ಹಾಸನ, ಮಾ.14- ಇಲ್ಲಿನ ವಸತಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಪೂರ್ವಿಕಾ (13) ಸಾವನ್ನಪ್ಪಿದ ವಿದ್ಯಾರ್ಥಿನಿ.
ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ, ಕ್ಯಾತೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಪೂರ್ವಿಕಾ ನನಗೆ ಸುಸ್ತಾಗುತ್ತಿದೆ ಎಂದು ಹೇಳಿದ್ದಳು. ಕೂಡಲೇ ಶಿಕ್ಷಕರು ಆಕೆಗೆ ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ.
ಮೂಲತ: ದೊಡ್ಡಬಂಡಾರ ಗ್ರಾಮದ ಶಿವ-ಆಶಾ ದಂಪತಿಯ ಪುತ್ರಿಯಾದ ಪೂರ್ವಿಕಾ ಸಾವಿಗೆ ಸಹಪಾಠಿಗಳು, ಶಿಕ್ಷಕರು ಕಣ್ಣೀರು ಹಾಕಿದ್ದಾರೆ.ಘಟನೆ ಆತಂಕ ಮೂಡಿಸಿದೆ. ಪೋಷಕರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಶಾಲೆಯ ಶಿಕ್ಷಕರು ವಿಷಯ ತಿಳಿಸಿದ್ದಾರೆ.
ಪೂರ್ವಿಕಾ ಮೃತದೇಹ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.