Saturday, April 19, 2025
Homeರಾಷ್ಟ್ರೀಯ | Nationalಆಸ್ಪತ್ರೆಗಳಿಗೆ ಸುಪ್ರೀಂ ಕೋರ್ಟ್  ತೀಕ್ಷ್ಣ ಎಚ್ಚರಿಕೆ

ಆಸ್ಪತ್ರೆಗಳಿಗೆ ಸುಪ್ರೀಂ ಕೋರ್ಟ್  ತೀಕ್ಷ್ಣ ಎಚ್ಚರಿಕೆ

supreme court

ನವದೆಹಲಿ,ಏ.15– ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಕಳ್ಳ ಸಾಗಾಣಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್. ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದರೆ, ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ಲೈಸೆನ್ಸ್ ಅನ್ನು ಮುಲಾಜಿಲ್ಲದೆ ರದ್ದುಗೊಳಿಸಬೇಕು ಎಂದು ದೇಶದ ಎಲ್ಲಾ ರಾಜ್ಯಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣಗಳ ನಿರ್ವಹಣೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತಗೆದುಕೊಂಡ ಸುಪ್ರೀಂ ಕೋರ್ಟ್, ಅಂತಹ ಅಪರಾಧಗಳನ್ನು ತಡೆಯಲು ರಾಜ್ಯಗಳು ಅನುಸರಿಸಬೇಕಾದ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸುವಂತೆಯೂ ತಾಕೀತು ಮಾಡಿದೆ.

ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಅಂತಹ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕೆಳ ನ್ಯಾಯಾಲಯಗಳಿಗೆ ಆದೇಶಿಸಿದೆ. ಯಾವುದೇ ನವಜಾತ ಶಿಶುವನ್ನು ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಗಿಯನ್ನು ಮುಲಾಜಿಲ್ಲದೆ ಅಮಾನತುಪಡಿಸುವಂತೆಯೂ ಎಲ್ಲಾ ರಾಜ್ಯಗಳಿಗೆ ಆದೇಶ ಮಾಡಿದೆ.

ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕಳ್ಳಸಾಗಣೆ ಮಾಡಿದರೆ ಮೊದಲ ಹಂತವಾಗಿ ಅಂತಹ ಆಸ್ಪತ್ರೆಗಳ ಪರವಾನಿಗೆಯನ್ನು ಅಮಾನತುಗೊಳಿಸಬೇಕು. ಇದನ್ನು ಹಗುರವಾಗಿ ಪರಿಗಣಿಸಿದರೆ, ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆಯನ್ನು ಕೊಟ್ಟಿದೆ.

ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ವಿಚಾರಣೆಗೆ ಕರೆಯಲು ದೇಶಾದ್ಯಂತದ ಹೈಕೋ ರ್ಟ್ ಗಳಿಗೆ ನಿರ್ದೇಶಿಸಲಾಗಿದೆ. ನಂತರ 6 ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ಮತ್ತು ದಿನನಿತ್ಯದ ವಿಚಾರಣೆಯನ್ನು ನಡೆಸಲು ನಿರ್ದೇಶನಗಳನ್ನು ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಉತ್ತರಪ್ರದೇಶದಲ್ಲಿ ಗಂಡು ಮಗು ಬೇಕೆಂದು ದಂಪತಿಗೆ ಕಳ್ಳಸಾಗಣೆ ಮಾಡಲಾದ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳ ಜಾಮೀನು ರದ್ದುಗೊಳಿಸುವಾಗ, ಅಲಹಾಬಾದ್ ಹೈಕೋರ್ಟ್ ಮತ್ತು ಯುಪಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಆರೋಪಿಗಳು ಮಗನಿಗಾಗಿ ಹಾತೊರೆಯುತ್ತಿದ್ದರು. 4 ಲಕ್ಷ ರೂ. ನೀಡಿದಕ್ಕೆ ನೀವು ಮಗನನ್ನು ಬಯಸುವುದಾದರೂ ಹೇಗೆ? ನೀವು ಕಳ್ಳಸಾಗಣೆ ಮಾಡಿದ ಮಗುವಿಗೆ ನಿಜವಾದ ತಂದೆ ತಾಯಿ ಆಗಲು ಸಾಧ್ಯವಿಲ್ಲ. ಮಗುವನ್ನು ಕದ್ದಿದ್ದೇವೆ ಎಂಬ ಪಾಪ ಪ್ರಜ್ಞೆ ನಿಮಗೆ ಕಾಡುವುದಿಲ್ಲವೇ ? ಕದ್ದಿದ್ದೇವೆ ಎಂದು ಸುಪ್ರೀಂ ಕೋರ್ಟ್‍ ಖಾರವಾಗಿ ಪ್ರಶ್ನಿಸಿದ್ದು, ಹೈಕೋರ್ಟ್ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸುವಾಗ ಕಠಿಣವಾಗಿ ವರ್ತಿಸಬೇಕಿತ್ತು ಎಂದು ಹೇಳಿದೆ.

ಇದರಿಂದಾಗಿ ಅನೇಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳು ಸಮಾಜಕ್ಕೆ ಗಂಭೀರ ಬೆದರಿಕೆ ಹಾಕುತ್ತಿದ್ದಾರೆ. ಜಾಮೀನು ನೀಡುವಾಗ ಹೈಕೋರ್ಟ್‌ನಿಂದ ಕನಿಷ್ಠ ಷರತ್ತುಗಳನ್ನು ವಿಧಿಸಿಲ್ಲ, ಪ್ರತಿ ವಾರ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ನಿಯಮವನ್ನು ಪಾಲನೆ ಮಾಡಿಲ್ಲ.  ಪೊಲೀಸರು ಆರೋಪಿಗಳ ಚಲನವಲನದ ಮೇಲೆ ನಿಗಾವಹಿಸಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಲ್ಲಾ ಆರೋಪಿಗಳನ್ನು ಶರಣಾಗುವಂತೆ ಸೂಚಿಸಿದ ನ್ಯಾಯಾಲಯ, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕು. ಒಂದು ವಾರದೊಳಗೆ ಆರೋಪಗಳನ್ನು ರೂಪಿಸಲಾಗುವುದು. ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದರೆ, ವಿಚಾರಣಾ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‍ ಗಳನ್ನು ಹೊರಡಿಸುತ್ತದೆ. ಹಾಜರಿರುವವರ ವಿಚಾರಣೆ ಮುಂದುವರಿಯುತ್ತದೆ ಮತ್ತು ವಿಳಂಬವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಕ್ಕಳ ಕಳ್ಳಸಾಗಾಣಿಕೆಯನ್ನು ನಿಭಾಯಿಸುವ ಕುರಿತು ತೀರ್ಪಿನಲ್ಲಿ ವಿವರವಾದ ಶಿಫಾರಸುಗಳಿವೆ ಮತ್ತು ಅವುಗಳನ್ನು ಶೀಘ್ರವಾಗಿ ಜಾರಿಗೆ ತರಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದರು.

ಭಾರತದಲ್ಲಿ ಪ್ರತಿ ವರ್ಷ ಸುಮಾರು 2,000 ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ವರದಿಯಾಗುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ, 2022 ರಲ್ಲಿ ಇಂತಹ 2250 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ತೆಲಂಗಾಣ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ವರದಿಯಾಗಿವೆ.

RELATED ARTICLES

Latest News