ಬೆಂಗಳೂರು,ಫೆ.3- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ)ವು ಅಳವಡಿಸಿಕೊಂಡಿರುವ ಅಭಿವೃದ್ಧಿಗೆ ಪೂರಕವಾದ ಉಪಕ್ರಮಗಳ ಬಗ್ಗೆ ಮಹಾರಾಷ್ಟ್ರ ಸಾರಿಗೆ ಇಲಾಖೆಯು ಮೆಚ್ಚುಗೆ ವ್ಯಕ್ತಪಡಿಸಿದೆ.
ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವರಾದ ಪ್ರತಾಪ್ ಸರ್ನಾಯಕ್, ಎಂಎಸ್ಆರ್ಟಿಸಿ ಉಪಾಧ್ಯಕ್ಷ ಮಾಧವ್ ಕುಸೆಕರ್ ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡ ನಗರದ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿ ನಿಗಮದಲ್ಲಿನ ಪ್ರತಿಷ್ಠಿತ ಬಸ್ಸುಗಳ ಕಾರ್ಯಾಚರಣೆ , ಪುನಶ್ಚೇತನ, ನವೀಕರಣ, ಇ-ಟಿಕೆಟ್, ಕಾರ್ಗೊ ಸೇವೆ, ಕಾರ್ಮಿಕರ ಕಲ್ಯಾಣ ಉಪಕ್ರಮ, ಆರೋಗ್ಯ ವಿಮೆ, ಅಪಘಾತ ವಿಮೆ ಸೇರಿದಂತೆ ಹಲವು ಉಪಕ್ರಮಗಳ ಬಗ್ಗೆ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ನಿಗಮದ ಉಪಾಧ್ಯಕ್ಷ ರಿಜ್ವಾನ್ ನವಾಬ್ ಹಾಗೂ ನಿಗಮದ ವಿವಿಧ ವಿಭಾಗಗಳ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ನಂತರ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ 2ಕ್ಕೆ ಭೇಟಿ ನೀಡಿ ಐರಾವತ ಕ್ಲಬ್ ಕ್ಲಾಸ್, ಐರಾವತ ಕ್ಲಬ್ ಕ್ಲಾಸ್ 2.0, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಸ್ಕೈ ಬಸ್, ಅಶ್ವಮೇಧ, ರಾಜಹಂಸ, ನಗರ ಸಾರಿಗೆ ಸೇರಿದಂತೆ ಇತರೆ ವಾಹನಗಳನ್ನು ವೀಕ್ಷಿಸಿದರು.
ಘಟಕ ಹಾಗೂ ಕಾರ್ಯಾಗಾರ ನಿರ್ವಹಣೆ, ವಾಹನಗಳ ಪುನಶ್ಚೇತನ ಕಾರ್ಯ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರನ್ನು ಅಭಿನಂದಿಸಿದರು.
ಈ ವೇಳೆ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.