ಬೆಂಗಳೂರು,ಫೆ.28- ಇಡ್ಲಿ ಬಳಿಕ ಹಸಿರು ಬಟಾಣಿ ಕೂಡ ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗದಿಂದ ದೃಢಪಟ್ಟಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿನ ಸುಮಾರು 36 ಮಾದರಿಯ ಹಸಿರು ಬಟಾಣಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿತ್ತು. ಇದೀಗ ವರದಿ ಬಂದಿದ್ದು, 28ಕ್ಕೂ ಹೆಚ್ಚು ಹಸಿರು ಬಟಾಣಿ ಮಾದರಿಗಳು ಅಸುರಕ್ಷಿತ ಎಂಬ ವಿಚಾರ ತಿಳಿದುಬಂದಿದೆ.
ಬಟಾಣಿ ಹಸಿರಾಗಿ ಕಾಣಲು ಕೃತಕ ಬಣ್ಣ ಬಳಸಲಾಗುತ್ತಿದೆ. ಕಲರ್ ಬಳಕೆಯಿಂದ ಬಟಾಣಿ ಸಾಮಾನ್ಯಕ್ಕಿಂತ ಹೆಚ್ಚು ಹಸಿರಾಗಿ ಕಾಣುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ. ಬಟಾಣಿಯಲ್ಲಿ ಬಣ್ಣ ಬಳಕೆ ಮಾಡುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಬೀರುತ್ತಿದೆ.
ವರದಿಯಲ್ಲಿ ಬಟಾಣಿಯ ಬಣ್ಣ ಕಿಡ್ನಿಯ ಮೇಲೆ ಪರಿಣಾಮ ಬೀರಲಿದೆ ಎಂದು ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಕೃತಕ ಬಣ್ಣ ಬಳಸಿ ಬಟಾಣಿ ಮಾರಟ ಮಾಡುವ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಹಿಂದೆ ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್ನಂತಹ ಜನಪ್ರಿಯ ಕೇಕ್ ಸೇರಿದಂತೆ 12 ಕೇಕ್ ಮಾದರಿಗಳಲ್ಲಿ ಕ್ಯಾನ್ಸರ್-ಉಂಟುಮಾಡುವ ಅಂಶಗಳು ಪತ್ತೆಯಾಗಿದ್ದವು. ಗೋಬಿ ಮಂಚೂರಿಯನ್, ಕಬಾಬ್ ಗಳು ಮತ್ತು ಪಾನಿಪುರಿ ಸಾಸ್ ಗಳಂತಹ ಖಾದ್ಯಗಳಲ್ಲಿ ಕೃತಕ ಬಣ್ಣಗಳನ್ನು ಆಹಾರ ಸುರಕ್ಷತಾ ಇಲಾಖೆ ನಿಷೇಧಿಸಿದ ನಂತರ ಈ ಕ್ರಮಗಳು ಬಂದಿವೆ.