ಬೆಂಗಳೂರು,ಮಾ.4- ಮಹಾರಾಷ್ಟ್ರ ಮತ್ತು ಕರ್ನಾಟಕದ ಬಸ್ ಸಂಚಾರ ಸುಗಮವಾಗಿದ್ದು ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಈ ಹಂತದಲ್ಲಿ ಕರ್ನಾಟಕ ಬಂದ್ ಅಗತ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದರು.
ಕರ್ನಾಟಕದ ಸಾರಿಗೆ ಸಂಸ್ಥೆ ನಿರ್ವಾಹಕನ ಮೇಲೆ ಹಲ್ಲೆಯಾದ ಘಟನೆ ನಡೆದ 8 ದಿನ ಆಗಿದೆ. ಆರಂಭದಲ್ಲಿ ಒಂದೆರೆಡು ದಿನ ಪ್ರತಿಭಟನೆಗಳಾಗಿದ್ದವು. ಯಾವುದೇ ಹಾನಿಯಾಗಿಲ್ಲ. ಮಹಾರಾಷ್ಟ್ರದಲ್ಲೂ ನಮ್ಮ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಮಸಿ ಬಳಿದಿದ್ದರು. ಅದಕ್ಕೂ ಪ್ರತಿಭಟನೆಗಳು ನಡೆದಿವೆ ಎಂದು ಹೇಳಿದರು. ನೆಲ, ಜಲ, ಭಾಷೆ ವಿಚಾರದಲ್ಲಿ ಹೋರಾಟಗಳಿಗೆ ನಮ್ಮ ಬೆಂಬಲವಿದೆ. ಆದರೆ ಈ ಸಂದರ್ಭದಲ್ಲಿ ಬಂದ್ ಅಗತ್ಯವಿಲ್ಲ ಎಂದರು.