ಬೆಂಗಳೂರು,-ಫೆ.6- ಬಿಟ್ಕಾಯಿನ್ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಯುವಕಾಂಗ್ರೆಸ್ನ ರಾಜ್ಯ ಅಧ್ಯಕ್ಷ ಮಹಮ್ಮದ್ ನಲಪಾಡ್ಗೆ ವಿಶೇಷ ತನಿಖಾ ದಳ ನೋಟೀಸ್ ನೀಡುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ನಾನಾ ವ್ಯಾಖ್ಯಾನಗಳು ಶುರುವಾಗಿವೆ.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಬಿಟ್ಕಾಯಿನ್ ಹಗರಣವನ್ನು ದೊಡ್ಡ ಪ್ರಮಾಣದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿತ್ತು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರರವರನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ನ ಪ್ರಮುಖ ನಾಯಕರು ಆರೋಪಗಳ ಸುರಿಮಳೆಗೈದಿದ್ದರು.
ವಿಧಾನಸಭಾ ಚುನಾವಣಾ ಪ್ರಚಾರದಲ್ಲೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಉಲ್ಲೇಖಿಸಲು ಬಿಟ್ಕಾಯಿನ್ ಹಗರಣವನ್ನು ಕಾಂಗ್ರೆಸ್ ಬಳಕೆ ಮಾಡಿಕೊಂಡಿತ್ತು. ತಮ್ಮ ಸರ್ಕಾರ ಅ„ಕಾರಕ್ಕೆ ಬಂದರೆ ಬಿಟ್ಕಾಯಿನ್ ಹಗರಣದ ಆರೋಪಿಗಳನ್ನು ಜೈಲಿಗಟ್ಟುವುದಾಗಿಯೂ ಪ್ರಭಾವಿ ನಾಯಕರು ಘೋಷಿಸಿದ್ದರು.
ಹಗರಣದ ಕುರಿತು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತನಿಖೆ ಪೂರ್ಣಗೊಂಡು ಬಿ ರಿಪೊರ್ಟ್ ಸಲ್ಲಿಕೆಯಾಗಿತ್ತು. ಅದರ ಹೊರತಾಗಿಯೂ ಕಾಂಗ್ರೆಸ್ ಸರ್ಕಾರ ಬಿಟ್ಕಾಯಿನ್ ಹಗರಣದ ತನಿಖೆಗಾಗಿ ಎಸ್ಐಟಿಯನ್ನು ರಚಿಸಿತ್ತು. ಎಸ್ಐಟಿ ಅಧಿಕಾರಿಗಳು ಬಿಟ್ಕಾಯಿನ್ ಪ್ರಕರಣ ದಾಖಲಾದಾಗ ವಿಚಾರಣೆ ನಡೆಸಿದ್ದ ಕೆಲ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸಿತ್ತು.
ಮುಂದುವರೆದ ತನಿಖೆಯ ಭಾಗವಾಗಿ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಮರು ವಿಚಾರಣೆಗೊಳಪಡಿಸಿತ್ತು. ಶ್ರೀಕಯ ಸ್ನೇಹಿತ ಎಂದು ಹೇಳಲಾಗುವ ಮಹಮ್ಮದ್ ನಲಪಾಡ್ಗೆ ಎಸ್ಐಟಿ ನೋಟೀಸ್ ಜಾರಿ ಮಾಡಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಮುಜುಗರ ಉಂಟುಮಾಡಿದ್ದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಎಸ್ಐಟಿ ನೋಟೀಸ್ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಅದು ತನಿಖೆಯ ಭಾಗ. ಯಾರನ್ನು ಕರೆಸಬೇಕು, ಯಾರನ್ನು ವಿಚಾರಣೆ ಮಾಡಬೇಕು, ಯಾವ ಮಾಹಿತಿ ಪಡೆಯಬೇಕು ಎಂಬುದನ್ನು ತನಿಖಾ„ಕಾರಿಗಳು ನಿರ್ಧರಿಸುತ್ತಾರೆ. ನಾನು ಆ ಕುರಿತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.
ಒಂದೊಂದು ಹಂತದಲ್ಲಿ ಒಬ್ಬೊಬ್ಬರನ್ನು ಕರೆಸಿ ವಿಚಾರಣೆ ಮಾಡಲಾಗುತ್ತಿದೆ. ಎಲ್ಲದಕ್ಕೂ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಗೃಹಸಚಿವರು ಹೇಳಿದ್ದಾರೆ.ನೋಟೀಸ್ ರವಾನೆಯಾಗುತ್ತಿದ್ದಂತೆ ಮಹಮ್ಮದ್ ನಲಪಾಡ್ ಇಂದು ಉಪಮುಖ್ಯಮಂತ್ರಿ ಹಾಗೂ ತಮ್ಮ ರಾಜಕೀಯ ಗುರು ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಮಹಮ್ಮದ್ ನಲಪಾಡ್ ಅತೀ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ನಲಪಾಡ್ ಮೇಲೆ ಕ್ರಿಮಿನಲ್ ಪ್ರಕರಣ ಇರುವ ಕಾರಣಕ್ಕಾಗಿ ನಲಪಾಡ್ ಅವರ ಆಯ್ಕೆಯನ್ನು ಹೈಕಮಾಂಡ್ ಪರಿಗಣಿಸದೆ ಎರಡನೇ ಸ್ಥಾನದಲ್ಲಿ ಹೆಚ್ಚು ಮತ ಪಡೆದಿದ್ದ ರಕ್ಷ ರಾಮಯ್ಯಅವರನ್ನು ಯುವ ಕಾಂಗ್ರೆಸ್ನ ಅಧ್ಯಕ್ಷರನ್ನಾಗಿ ಘೋಷಿಸಿದ್ದರು.
ಆದರೆ ಜಿದ್ದಿಗೆ ಬಿದ್ದಂತೆ ಡಿ.ಕೆ.ಶಿವಕುಮಾರ್ ರಾಜಿ ಸಂಧಾನ ನಡೆಸಿ ರಕ್ಷ ರಾಮಯ್ಯರವರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹಿಂಪಡೆದು ನಲಪಾಡ್ ಅವರನ್ನು ನೇಮಿಸಿದ್ದರು. ಸ್ಥಾನ ತೊರೆದಿದ್ದಕ್ಕೆ ಪ್ರತಿಯಾಗಿ ರಕ್ಷ ರಾಮಯ್ಯನವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್„ಸಲು ಬಿ ಫಾರಂ ನೀಡಲಾಯಿತು. ಅಲ್ಲಿ ಅವರು ಸೋಲು ಕಂಡರು ಎಂಬುದು ಬೇರೆ ಮಾತು.