ಬೆಂಗಳೂರು,ಫೆ.1- ಮುಖ್ಯಮಂತ್ರಿ ಸಲಹೆಗಾರರ ಹುದ್ದೆಗೆ ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಯ ಮುನ್ಸೂಚನೆ ದೊರೆತಿದೆ.
ಬಿ.ಆರ್.ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಳೆಯ ಸ್ನೇಹಿತ ಹಾಗೂ ಪರಮಾಪ್ತರಲ್ಲಿ ಒಬ್ಬರು. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಪ್ರಿಯಾಂಕ ಖರ್ಗೆ ಹಾಗೂ ಶರಣಪ್ರಕಾಶ್ ಪಾಟೀಲ್ ಕಲಬುರಗಿ ಜಿಲ್ಲೆಯಿಂದ ಅಡ್ಡಲಾಗಿದ್ದರು.
ಹೀಗಾಗಿ ಬಿ.ಆರ್.ಪಾಟೀಲ್ ಹಲವು ಬಾರಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದರು. ಇದೇ ರೀತಿ ಕಾಂಗ್ರೆಸ್ನಲ್ಲಿ ಬಸವರಾಜರಾಯ ರೆಡ್ಡಿ ಕೂಡ ಹಲವು ಬಾರಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಿದ್ದರು.
ಈ ಇಬ್ಬರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಸವರಾಜರಾಯರೆಡ್ಡಿ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ, ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದರು. ಆದರೆ ಬಿ.ಆರ್.ಪಾಟೀಲ್ ರಾಜ್ಯ ಹಾಗೂ ಜಿಲ್ಲಾ ರಾಜಕಾರಣದಿಂದ ಬೇಸತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.