ಬೆಂಗಳೂರು, ಮಾ.1– ಕರ್ನಾಟಕ ಜಾನಪದ ಅಕಾಡೆಮಿಯು 2024ನೇ ಸಾಲಿನಲ್ಲಿ ರಾಜ್ಯದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಹಾಗೂ ಇಬ್ಬರು ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಗೌರವ ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು, ತಜ್ಞ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು, ಸ್ಮರಣಿಕೆ, ಶಾಲು. ಹಾರ, ಫಲತಾಂಬೂಲ ಒಳಗೊಂಡಿರುತ್ತದೆ.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷ ಗೊಲ್ಲಳ್ಳಿ ಶಿವಪ್ರಸಾದ್ ಅವರು ಜಿಲ್ಲೆಗೊಂದರಂತೆ 30 ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದರು. ವಾರ್ಷಿಕ ಪ್ರಶಸ್ತಿಗೆ ಬೆಂಗಳೂರು ನಗರ ಜಿಲ್ಲೆಯ ಜಾನಪದ ಗಾಯಕ ಡಾ. ಜೋಗಿಲ ಸಿದ್ದರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತತ್ವಪದ ಮತ್ತು ಗೀಗೀ ಪದ ಕಲಾವಿದ ಸಿದ್ದಯ್ಯ ಸಿ.ಎಚ್., ರಾಮನಗರ ಜಿಲ್ಲೆಯ ಡೊಳ್ಳು ಕುಣಿತ ಕಲಾವಿದ ಎಂ.ಮಹೇಶ್, ಕೋಲಾರ ಜಿಲ್ಲೆಯ ಕೋಲಾಟ ಕಲಾವಿದೆ ಸುನಂದಮ್ಮ, ಚಿಕ್ಕಬಳ್ಳಾಪುರ ಜಿಲ್ಲೆಯ ಅರೆವಾದ್ಯ, ತಮಟೆ ಕಲಾವಿದ ವೆಂಕಟರಮಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ತುಮಕೂರು ಜಿಲ್ಲೆಯ ಕಿನ್ನರಿ ಜೋಗಿ ಕಲಾವಿದ ಸಿದ್ದಪ್ಪ, ದಾವಣಗೆರೆ ಜಿಲ್ಲೆಯ ಭಜನೆ ಕಲಾವಿದ ಮಾರ್ತಾಂಡಪ್ಪ, ಚಿತ್ರದುರ್ಗ ಜಿಲ್ಲೆಯ ಹಗಲುವೇಷ ಕಲಾವಿದ ಎ. ಶ್ರೀನಿವಾಸ, ಶಿವಮೊಗ್ಗ ಜಿಲ್ಲೆಯ ಹಸೆ ಚಿತ್ತಾರ ಕಲಾವಿದೆ ಗೌರಮ್ಮ, ಮೈಸೂರು ಜಿಲ್ಲೆಯ ಚರ್ಮವಾದ್ಯ ನಗಾರಿ ಕಲಾವಿದ ಸಿ.ಮಂಜುನಾಥ್, ಮಂಡ್ಯ ಜಿಲ್ಲೆಯ ಜಾನಪದ ಗಾಯನ ಕಲಾವಿದ ಹುರುಗಲವಾಡಿ ರಾಮಯ್ಯ, ಹಾಸನ ಜಿಲ್ಲೆಯ ಕೋಲಾಟ ಕಲಾವಿದ ಬಿ.ಟಿ.ಮಾನವ, ಚಿಕ್ಕಮಗಳೂರು ಜಿಲ್ಲೆಯ ಭಜನೆ ಕಲಾವಿದ ಬಿ.ಪಿ.ಪರಮೇಶ್ವರಪ್ಪ ಅವರು ಆಯ್ಕೆಯಾಗಿದ್ದಾರೆ ಎಂದರು.
