ಬೆಳಗಾವಿ,ಮಾ.3- ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ ಐದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಆಪ್ತ ಹಾಗೂ ಗೋಕಾಕ್ ಮಹಿಳಾ ಕಾಂಗ್ರೆಸ್ ಸದಸ್ಯೆಯನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಪಹರಣವಾಗಿದ್ದ ಉದ್ಯಮಿಯನ್ನು ರಕ್ಷಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಪ್ರಸ್ತುತ ಇದರ ಕಿಂಗ್ ಪಿನ್ ಮಂಜುಳಾ ರಾಮಗನಟ್ಟಿಯನ್ನು ಬಂಧಿಸಲಾಗಿದ್ದು, ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಕೇವಲ 24ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ್ದ ಪೊಲೀಸರು ತನಿಖೆ ಆಳಕ್ಕೆ ಇಳಿದಾಗ ಇದರ ಹಿಂದಿನ ಕೈವಾಡ ಬಯಲಾಗಿದೆ. ಕಲಬುರಗಿಯಲ್ಲಿ ತಲೆಮರೆಸಿಕೊಂಡಿದ್ದ ಮಂಜುಳಾನ್ನನು ಬಂಧಿಸಿ ಇಲ್ಲಿಗೆ ಕರೆತರಲಾಗಿದೆ.
ಘಟನೆಯ ವಿವರ: ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ಅಂಬಿ (48) ಎಂಬುವರು ಕಳೆದ ಫೆ.14ರಂದು ರಾತ್ರಿ 11 ಗಂಟೆ ಸುಮಾರಿಗೆ ಮಿರಜ್ ದಿಂದ ಮನೆಗೆ ಬರುತ್ತಿರುವಾಗ ಅಪಹರಣ ಮಾಡಲಾಗಿತ್ತು. ಮರುದಿನ ಬಸವರಾಜ ಅಂಬಿ ಅವರ ಪತ್ನಿ ಶೋಭಾಗೆ ಕರೆ ಮಾಡಿದ್ದ ಅಪಹರಣಕಾರರು ಐದು ಕೋಟಿ ಹಣ ನೀಡಿ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದರು.
ಇದರಿಂದ ಭಯಗೊಂಡ ಶೋಭಾ ತನ್ನ ಮಗನಿಗೆ ವಿಚಾರ ತಿಳಿಸಿ, 10 ಲಕ್ಷ ಹಣ ನೀಡಿ ಪತಿ ಬಸವರಾಜ ಅಂಬಿಯನ್ನು ಬಿಡಿಸಿಕೊಂಡು ಬರಲು ಆರೋಪಿಗಳು ತಿಳಿಸಿದ್ದ ನಿಪ್ಪಾಣಿಯ ಬಳಿಯ ದಾಬಾಗೆ ಹೋಗಿದ್ದರು.ಶೋಭಾ ಸೇರಿದಂತೆ 4-5 ಮಂದಿ ಸ್ಥಳಕ್ಕೆ ಬಂದಿದ್ದನ್ನು ಗಮನಿಸಿದ ಆರೋಪಿಗಳು ಅಂದು ಭೇಟಿಯಾಗಲಿಲ್ಲ. ಮತ್ತೊಮ್ಮೆ ಕರೆ ಮಾಡಿ ಒಬ್ಬರೇ ಬಂದು ಐದು ಕೋಟಿ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು.
ನಂತರ ಶೋಭಾ ಫೆ. 18ರ ರಾತ್ರಿ ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು . ನಂತರ ಘಟಪ್ರಭಾ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಅವರ ಗಮನಕ್ಕೆ ವಿಚಾರ ತಂದಿದ್ದಾರೆ.
ತಕ್ಷಣ ಮೂರು ತಂಡಗಳನ್ನು ರಚಿಸಿ ಅಪಹರಣಕ್ಕೊಳಗಾದ ಉದ್ಯಮಿ ಪತ್ತೆಗೆ ಸೂಚನೆ ನೀಡಿದ್ದರು. ಪೋನ್ ಲೋಕೇಷನ್ ಆಧಾರದ ಮೇಲೆ ಶೋಧ ಕಾರ್ಯ ಶುರು ಮಾಡಿದ್ದ ಪೊಲೀಸರು ಬಸವರಾಜನನ್ನು ರಕ್ಷಣೆ ಮಾಡಿ. ಸ್ಥಳದಲ್ಲೇ ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಕರಣದ ಪ್ರಮುಖ ಆರೋಪಿ ಸಚಿವ ಸತೀಶ್ ಜಾರಕಿಹೊಳಿ ಆತ್ತೆ ಮಂಜುಳಾ ಎಂಬ ವಿಚಾರ ಬಹಿರಂಗವಾಗಿದೆ. ಇನ್ನು, ಮಂಜುಳಾ ಭಾಗಿಯಾಗಿರುವ ಕುರಿತು ಸ್ವತಃ ಆಕೆಯ ಪುತ್ರ ಬಾಯಿಬಿಟ್ಟಿದ್ದಾನೆ. ತಾಂತ್ರಿಕ ಸಾಕ್ಷ್ಯ, ಆರೋಪಿಗಳ ಹೇಳಿಕೆ ಆಧರಿಸಿ ಮಂಜುಳಾ ಅವರನ್ನು ಬಂಧಿಸಲಾಗಿದೆ.
ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಬಸವರಾಜ ಕೆಲ ವರ್ಷಗಳಿಂದ ಮಹಾಲಿಂಗಪುರ, ತೇರದಾಳ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಶುರು ಮಾಡಿ ಇದರಿಂದ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದರು.
ಈ ಹಣದ ಮೇಲೆ ಕಣ್ಣು ಹಾಕಿದ್ದ ಆರೋಪಿಗಳು ಈತನನ್ನ ಕಿಡ್ಯಾಪ್ ತಂತ್ರ ರೂಪಿಸಿ ಎರಡು ಕಾರುಗಳಲ್ಲಿ, ಗ್ಯಾಂಗ್ ಕಟ್ಟಿಕೊಂಡು ಬಂದು ಮೂಡಲಗಿ ತಾಲೂಕಿನ ದಂಡಾಪುರ ಗ್ರಾಮದ ಕ್ರಾಸ್ ಬಳಿ ಕಿಡ್ನಾಪ್ ಮಾಡಿದ್ದರು. ಇದೀಗ ಈ ಪ್ರಕರಣ ಸುಖಾಂತ್ಯಗೊಂಡಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.