ಬೆಂಗಳೂರು,ಮಾ.28-ಸಿಐಡಿ ಅಧಿಕಾರಿಗಳು ಹನಿಟ್ರಾಪ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಬ್ಲಾಕ್ಮೇಲ್ ಮಾಡಲು ಕಳುಹಿಸಲಾಗಿದ್ದ ವಿಡಿಯೋ ತುಣಕ್ಕೊಂದನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದೆಡೆ ನನ್ನ ಕೊಲೆಗೆ ಯತ್ನ ನಡೆದಿದೆ ಎಂದು ಆರೋಪಿಸಿದ್ದ ಸಚಿವ ಕೆ.ಎನ್.ರಾಜಣ್ಣನವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಇಂದು ತುಮಕೂರು ಜಿಲ್ಲಾ ಪೊಲೀಸ್ ಮುಖ್ಯ ಅಧಿಕಾರಿಗಳಿಗೆ ದೂರು ನೀಡಿದ್ದು, ಆಡಿಯೋ ಸಾಕ್ಷ್ಯವನ್ನು ಒದಗಿಸಿದ್ದಾರೆ.
ಇತ್ತೀಚೆಗೆ ರಾಜೇಂದ್ರ ಅವರ ಕೊಲೆಯತ್ನ ಹಾಗೂ ರಾಜಣ್ಣ ಅವರ ಹನಿಟ್ರಾಪ್ ಪ್ರಕರಣಗಳು ಭಾರೀ ಸದ್ದು ಮಾಡಿದ್ದವು. ಹನಿಟ್ರಾಪ್ ಪ್ರಕರಣದ ತನಿಖೆ ಆರಂಭಿಸಿರುವ ಸಿಐಡಿ ಪೊಲೀಸರು, ನಿನ್ನೆ ರಾಜಣ್ಣ ಅವರ ಮನೆಗೆ ಭೇಟಿ ನೀಡಿ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದರು.
ಜೊತೆಗೆ ಸಚಿವರ ಕಚೇರಿಯಲ್ಲಿರುವ ಲೆಡ್ಜರ್ ಬುಕ್ನ್ನು ವಶಪಡಿಸಿಕೊಂಡು ಹನಿಟ್ರಾಪ್ ನಡೆದಿದೆ ಎಂದು ಉಲ್ಲೇಖಿಸಲಾದ ದಿನದಂದು ಯಾರೆಲ್ಲ ರಾಜಣ್ಣನವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ;ಮೂಲಗಳ ಪ್ರಕಾರ ರಾಜಣ್ಣ ಅವರನ್ನು ಬ್ಲಾಕ್ಮೇಲ್ ಮಾಡಲು ಸ್ಕ್ರೀನ್ ರೆಕಾರ್ಡ್ ವಿಡಿಯೋ ತುಣಕನ್ನು ಕಳುಹಿಸಲಾಗಿತ್ತು.
ಅದನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜಣ್ಣನವರಿಗೆ ಕರೆ ಮಾಡಿರುವವರ ಮೊಬೈಲ್ ನಂಬರ್ಗಳ ಸಿಡಿಆರ್ನ್ನು ಪಡೆದಿರುವ ಪೊಲೀಸರು ಅನುಮಾನಸ್ಪದ ನಂಬರ್ಗಳ ಬೆನ್ನು ಹತ್ತಿದ್ದಾರೆ ಎನ್ನಲಾಗಿದೆ.
ಹನಿಟ್ರಾಪ್ ನಡೆದಿದೆ ಎಂದು ಹೇಳಲಾದ ಕಾಲಮಾನದಲ್ಲಿ ರಾಜಣ್ಣ ಅವರಿಗೆ ಯುವ ಕಾಂಗ್ರೆಸ್ನ ಕಾರ್ಯಕರ್ತರು ಹೆಚ್ಚಾಗಿ ಕರೆ ಮಾಡಿರುವ ಮಾಹಿತಿ ತಿಳಿದುಬಂದಿದೆ. ಹೀಗಾಗಿ ತುಮಕೂರು ಮತ್ತು ಬೆಂಗಳೂರಿನ ಯುವ ಕಾಂಗ್ರೆಸ್ನ ಕಾರ್ಯಕರ್ತರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ರಾಜಣ್ಣ ಅವರ ಪುತ್ರ ರಾಜೇಂದ್ರ ನೀಡಿರುವ ದೂರನ್ನು ಆಧರಿಸಿ ತಮಕೂರಿನಲ್ಲಿ ಪ್ರಕರಣ ದಾಖಲಿಸಿ ಕೊಲೆ ಯತ್ನ ಪ್ರಕರಣದ ತನಿಖೆ ನಡೆಸುವ ಸಾಧ್ಯತೆ ಇದೆ.