ಚಾಮರಾಜನಗರ ಜಿಲ್ಲೆಯ ತಂಬೂರಿ ಪದ ಕಲಾವಿದ ಸಿದ್ದರಾಜು ಆರ್.. ದಕ್ಷಿಣ ಕನ್ನಡ ಜಿಲ್ಲೆಯ ಪಾಡ್ಡನ ಕಲಾವಿದೆ ಜಯಂತಿ, ಉಡುಪಿ ಜಿಲ್ಲೆಯ ಜಾನಪದ ಗಾಯನ ಕಲಾವಿದ ಎನ್.ಗಣೇಶ್ ಗಂಗೊಳ್ಳಿ. ಕೊಡಗು ಜಿಲ್ಲೆಯ ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ ಕಲಾವಿದೆ ಎಸ್.ಆರ್.ಸರೋಜ, ಬೆಳಗಾವಿ ಜಿಲ್ಲೆಯ ಚೌಡಕಿ ಪದ ಕಲಾವಿದೆ ಕಮಲಾ ಮರಗನ್ನವರ, ಧಾರವಾಡ ಜಿಲ್ಲೆಯ ಜಾನಪದ ಸಂಗೀತ ಕಲಾವಿದ ಪ್ರಭು ಬಸಪ್ಪ ಕುಂದರಗಿ, ವಿಜಯಪುರ ಜಿಲ್ಲೆಯ ಡೊಳ್ಳುಕುಣಿತ ಕಲಾವಿದ ಸೋಮಣ್ಣ ದುಂಡಪ್ಪ ಧಮಗೊಂಡ ಅವರನ್ನು ಆಯ್ಕೆ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯ ಕರಡಿ ಮಜಲು ಕಲಾವಿದ ಗಂಗಪ್ಪ.ಮ.ಕರಡಿ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದ ಗಣಪು ಬಡವಾಗೌಡ, ಹಾವೇರಿ ಜಿಲ್ಲೆಯ ಸಂಪ್ರದಾಯದ ಪದ, ಸೋಬಾನೆ ಪದ ಕಲಾವಿದೆ ಗಿರಿಜವ್ವ ಹನುಮಪ್ಪ ಬಣಕಾರ, ಗದಗ ಜಿಲ್ಲೆಯ ಹಗಲು ವೇಷ ಕಲಾವಿದ ಡಾ.ಗೋವಿಂದಪ್ಪ ರಾಮಚಂದ್ರಪ್ಪ, ಕಲಬುರಗಿ ಜಿಲ್ಲೆಯ ತತ್ವಪದ ಕಲಾವಿದೆ ಬೋರಮ್ಮ, ಬೀದರ್ ಜಿಲ್ಲೆಯ ಜನಪದ ಗಾಯನ ಕಲಾವಿದ ಮಾರುತಿ ಕೋಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ರಾಯಚೂರು ಜಿಲ್ಲೆಯ ತತ್ವಪದ ಕಲಾವಿದೆ ಯಲ್ಲಮ್ಮ, ಕೊಪ್ಪಳ ಜಿಲ್ಲೆಯ ಭಜನೆ ಕಲಾವಿದ ಹೆಚ್. ಚಂದ್ರಶೇಖರ್ ಹಡಪದ, ಬಳ್ಳಾರಿ ಜಿಲ್ಲೆಯ ಹಗಲು ವೇಷ ಕಲಾವಿದ ಕೆ.ಶಂಕರಪ್ಪ ಹಾಗೂ ಯಾದಗಿರಿ ಜಿಲ್ಲೆಯ ತತ್ವಪದ, ಭಜನೆ ಕಲಾವಿದ ಗೋಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ಜಿಲ್ಲೆಯ ವಿದ್ವಾಂಸ ಡಾ.ಮೈಲಹಳ್ಳಿ ರೇವಣ್ಣ ಅವರಿಗೆ ಡಾ.ಜೀ.ಶಂ.ಪ ಪ್ರಶಸ್ತಿ ಹಾಗೂ ವಿಜಯನಗರ ಜಿಲ್ಲೆಯ ವಿದ್ವಾಂಸ ಡಾ.ವೆಂಕಟೇಶ ಇಂದ್ವಾಡಿ ಅವರಿಗೆ ಡಾ.ಬಿ.ಎಸ್ .ಗದ್ದಗಿಮಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.