ಬೆಂಗಳೂರು, ಫೆ. 11- ದೆಹಲಿಯ ಗೆಲುವು ನಮಗೆ ಮಾದರಿಯಾಗಬೇಕು ಹಾಗೂ ಕರ್ನಾಟಕ ಬಿಜೆಪಿಯ ಒಳಜಗಳ ಮುಗಿದು, ಕಾರ್ಯಪದ್ಧತಿಯಲ್ಲಿ ಸ್ಪಷ್ಟತೆ ಮತ್ತು ಶಿಸ್ತು ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಕರ್ನಾಟಕದ ಜನತೆ ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ. ಆದರೆ ಅವರ ವಿಶ್ವಾಸವನ್ನು ಸಂಪಾದಿಸಲು ಪಕ್ಷದ ಒಳಾಂಗಣವನ್ನು ಶುದ್ಧಗೊಳಿಸಿ, ಬಲಿಷ್ಠಗೊಳಿಸಬೇಕಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಅವರು ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿರುವುದು ಪಕ್ಷದ ಪರಿಶ್ರಮ, ಸಂಘಟನೆ ಮತ್ತು ಜನಪರ ರಾಜಕೀಯದ ಫಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ನಿಶ್ಚಯ, ಅಭಿವೃದ್ಧಿ ಪರ ಅಜೆಂಡಾ ಮತ್ತು ಕೇಂದ್ರ ಸರ್ಕಾರದ ಸಮರ್ಥ ಕಾರ್ಯ ಪದ್ಧತಿ ಜನತೆಯ ವಿಶ್ವಾಸವನ್ನು ಮತ್ತೆ ಗಳಿಸಿತು.
ಪಕ್ಷದ ಬೂತ್ ಮಟ್ಟದ ಬಲವಾದ ತಂತ್ರ, ಸುಸಂಘಟಿತ ಪ್ರಚಾರ ತಂತ್ರ ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ನಿರ್ಧಾರಾತಕವಾಗಿ ಪರಿಹರಿಸುವ ನೇತೃತ್ವದ ಫಲವಾಗಿ ದೆಹಲಿಯಲ್ಲಿ ಈ ಜಯ ಸಾಧ್ಯವಾಯಿತು. ಈ ಗೆಲುವು ಜನತೆಯ ಆಶೀರ್ವಾದ ಹಾಗೂ ನಾವೇ ಅನುಸರಿಸಬೇಕಾದ ಮಾರ್ಗದರ್ಶನವನ್ನು ಒದಗಿಸುತ್ತಿದೆ ಅವರು ತಿಳಿಸಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಕರ್ನಾಟಕದಲ್ಲಿ ಬಿಜೆಪಿ ಇನ್ನೂ ಆಂತರಿಕ ಕಲಹ ಮತ್ತು ಸಂಘಟನಾ ದೌರ್ಬಲ್ಯದಿಂದ ಬಳಲುತ್ತಿದೆ. ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳು ಮತ್ತು ಗುಂಪು ರಾಜಕಾರಣದಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ ಎಂದಿದ್ದಾರೆ.
ದೆಹಲಿಯಲ್ಲಿ ಪಕ್ಷ ಏಕತೆ ಮತ್ತು ಶಿಸ್ತಿನ ಕಾರ್ಯಪದ್ಧತಿಯನ್ನು ಅನುಸರಿಸಿದರೆ, ಕರ್ನಾಟಕದಲ್ಲಿ ಕೆಲವು ನಾಯಕರು ತಮ ಸ್ವಂತ ರಾಜಕೀಯ ಲಾಭಕ್ಕಾಗಿ ಒಡಕುಂಟು ಮಾಡಿರುವುದು ಗಂಭೀರ ಸಮಸ್ಯೆಯಾಗುತ್ತಿದೆ. ಇದರಿಂದ ಕಾರ್ಯಕರ್ತರು ಮತ್ತು ಮತದಾರರಲ್ಲಿ ಒಂದು ರೀತಿಯ ಅಸ್ಥಿರತೆ ಉಂಟಾಗಿದೆ. ಈ ಸನ್ನಿವೇಶವನ್ನು ಸರಿಪಡಿಸದೇ ಹೋದರೆ, ಮುಂಬರುವ ಚುನಾವಣೆಯಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಶಕ್ತಿ ಪುನರ್ನಿರ್ಮಿಸಲು ತಕ್ಷಣದ ಕ್ರಮಗಳು ಅಗತ್ಯ: ಪಕ್ಷದ ಯಶಸ್ಸು ಯಾವುದೇ ಒಬ್ಬ ವ್ಯಕ್ತಿಯ ಸಾಧನೆ ಅಲ್ಲ, ಇದು ಶ್ರದ್ಧೆ, ಶ್ರಮ, ಮತ್ತು ಸಮೂಹ ಶಕ್ತಿಯ ಪ್ರತೀಕ. ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಬೇಕಾದರೆ, ಎಲ್ಲಾ ನಾಯಕರೂ ಒಗ್ಗೂಡಬೇಕು, ಸಂಘಟನೆಯ ಶಕ್ತಿಯನ್ನು ಪುನರ್ ನಿರ್ಮಿಸಬೇಕು ಮತ್ತು ಗಟ್ಟಿ ತಂತ್ರವನ್ನು ಅನುಸರಿಸಬೇಕು. ಪಕ್ಷದ ಹಿತಾಸಕ್ತಿಯನ್ನು ಮೊದಲಿಗಿಟ್ಟು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಸಹಕಾರ ಮತ್ತು ಏಕತೆ ಯೋಗವನ್ನು ತರುವ ಹಂತ ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.