ಚೆನ್ನೈ,ಫೆ.27- ತಮಿಳು ನಾಡು ರಾಜಕೀಯದಲ್ಲಿ ಖ್ಯಾತ ಚಿತ್ರನಟ ವಿಜಯ್ ಅವರು ಹೊಸ ಭರವಸೆ ಮೂಡಿಸಿದ್ದಾರೆ ಎಂದು ರಾಜಕೀಯ ಚತುರ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು ವಿಜಯ್ ಸ್ಥಾಪನೆ ಮಾಡಿರುವ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ತಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.ವಿಜಯ್ ಅವರು, ರಾಜ್ಯ ರಾಜಕೀಯದಲ್ಲಿ ಬದಲಾವಣೆಯನ್ನು ನೋಡಲು ಬಯಸುವ ಲಕ್ಷಾಂತರ ಜನರಿಗೆ ಹೊಸ ಭರವಸೆಯಾಗಿದ್ದಾರೆ ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎರಡು ದ್ರಾವಿಡ ಪಕ್ಷಗಳನ್ನು ಸ್ಥಳಾಂತರಿಸುವ ಗುರಿಯನ್ನು ಹೊಂದಿರುವ ವಿಜಯ್ ಅವರಿಗೆ ಕಾರ್ಯತಂತ್ರದ ಸಹಾಯದ ಅಗತ್ಯವಿಲ್ಲ. ನಾನು ಯಾವುದೇ ಪಕ್ಷ ಅಥವಾ ನಾಯಕರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ನಾಲ್ಕು ವರ್ಷಗಳ ಹಿಂದೆಯೇ ಘೋಷಿಸಿದ್ದೆ, ಆದರೆ ವಿಜಯ್ ನನಗೆ ರಾಜಕೀಯ ನಾಯಕನಲ್ಲ. ಅವರು ತಮಿಳುನಾಡಿಗೆ ಹೊಸ ಭರವಸೆಯಾಗಿದ್ದಾರೆ.
ಟಿವಿಕೆ ತಮಿಳುನಾಡಿನಲ್ಲಿ ಹೊಸ ರಾಜಕೀಯ ವ್ಯವಸ್ಥೆಯನ್ನು ನೋಡಲು ಬಯಸುವ ಲಕ್ಷಾಂತರ ಜನರ ಆಂದೋಲನವಾಗಿದೆ, ಮತ್ತು ಟಿವಿಕೆ ಮತ್ತು ವಿಜಯ್ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.ಆಡಳಿತಾರೂಢ ಡಿಎಂಕೆ ಆಡಳಿತವನ್ನು ಟೀಕಿಸಿದ ಪ್ರಶಾಂತ್ ಕಿಶೋರ್, ಸರ್ಕಾರದ ಅಭಿವೃದ್ಧಿಯ ಮಾದರಿ ಭ್ರಷ್ಟಾಚಾರ, ವಂಶಪಾರಂಪರ್ಯ ಮತ್ತು ಕೋಮುವಾದ ಎಂದು ಜರಿದಿದ್ದಾರೆ.