಾಯ ಬಲವಾಗಿ ಬೇರೂರಿದೆ. ಅದಕ್ಕೆ ತಕ್ಕ ಹಾಗೆ ವಾಲ್ಮೀಕಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣ, ಗೃಹಲಕ್ಷ್ಮಿ ಕಂತು ಬಿಡುಗಡೆಯಾಗದೇ ಇರುವುದು, ಅಬಕಾರಿ ಇಲಾಖೆಯಲ್ಲಿ ಪರವಾನಿಗೆ ನೀಡಲು ಚಾಲ್ತಿಯಲ್ಲಿದ್ದ ಲಂಚದ ಮೊತ್ತ ಏಕಾಏಕಿ ನೂರಾರುಪಟ್ಟು ಹೆಚ್ಚಾಗಿರುವುದು, ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ದರ 10 ರಿಂದ 100 ಪಟ್ಟು ಏರಿಕೆಯಾಗಿರುವುದು ಸೇರಿದಂತೆ ಸಾಲು ಸಾಲು ಆರೋಪಗಳು ಕಂಡು ಬಂದಿವೆ.

ಜೊತೆಗೆ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಹಲವು ರೀತಿಯ ತೆರಿಗೆಗಳನ್ನು ಹಾಕಿ ಜನರು ಬೇಸತ್ತು ಹೋಗುವಂತೆ ಮಾಡಿದೆ. ಈ ಎಲ್ಲಾ ಹಣವನ್ನು ಬೇರೆ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಖರ್ಚು ಮಾಡಲು ಕಾಂಗ್ರೆಸ್ ಪಕ್ಷಕ್ಕೆ ರವಾನಿಸಲಾಗುತ್ತಿದೆ ಎಂಬುದು ಬಿಜೆಪಿ- ಜೆಡಿಎಸ್ಸಿನ ಪ್ರಮುಖ ಆಪಾದನೆ. ಕಾಂಗ್ರೆಸ್ಸಿಗರು ಈ ಆಪಾದನೆಯನ್ನು ಕೇಳಿಯು ಕೇಳಿಸದಂತಿದ್ದರು. ಈಗ ಗೋವಾದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸುಮಾರು ನಾಲ್ಕು ನೂರು ಕೋಟಿ ರೂಪಾಯಿ ನಗದು ಎರಡು ಕಂಟೈನರ್ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಅದು ಕರ್ನಾಟಕ ರಾಜ್ಯದ ಬೆಳಗಾವಿಯ ಗಡಿ ಪ್ರವೇಶ ಪ್ರವೇಶಿಸುತ್ತಿದ್ದಂತೆ ಲೂಟಿಯಾಗಿದೆ.

ಅದರಲ್ಲೂ ಚಾರ್ಲ ಘಾಟ್ ಎಂಬ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಇಲ್ಲದಿರುವ ಮತ್ತು ಜಿಪಿಎಸ್ ಕೂಡ ಆಕ್ಟಿವ್ ಆಗದಂತಹ ನಿರ್ಗಮ ಪ್ರದೇಶವನ್ನು ಹೊಂಚು ಹಾಕಿ ಹಣ ದರೋಡೆ ಮಾಡಲಾಗಿದೆ. ಆ ಸ್ಥಳದಿಂದ ಹೊರಬಂದು ಸಂಪರ್ಕ ಕಲ್ಪಿಸಿಕೊಳ್ಳಲು ಕನಿಷ್ಠ 3 ಕಾಲಾವಕಾಶ ಬೇಕು. ಇದನ್ನು ಯೋಜಿತವಾಗಿ ಲೆಕ್ಕ ಹಾಕಿ ದರೋಡೆ ಮಾಡಲಾಗಿದೆ.

