ಶಿವಮೊಗ್ಗ,ಫೆ.3– ರಾಜ್ಯ ಬಿಜೆಪಿ ಅಧ್ಯಕ್ಷ ಯಾರೆಂಬುದು ಒಂದು ವಾರದಲ್ಲಿ ತಿಳಿಯಲಿದ್ದು, ವರಿಷ್ಠರು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕೆ ಬೇಡವೇ ಎಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ. ಒಂದು ವಾರದಲ್ಲಿ ಬಿಜೆಪಿಗೆ ಹೊಸ ಸಾರಥಿ ಯಾರಾಗಲಿದ್ದಾರೆ ಎಂಬುದು ಗೊತ್ತಾಗಲಿದೆ. ವರಿಷ್ಠರಿಂದ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದರು.
ಭಾರತೀಯ ಜನತಾ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಬಹುಶಃ ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ಸಂಘಟನೆಯ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಎಂದರು.
ಮಂಡಲ, ಜಿಲ್ಲಾ, ರಾಜ್ಯಾಧ್ಯಕ್ಷರ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಎಲ್ಲವು ಸಹ ವ್ಯವಸ್ಥಿತವಾಗಿ ನಮ್ಮ ಕೇಂದ್ರೀಯ ವರಿಷ್ಠರು ನಿರ್ಧಾರ ಮಾಡಿದಂತೆ ನಡೆಯುತ್ತದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಮ ಪಕ್ಷದ ಹಿರಿಯರು, ಕಾರ್ಯಕರ್ತರು ಒಟ್ಟಾಗಿ ಈ ಭ್ರಷ್ಟ, ದುಷ್ಟ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನನ್ನ ಕಳೆದ ಒಂದು ವರ್ಷದ ಅವಧಿ ನಾನು ಯಾವ ರೀತಿಯಲ್ಲಿ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆಂದು ರಾಜ್ಯದ ಜನತೆಗೆ, ಕಾರ್ಯಕರ್ತರಿಗೆ, ನಮ ಪಕ್ಷದ ಹಿರಿಯರಿಗೆ, ಶಾಸಕರಿಗೆ ತಿಳಿದಿದೆ. ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಪಕ್ಷದ ಅಧ್ಯಕ್ಷನಾಗಿ ಮುಂದುವರೆಯುತ್ತನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿಯ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಹೆಚ್ಚಿನ ಪೈಪೋಟಿ ಇತ್ತು. ಅದೇ ರೀತಿ ರಾಜ್ಯಾಧ್ಯಕ್ಷರ ಚುನಾವಣೆಗೂ ಸಹ ಪಕ್ಷದ ಹಿರಿಯರು ಅವರ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲವನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ, ಎಲ್ಲವೂ ಒಳ್ಳೆಯದಾಗುತ್ತದೆ. ಸುಖಾಂತ್ಯವಾಗುತ್ತದೆ ಎಂಬ ನಂಬಿಕೆ ಇದೆ ಎಂದರು.
ನಾನು ಕಳೆದ ಒಂದು ವರ್ಷದಿಂದ ಯಾರ ವಿರುದ್ಧ ಹಾಗೂ ಪಕ್ಷದ ವಿರುದ್ಧ ಹೇಳಿಕೆ ನೀಡಿಲ್ಲ. ಹಾಗಾಗಿ ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯದ ಅರಿವು ಇದೆ. ದೊಡ್ಡ ಜವಾಬ್ದಾರಿಯನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ. ಹೀಗಾಗಿ 1-8 ದಿನದಲ್ಲಿ ರಾಜ್ಯಾಧ್ಯಕ್ಷರು ಯಾರು ಅಂತ ಉತ್ತರ ಸಿಗುತ್ತದೆ. ತದನಂತರ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು.
ಈ ವೇಳೆ ಎಂಎಲ್ಸಿಗಳಾದ ಡಿ.ಎಸ್.ಅರುಣ್ ಹಾಗೂ ಧನಂಜ ಸರ್ಜಿ ಹಾಜರಿದ್ದರು.