ಬೆಂಗಳೂರು, ಫೆ 1- ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಅನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟವು ಸ್ವಾಗತಿಸಿದೆ.ಈ ಭಾರಿಯ 2025-26 ಕೇಂದ್ರ ಬಜೆಟ್ ಉತ್ತಮ ಮತ್ತು ಒಳ್ಳೆಯಅಂಶಗಳಿವೆ ಎಂದು ಬಣ್ಣಿಸಿರುವ ಎಫ್ಕೆಸಿಸಿಐ ಅಧ್ಯಕ್ಷ ಎಂ ಜಿ ಬಾಲಕೃಷ್ಣ, ಮೂಲದಲ್ಲಿ ತೆರಿಗೆ ಸಂಗ್ರಹವನ್ನು ತೆಗೆದುಹಾಕುವ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಜೆಟ್ ತುಂಬಾ ಚೆನ್ನಾಗಿದೆ. ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಮತ್ತು ಮೂಲದಲ್ಲಿ ತೆರಿಗೆ ಸಂಗ್ರಹ (ಟಿಸಿಎಸ್) ನಂತಹ ಕೆಲವು ನಿರ್ದಿಷ್ಟ ವಿಷಯಗಳನ್ನು ನಾವು ಕೇಳಿದ್ದೇವೆ. ಸರ್ಕಾರ ಅದನ್ನು ಪರಿಗಣಿಸಿದೆ. ಅವರು ಟಿಸಿಎಸ್ ಅನ್ನು ತೆಗೆದುಹಾಕಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.
ಬಜೆಟ್ ವಾರ್ಷಿಕ 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗದವರಿಗೆ ಅನುಕೂಲಕರವಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಉತ್ಪಾದನಾ ವಲಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಕೇಂದ್ರವು ಎಂಎಸ್ಎಂಇಯನ್ನು ಅವುಗಳ ವಹಿವಾಟು ಮತ್ತು ಹೂಡಿಕೆಯ ವಿಷಯದಲ್ಲಿ ಮರು ವ್ಯಾಖ್ಯಾನಿಸಿದೆ ಎಂದು ಹೇಳಿದರು.
ವಿವಿಧ ಕೈಗಾರಿಕೆಗಳು ಆಮದು ಮಾಡಿಕೊಳ್ಳುವ ಕೆಲವು ವಸ್ತುಗಳು ಮತ್ತು ಕೆಲವು ಔಷಧಗಳಿಗೆ ಕಸ್ಟಮ್ಸೌಸುಂಕದಿಂದ ವಿನಾಯಿತಿ ನೀಡಲಾಗಿದೆ ,ಇದು ಉತ್ಪಾದನಾ ವಲಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.ಸಾಲ ಮತ್ತು ಉಪಕರಣಗಳಿಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಕೃಷಿಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ಕೆಂದ್ರ ಬಜೆಟ್ ಸ್ವಾಗತಾರ್ಹ ಎಂದು ತಿಳಿಸಿದರು