ಕೊಪ್ಪಳ,ಮಾ.2- ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಕೋಪವಿದೆ. ಕೆಲಸವಿದ್ದಾಗ ಮಾತ್ರ ಅವರು ನಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ನಮ ಪಕ್ಷದಿಂದ ಕುಡಿಯುವ ನೀರಿಗಾಗಿ, ಮೇಕೆದಾಟು ಯೋಜನೆಗಾಗಿ ಮಾಡಿದ್ದ ಪಾದಯಾತ್ರೆ ಸಂದರ್ಭದಲ್ಲಿ ಚಿತ್ರರಂಗದ ಕೆಲವರು ಮಾತ್ರ ಜೊತೆಯಾದರು. ಬಹುತೇಕರು ಬರಲೇ ಇಲ್ಲ. ಈ ರೀತಿ ಮಾಡಿದವರ ನಟ್ಟು, ಬೋಲ್ಟು ಟೈಟ್ ಮಾಡುವುದು ನಮಗೆ ಗೊತ್ತೆಂದು ಚಿತ್ರರಂಗದವರ ವಿರುದ್ಧ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಬೆದರಿಕೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಹಮಿಕೊಂಡಿದ್ದ ಮೇಕೆದಾಟು ಯೋಜನೆಗಾಗಿ ನಡೆದ ಪಾದಯಾತ್ರೆಗೆ ಯಾರು ಬೆಂಬಲ ಕೊಟ್ಟಿದ್ದಾರೋ, ಬಿಟ್ಟಿದ್ದಾರೋ ಎಂಬುದು ಮುಖ್ಯವಲ್ಲ. ಅಧಿಕಾರ ನಡೆಸಲು ನಾಡಿನ ಜನರು 138 ಸ್ಥಾನ ಕೊಟ್ಟಿದ್ದಾರೆ. ಅದರ ಸದ್ಬಳಕೆ ಮಾಡಿ ಕೆಲಸ ಮಾಡಲಿ ಎಂದು ಅವರು ಹೇಳಿದರು.
ನಟ್ಟು, ಬೋಲ್್ಟ ಸಡಿಲವಾದರೆ, ಅವುಗಳನ್ನು ಸರಿಪಡಿಸಲು ಹಲವು ತಜ್ಞರಿದ್ದಾರೆ. ರಾಜ್ಯದ ಜನ ಸಹಕಾರ ನೀಡಿದ್ದಾರೆ. ಅಧಿಕಾರ ಅವರ ಕೈಯಲ್ಲಿ ಇದೆ. ಇವರೇನು ಮಾಡಬೇಕೋ ಅದನ್ನು ಮಾಡಲಿ ಎಂದು ವಾಗ್ದಾಳಿ ನಡೆಸಿದರು.ಜನರು ಕೊಟ್ಟಿರುವ ಅಧಿಕಾರ ಬಳಸಿ ಜನರ ಬದುಕಿನ ಜೊತೆ ಚೆಲ್ಲಾಟವಾಡಬಾರದು. ಜನರು ಕೊಟ್ಟಿರುವ ಅಧಿಕಾರವನ್ನು ಕೆಲಸ ಮಾಡುವ ನಿಟ್ಟಿನಲ್ಲಿ ಉಪಯೋಗಿಸಲು ಸರ್ಕಾರಗಳು ನಡೆಯಲಿ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯದ ಅಭಿವೃದ್ಧಿ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ಗೆ ಚಿಂತೆ ಇಲ್ಲ. ಬರೀ ರಾಜಕೀಯ ವಿಚಾರಗಳು ರಾಜ್ಯದಲ್ಲಿ ಚರ್ಚೆಯಾಗುತ್ತಿವೆ. ಇವರ ಬಗ್ಗೆ ಅವರು, ಅವರ ಬಗ್ಗೆ ಇವರು ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಮಾತ್ರ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜನರ ಸಮಸ್ಯೆಗಳ ಬಗ್ಗೆ ಸ್ಪಂದನೆ ಇಲ್ಲ. ಕಳೆದ ವರ್ಷ ಹಲವಾರು ಭಾಗಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ನಷ್ಟವಾಗಿದೆ. ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸಚಿವ ಜಮೀರ್ ಅಹಮದ್ ಖಾನ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು, ಏನೆಲ್ಲಾ ಆಗುತ್ತಾರೆ ಎಂಬುದನ್ನು ಕಾಲವೇ ನಿರ್ಧಾರ ಮಾಡಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರತಿನಿತ್ಯ ಗ್ಯಾರಂಟಿ ಭಜನೆ ಮಾಡುವುದು, ಕೇಂದ್ರ ಸರ್ಕಾರವನ್ನು ದೂಷಣೆ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಲಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯಸರ್ಕಾರದಿಂದ ಮತ್ತಿನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಹೆಚ್ಚು ತೆರಿಗೆ ಹಾಕಿ ನಾಡಿನ ಜನರ ಸಂಪತ್ತನ್ನು ವಾಮಮಾರ್ಗದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದಲ್ಲಿ ಎಲ್ಲಾ ರೀತಿಯಲ್ಲೂ ದುರ್ಬಳಕೆಯಾಗುತ್ತಿದೆ. ರೈತರ ಹಣ, ಬಡವರ ಹಣ ಎಲ್ಲವೂ ದುರ್ಬಳಕೆಯಾಗುತ್ತಿದೆ. ತೆರಿಗೆ ಹಣ ಎಲ್ಲಿ ಹೋಗುತ್ತಿದೆ? ಎಂದು ಪ್ರಶ್ನಿಸಿದರು.
ಕೆಕೆಆರ್ಡಿಬಿಗೆ 5 ಸಾವಿರ ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದರು. ಆದರೆ ನಯಾಪೈಸೆ ಇದುವರೆಗೆ ಬಿಡುಗಡೆಯಾಗಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ ಹೆಚ್ಚು ಸೋರಿಕೆಯಾಗುತ್ತಿದೆ ಎಂದು ಆರೋಪಿಸಿದ ಅವರು, ನಾಡಿನ ಜನತೆ ಸರ್ಕಾರದ ಖಜಾನೆ ಭರ್ತಿಯಾಗಲು ಸಹಕಾರ ನೀಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಆಡಳಿತ ನಡೆಸಲಿ ಎಂದರು.
ನಾನು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ 9 ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು ಉದ್ದೇಶಿಸಿದ್ದೆ. ಆ ಮೂಲಕ ಒಂದು ಲಕ್ಷ ಯುವಕರಿಗೆ ಉದ್ಯೋಗ ದೊರಕಿಸುವುದು ಉದ್ದೇಶವಾಗಿತ್ತು. ಆಟಿಕೆಗಳ ಉದ್ಯಮ ವಿಶ್ವದಲ್ಲಿ ದೊಡ್ಡದಾಗಿ ಬೆಳೆಯುತ್ತಿದೆ. ಈ ಬಗ್ಗೆ ವ್ಯಾಪಕ ಚರ್ಚೆ ವಿಶ್ವದಲ್ಲಿ ನಡೆಯುತ್ತಿದೆ. ಚೀನಾ ಸಿಂಹ ಪಾಲು ಪಡೆಯುತ್ತಿದೆ.
ಇದೇ ಕಾರಣಕ್ಕೆ ಕಾಂಪಿಟ್ ವಿತ್ ಚೀನಾ ಯೋಜನೆ ತರಲು ಉದ್ದೇಶಿಸಿದ್ದೆ ಎಂದು ಅವರು ಹೇಳಿದರು.ಕೈಗಾರಿಕೆ ಸ್ಥಾಪನೆಯಾಗುವಾಗ ಪರಿಸರಕ್ಕೆ ಹಾನಿಯಾಗದಂತೆ, ಶ್ರೀಸಾಮಾನ್ಯರ ಬದುಕು ಹಾಗೂ ಆರೋಗ್ಯಕ್ಕೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲಿನ ಸ್ಥಳೀಯ ಕಂಪನಿ ಹಾಗೂ ಸರ್ಕಾರದ ನಡುವೆ ಒಪ್ಪಂದವಾಗಿದೆ. ಜನರಿಗೆ ತೊಂದರೆಯಾಗದ ರೀತಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.