ಬೆಂಗಳೂರು,ಫೆ.18- ಕರ್ನಾಟಕದ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಕೆ ಪಾತ್ರವಾಗಿ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಗೆದ್ದಿರುವ ಸಂಸದ ತೇಜಸ್ವಿ ಸೂರ್ಯ ಅವರ ಮದುವೆಗೆ ಮುಹೂರ್ತ ನಿಗದಿಯಾಗಿದೆ.
ತೇಜಸ್ವೀ ಸೂರ್ಯ ವರಸಲಿರುವ ಶಿವಶ್ರೀ ಸ್ಕಂದ ಪ್ರಸಾದ್ ಅವರು ಮೂಲತಃ ಚೆನ್ನೈಯವರು. ಅವರು ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ. ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಇದರೊಂದಿಗೆ ಅವರು ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನೂ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದಾರೆ.
ಮಾ.5 ಮತ್ತು 6ರಂದು ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ನಡೆಯಲಿರುವ ವಿವಾಹದಲ್ಲಿ ತೇಜಸ್ವಿ ಸೂರ್ಯ ಅವರು ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವರಿಸಲಿದ್ದಾರೆ. ಮಾ.5ರ ಬುಧವಾರ ಸಂಜೆ ವರಪೂಜೆ ಕಾರ್ಯಕ್ರಮ ನಡೆಯಲಿದೆ.
ಮಾ.6ರ ಗುರುವಾರ ಬೆಳಗ್ಗೆ ಕಾಶಿಯಾತ್ರೆ, ಜೀರಿಗೆ ಬೆಲ್ಲ, ಮುಹೂರ್ತ ಹಾಗೂ ಲಾಜಾ ಹೋಮ ನಡೆಸಲಾಗುತ್ತದೆ. ಬಳಿಕ ಅದೇ ದಿನ ಬೆಳಗ್ಗೆ 9.30 ರಿಂದ 10.15ರ ನಡುವಿನ ತುಲಾ ಲಗ್ನದಲ್ಲಿ ವಧು ಶಿವಶ್ರೀ ಸ್ಕಂದಪ್ರಸಾದ್ರನ್ನ ತೇಜಸ್ವಿ ಸೂರ್ಯ ವರಿಸಲಿದ್ದಾರೆ. ಇದಾದ ಮೇಲೆ ಅಂದೇ ತೇಜಸ್ವಿ ಸೂರ್ಯರ ಗಿರಿನಗರ ನಿವಾಸದಲ್ಲಿ, ವಧುವನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ಇರಲಿದೆ.
ಮದುವೆ ನಡೆದು ಎರಡು ದಿನಗಳ ಬಳಿಕ ಅಂದರೆ ಮಾ.9 ರಂದು ಭಾನುವಾರ ಅರತಕ್ಷತೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ. ಬೆಳಗ್ಗೆ 10.30ರಿಂದ 1.30 ರವರೆಗೆ ರಿಸೆಪನ್ ನಡೆಯಲಿದೆ.
ಇನ್ನು ಶಿವಶ್ರೀ ಯೂಟ್ಯೂಬ್ ಚಾನೆಲ್ ಅನ್ನೂ ಹೊಂದಿದ್ದು ಇದರಲ್ಲಿ 2 ಲಕ್ಷಕ್ಕೂ ಅಧಿಕ ಸಬ್ಬರ್ಸ್ ಹೊಂದಿದ್ದಾರೆ. ಅಲ್ಲದೇ ಪೊನ್ನಿಯನ್ ಸೆಲ್ವಾನ್ 2 ಕನ್ನಡ ಚಿತ್ರದಲ್ಲಿ ಹಾಡನ್ನೂ ಹಾಡಿದ ಹೆಮ್ಮೆ ಇವರಿಗಿದೆ.ಶಿವಶ್ರೀ ಸ್ಕಂದ ಪ್ರಸಾದ್ ಪ್ರಧಾನಿ ಮೋದಿಯಿಂದಲೂ ಮೆಚ್ಚುಗೆ ಪಡೆದಿದ್ದಾರೆ. ತೇಜಸ್ವಿ ಅವರಂತೆ ಶಿವ ಶ್ರೀ ಅವರು ಹರಿಕಥೆ, ಸೈಕ್ಲಿಂಗ್, ವಾಕಥಾನ್ನಲ್ಲಿ ಆಸಕ್ತಿ ಹೊಂದಿದ್ದಾರೆ.
ತೇಜಸ್ವಿ ಮತ್ತು ಶಿವಶ್ರೀ ಕೆಲ ವರ್ಷಗಳಿಂದ ಪರಿಚಯ ಹೊಂದಿದ್ದಾರೆ. ಈ ಹಿಂದೆ 2021ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಿವ ಶ್ರೀಯವರನ್ನು ಸನ್ಮಾನಿಸಿದ್ದರು. ಈ ಫೋಟೋಗಳನ್ನು ಶಿವಶ್ರೀ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ತೇಜಸ್ವಿ ಸೂರ್ಯ ಕುಟುಂಬ ಮದುವೆಯನ್ನು ತಮ್ಮ ಸ್ವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದ ಗ್ರಾಮದಲ್ಲಿ ನಡೆಸಬೇಕು ಎಂದು ಯೋಜಿಸಿದ್ದರು. ಆದರೆ ಕೆಲ ಸಂಬಂಧಿಕರ ಸಲಹೆ ಮೇರೆಗೆ ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿವೆ.