ಚಿಕ್ಕಬಳ್ಳಾಪುರ, ಏ.8– ರಾಜ್ಯದ ಗಡಿಗಳ ಮೂಲಕ ಗಾಂಜಾ ಇತರೆ ಮಾದಕ ವಸ್ತುಗಳು ಜಿಲ್ಲೆಯ ಮೂಲಕ ರಾಜ್ಯಕ್ಕೆ ಸರಬರಾಜು ಆಗದಂತೆ ಚೆಕ್ ಪೋಸ್ಟ್ ಹಾಗೂ ತೀವ್ರ ನಿಗಾ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ನಗರದ ಹೊರವಲಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೊಲೀಸ್ ಪ್ರಗತಿಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆ ಪಿಯುಸಿ ನಂತರ ಉನ್ನತ ಶಿಕ್ಷಣದವರೆಗೂ ಸುಮಾರು 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಈ ಬೃಹತ್ ಪ್ರಮಾಣದ ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಆ ಕಾರಣಕ್ಕಾಗಿ ಕಟ್ಟುನಟ್ಟಿನ ಕ್ರಮ ಅವಶ್ಯಕತೆ ಇದೆ ‘ ಎಂದು ಇಲಾಖೆಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
`ಜಿಲ್ಲೆ ಎರಡು ಬೃಹತ್ ಹೆದ್ದಾರಿಗಳನ್ನು ಒಳಗೊಂಡಿದ್ದು ಇಲ್ಲಿ ಅಪಘಾತಗಳ ಸಂಖ್ಯೆ ಹಾಗೂ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಸಹ ಹೆಚ್ಚಿದೆ. ಇದರ ನಿಯಂತ್ರಣಕ್ಕಾಗಿ ಟಿಪ್ಪರ್ ಸೇರಿದಂತೆ ಬೃಹತ್ ವಾಹನಗಳ ಸಂಚಾರ ನಿಯಂತ್ರಣ ಆಗಬೇಕಾದ ಅವಶ್ಯಕತೆ ಇದೆ ‘ ಎಂದು ನುಡಿದರು.
`ಪೋಕ್ಸೋ ಪ್ರಕರಣಗಳಲ್ಲಿ ಸಾಕ್ಷಿ ಕೊರತೆ ಕಾರಣ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ ಎಂದು ವಿಷಾದಿಸಿದ ಅವರು, ಜಿಲ್ಲೆಯಲ್ಲಿ 165 ಹೆಚ್ಚು ಸಿಬ್ಬಂದಿ ಖಾಲಿ ಇದ್ದು ಇವುಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಶೇ. 46 ರಷ್ಟು ಪೊಲೀಸ್ ವಸತಿ ಗೃಹಗಳ ಸೌಲಭ್ಯವಿದ್ದು ಇದನ್ನ ಶೇ. 80 ರಷ್ಟು ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
`ಪೊಲೀಸರ ಪ್ರಗತಿ ಪರಿಶೀಲನೆಯಲ್ಲಿ ಕಂಡುಬಂದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸರ ವಿವಿಧ ಕ್ರಮಗಳಿಂದಾಗಿ ಕಾನೂನು ವ್ಯವಸ್ಥೆ ಸಮರ್ಪಕ ಹಾಗೂ ಶಾಂತಿಯುತವಾಗಿದೆ’ ಎಂದು ತಿಳಿಸಿದರು.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಕೈಗೊಂಡಿರುವ ಜನಾಕ್ರೋಶ ಯಾತ್ರೆ ಅದು ಜನಾಕ್ರೋಶವಲ್ಲ ಅದು ಕೇವಲ ಬಿಜೆಪಿ ಆಕ್ರೋಶ ಮಾತ್ರ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಆಡಳಿತ ವೈಖರಿ ನೋಡಿ ಬಿಜೆಪಿ ಪಕ್ಷದವರಿಗೆ ಭಯ ಹುಟ್ಟಿದೆ ಹಾಗಾಗಿ ಜನರನ್ನು ದಿಕ್ಕು ತಪ್ಪಿಸುವ ಯಾತ್ರೆ ಇವರು ಕೈಗೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕ ಲಾಬುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಪೊಲೀಸ್ ಅಧಿಕಾರಿಗಳು ಇದ್ದರು.