ಬೆಂಗಳೂರು,ಮಾ.10- ಕರ್ನಾಟಕದಲ್ಲಿರುವ ಪುಣ್ಯ ಕ್ಷೇತ್ರಗಳಲ್ಲಿ ಅದರಲ್ಲೂ ನದಿ, ಕಲ್ಯಾಣಿ, ಸ್ನಾನಘಟ್ಟಗಳು ಸೇರಿದಂತೆ ನೀರಿನ ಸ್ಥಳಗಳಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸೋಪು, ಶ್ಯಾಂಪೂ ಮಾರಾಟವನ್ನು ನಿಷೇಧಿಸಲು ಚಿಂತನೆ ನಡೆದಿದೆ.
ಈ ಸಂಬಂಧ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ನದಿ ನೀರಿಗೆ ಸಮೀಪ ಇರುವ ಸ್ಥಳಗಳಲ್ಲಿ ಸೋಪು, ಶ್ಯಾಂಪೂ ನಿಷೇಧಿಸುವಂತೆ ತಿಳಿಸಿದ್ದಾರೆ.
ಪುಣ್ಯಕ್ಷೇತ್ರಗಳ ಬಳಿಯ ಜಲಮೂಲಗಳಲ್ಲಿ ಭಕ್ತರು ಹಾಗೂ ಪ್ರವಾಸಿಗರು ಸ್ನಾನ ಮಾಡುತ್ತಾರೆ. ಈ ವೇಳೆ ಅವರು ಬಳಸಿ ಉಳಿಯುವ ಶ್ಯಾಂಪೂ ಮತ್ತು ಸೋಪ್ಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ಅಲ್ಲಿನ ಪರಿಸರದಲ್ಲಿ ಕಸದ ಪ್ರಮಾಣ ಹೆಚ್ಚುವ ಜೊತೆಗೆ ಈ ಕೆಮಿಕಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳು ನೀರಿಗೆ ಸೇರಿಕೊಂಡು ಕಲುಷಿತವಾಗಿತ್ತಿವೆ.
ಇದರಿಂದ ನೀರಿನಲ್ಲಿರೋ ಜಲಚರಗಳು ಕೂಡ ಪ್ರಾಣ ಕಳೆದುಕೊಳ್ಳುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಹೆಚ್ಚಾಗಿ ರಾಜ್ಯದಲ್ಲಿರುವ ಪುಣ್ಯಕ್ಷೇತ್ರಗಳ ಈ ಸೋಪು, ಶ್ಯಾಂಪೂ ಮಾರಾಟ ಮಾಡುವ ಸಣ್ಣ ಅಂಗಡಿಗಳಿವೆ. ಕೇವಲ ಒಂದೆರಡು ರೂಪಾಯಿಗೆ ಸಿಗುವ ಶ್ಯಾಂಪೂ, ಸೋಪನ್ನು ದುಬಾರಿ ಬೆಲೆಗೆ ಸೇಲ್ ಮಾಡಲಾಗುತ್ತಿದೆ.
ಇದನ್ನು ಖರೀದಿಸುವ ಜನ ಬಳಸಿ ಉಳಿದದ್ದನ್ನು ನೀರಿಗೆ ಎಸೆದು ಹೋಗುತ್ತಿದ್ದಾರೆ. ಹಾಗಾಗಿ ಇವು ಅವರಿಗೆ ಸುಲಭವಾಗಿ ಸಿಗದಂತೆ ಮಾಡಬೇಕಿದೆ. ಹೀಗಾಗಿ ಪುಣ್ಯಕ್ಷೇತ್ರಗಳಲ್ಲಿರುವ ಜಲಮೂಲಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ನಿಷೇಧಿಸಿ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.
ಕೆಲವು ಭಕ್ತರು ಸ್ನಾನದ ನಂತರ ಮೂಢನಂಬಿಕೆಯಿಂದ ಒದ್ದೆ ಬಟ್ಟೆಗಳನ್ನು ನೀರಿನಲ್ಲೇ ಬಿಟ್ಟು ಹೋಗುತ್ತಿದ್ದು, ಧಾರ್ಮಿಕ ಕ್ಷೇತ್ರಗಳಲ್ಲಿ ಬಟ್ಟೆಗಳು ರಾಶಿರಾಶಿ ಬೀಳುತ್ತಿವೆ. ಇದರಿಂದಲೂ ನೀರಿನ ಸ್ವಚ್ಛತೆ ಹಾಳಾಗಿ ಜಲಮೂಲಗಳು ಮಲಿನಗೊಳ್ಳುತ್ತಿವೆ. ಇದಕ್ಕೂ ಕಡಿವಾಣ ಹಾಕಬೇಕು.
ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳ ನೆರವು ಮತ್ತು ಸಹಕಾರ ಪಡೆದು, ಈ ನಿಯಮಗಳನ್ನು ಜಾರಿಗೆ ತಂದರೆ, ರಾಜ್ಯದ ನದಿ, ಕೊಳ, ಸರೋವರ ಸೇರಿದಂತೆ ಜಲಮೂಲಗಳಲ್ಲಿ ಸ್ವಚ್ಛತೆ ಕಾಪಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಶೀಘ್ರವೇ ರಾಜ್ಯದ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಸೋಪು, ಶ್ಯಾಂಪೂ ಮಾರಾಟ ಬಂದ್ ಆಗುವ ಸಾಧ್ಯತೆ ಇದೆ.