ಕಂಟೇನರ್ ಗಳಲ್ಲಿ 400 ಕೋಟಿಯಷ್ಟೇ, ಅಲ್ಲ ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಗದು ಇತ್ತು ಎಂದು ಪ್ರಕರಣದ ಕೇಂದ್ರ ಬಿಂದು ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಆತನ ಅಪಹರಣ ಹಾಗೂ ಕಿರುಕುಳದಿಂದಾಗಿ ದೇಶದಲ್ಲಿ ಅತಿ ದೊಡ್ಡ ದರೋಡೆ ಪ್ರಕರಣ ಬಯಲಿಗೆ ಬಂದಿದೆ. ಮೇಲ್ನೋಟಕ್ಕೆ ಈ ಹಣ ರಿಯಲ್ ಎಸ್ಟೇಟ್ ಉದ್ಯಮಿರಿಗೆ ಸೇರಿದ್ದು ಎಂದು ಹೇಳಲಾಗಿದೆ. ಆತನ ಸ್ನೇಹಿತರ ಆಗಿರುವ ಸಂದೀಪ್ ಪಾಟೀಲ್ ನನ್ನು ಅಪಹರಣ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದರಿಂದಾಗಿ ಹಣ ಲೂಟಿ ಯಾಗಿರುವ ವಿಚಾರ ಬಹಿರಂಗವಾಗಿದೆ. ಇಲ್ಲದೆ ಹೋಗಿದ್ದರೆ ಸದ್ದಿಲ್ಲದಂತೆ ಮುಚ್ಚಿ ಹೋಗುವ ಸಾಧ್ಯತೆಯಿತ್ತು. ಈಗಲೂ ಪ್ರಕರಣವನ್ನು ಮುಚ್ಚಿ ಹಾಕುವ ನಾನಾ ರೀತಿಯ ಪ್ರಯತ್ನಗಳನ್ನು ಮಹಾರಾಷ್ಟ್ರ ಸರ್ಕಾರ ನಡೆಸಿದೆ ಎಂದು ಹೇಳಲಾಗಿದೆ. ಉದ್ಯಮಿ ಸಂದೀಪ್ ಪಾಟೀಲ್ ಸೆಲ್ಫಿ ವಿಡಿಯೋ ಮಾಡಿ ಒಂದೊಂದೇ ವಿಚಾರಗಳನ್ನು ಹೊರ ಹಾಕುತ್ತಿರುವುದರಿಂದ, ಪ್ರಕರಣ ಮುಚ್ಚಿ ಹಾಕಲಾಗದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿ, ತನಿಖೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ದರೋಡೆಯಾಗಿರುವುದು ಕರ್ನಾಟಕದ ಖಾನಾಪುರದ ಬಳಿ. ಆದರೆ ವಿಷಯ ಬಹಿರಂಗವಾಗಿರುವುದು ಮಹಾರಾಷ್ಟ್ರದಲ್ಲಿ ತನಿಖೆ ಯಾರು ಮಾಡಬೇಕು ಎಂಬುದೇ ಗೊಂದಲಮಯವಾಗಿದೆ. ಬೆಳಗಾವಿಯ ಪೊಲೀಸರು ಮಹಾರಾಷ್ಟ್ರದ ನಾಸಿಕ್ ಗೆ ತೆರಳಿ, ಅಲ್ಲಿನ ಪೊಲೀಸರಿಂದ ಮಾಹಿತಿ ಪಡೆಯಲು ಸತತ ಪ್ರಯತ್ನ ನಡೆಸಿದ್ದಾರೆ. ಆದರೆ ಅಲ್ಲಿನ ಪೊಲೀಸರು ಯಾವುದೇ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಅಪಹರಣಕ್ಕೆ ಒಳಗಾದ ಸಂದೀಪ್ ಪಾಟೀಲ್ ನಾಸಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಅದನ್ನು ಆದರಿಸಿ ಐದು ಮಂದಿಯನ್ನು ಬಂಧಿಸಲಾಗಿದೆ ದೂರು ನೀಡಿದವರು ಮತ್ತು ಆರೋಪಿಗಳನ್ನು ನಡೆಸಲು ಕರ್ನಾಟಕದ ಪೊಲೀಸರಿಗೆ ಮಹಾರಾಷ್ಟ್ರದ ಪೋಲಿಸರು ಸಹಕರಿಸುತ್ತಿಲ್ಲ ಎನ್ನಲಾಗುತ್ತಿದೆ.

ಹಣವನ್ನು ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರವಾನೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ ಗೋವಾ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳಲ್ಲೂ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 400 ರಿಂದ 1000 ಕೋಟಿ ರೂಪಾಯಿ ಹಣ ಸಾಗಿಸಲಾಗಿದೆ ಎಂದರೆ ಉಳಿದ ಚುನಾವಣೆಗೆ ಎಷ್ಟೆಲ್ಲಾ ಹಣ ರವಾನೆಯಾಗಿರಬಹುದು ಎಂಬ ಚರ್ಚೆಗಳು ನಡೆದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೋಟು ಅಮಾನೀಕರಣಗೊಳಿಸಿ ಜಿಎಸ್‌ಟಿ ಪದ್ಧತಿ ಜಾರಿಗೊಳಿಸಿದ ಬಳಿಕ ಆಕ್ರಮವಾಗಿ ನಗದು ವಹಿವಾಟು ನಡೆಯುತ್ತಿಲ್ಲ ಎಂಬ ವಾದಗಳಿದ್ದವು. ಆದರೆ 400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಗದು ಅದರಲ್ಲೂ ಅಕ್ರಮವಾದ ಹಣ ಪತ್ತೆಯಾಗಿರುವುದು ನೋಟು ಅಮಾನೀಕರಣದ ಸಾರ್ಥಕತೆಯನ್ನು ಪ್ರಶ್ನೆ ಮಾಡುವಂತಹಾಗಿದೆ.

ಕಾಂಗ್ರೆಸ್ಸಿಗರು ತಮ್ಮ ವಿರುದ್ಧ ಕೇಳಿ ಬರುತ್ತಿರುವ ಎಟಿಎಂ ಎಂಬ ಆರೋಪಕ್ಕೆ ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದರು. ಈಗ ಗೋವಾದಿಂದ ಮಹಾರಾಷ್ಟ್ರಕ್ಕೆ ಹಣ ಸಾಗಿಸುತ್ತಿದ್ದದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಂಬ ವಿಚಾರ ಬಿಜೆಪಿ ವಿರುದ್ಧದ ಟೀಕೆಗೆ ಕಾಂಗ್ರೆಸ್ ಗೆ ಬ್ರಹ್ಮಾಸ್ತ್ರ ಸಿಕ್ಕಿದಂತಾಗಿದೆ. ಅದರಲ್ಲೂ ರಾಜ್ಯದಲ್ಲೇ ದರೋಡೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಚುರುಕಾಗಿದ್ದಾರೆ. ತನಿಖೆಯನ್ನು ಬಿರುಸುಗೊಳಿಸಿ ಹಣದ ಮೂಲ ಮತ್ತು ಉದ್ದೇಶವನ್ನು ಬಹಿರಂಗಪಡಿಸಬೇಕು. ಈ ಮೂಲಕ ಬಿಜೆಪಿಗೆ ಟಕ್ಕರ್ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಇಂದಷ್ಟೆ ಹೊಸದಾಗಿ ಪ್ರಕರಣ ಬಯಲಿಗೆ ಬಂದಿದ್ದರಿಂದ ಕಾಂಗ್ರೆಸ್ ನಲ್ಲಿ ಚರ್ಚೆಗಳು ಗುಸುಗುಸು ಹೆಚ್ಚಾಗಿವೆ.

RELATED ARTICLES

Latest News