ನವದೆಹಲಿ,ಏ.17- ಶಾಸನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿರುವ ಏಪ್ರಿಲ್ 8ರ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಮುಂದಾಗಿದೆ.
ವಿಧೇಯಕಗಳಿಗೆ ಸಹಿ ಹಾಕದೇ ಬಾಕಿ ಉಳಿಸಿಕೊಂಡಿದ್ದ ತಮಿಳುನಾಡು ರಾಜ್ಯಪಾಲರ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ. ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠ, ವಿಧೇಯಕಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮೂರು ತಿಂಗಳ ಕಾಲಮಿತಿ ನಿಗದಿಪಡಿಸಿದೆ.
ತೀರ್ಪು ಪರಿಶೀಲನೆಗೆ ಕೋರಲು ಮುಂದಾಗಿರುವ ಸರಕಾರ, ಸಂವಿಧಾನದ ಕಲಂ 201ರಲ್ಲಿ ರಾಷ್ಟ್ರಪತಿಗಳಿಗೆ ನೀಡಿದ ಅಧಿಕಾರ ಮೊಟುಕುಗೊಳಿಸಿದ ಕ್ರಮ ಪ್ರಶ್ನಿಸಲು ಮುಂದಾಗಿದೆ. ಜತೆಗೆ ಸಂವಿಧಾನದ ಕಲಂ 200ರ ಅಡಿಯಲ್ಲಿ ರಾಜ್ಯಪಾಲರಿಗೆ ನೀಡಲಾದ ಅಧಿಕಾರಕ್ಕೆ ಕತ್ತರಿ ಹಾಕಿರುವುದನ್ನು ಪ್ರಶ್ನಿಸುವ ಸಾಧ್ಯತೆಯಿದೆ.
ಪ್ರಕರಣದಲ್ಲಿ ಕೇಂದ್ರ ಸರಕಾರದ ವಾದವನ್ನು ಮಂಡಿಸಲು ಸಾಧ್ಯವಾಗಿಲ್ಲ. ರಾಷ್ಟ್ರಪತಿಗಳ ವಾದವನ್ನು ಕೋರ್ಟ್ ಆಲಿಸಿಲ್ಲ. ಹೀಗಾಗಿ ಏಕಪಕ್ಷೀಯವಾಗಿ ನೀಡಲಾದ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಕೋರಿ ಕೇಂದ್ರ ಸರಕಾರ ಅರ್ಜಿ ಸಲ್ಲಿಸುವ ಸಂಭವವಿದೆ.
ರಾಷ್ಟ್ರಪತಿಗಳ ಪರಿಗಣನೆಗೆ ಬಂದ ವಿಧೇಯಕಗಳ ಮೇಲಿನ ಮುಂದಿನ ಪ್ರಕ್ರಿಯೆ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ರಾಷ್ಟ್ರಪತಿ ತೆಗೆದುಕೊಂಡ ನಿರ್ಧಾರವನ್ನು ಗೃಹ ಮಂತ್ರಾಲಯದ ಮೂಲಕವೇ ರಾಜ್ಯಗಳಿಗೆ ತಿಳಿಸಲಾಗುತ್ತದೆ. ಗೃಹ ಸಚಿವಾಲಯದ ವಾದ ಆಲಿಸದೆ ನೀಡಲಾಗಿರುವ ತೀರ್ಪು ಪರಿಶೀಲನೆ ಅಗತ್ಯವಿದೆ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹೇಳಿದ್ದಾರೆ.
ಕೇಂದ್ರದ ವಾದವನ್ನು ಪರಿಗಣಿಸದೆ ನ್ಯಾಯಪೀಠ ನೀಡಿರುವ ತೀರ್ಪು ಅಧಿಕಾರ ವ್ಯಾಪ್ತಿ ಮೀರಿದ ಕ್ರಮವಾಗಿದೆ ಎಂದು ಉಲ್ಲೇಖಿಸಿ ಪುನರ್ ಪರಿಶೀಲನಾ ಅರ್ಜಿ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂವಿಧಾನದ ಕಲಂ 142ರ ಅಡಿಯಲ್ಲಿ ನೀಡಲಾದ ಪರಮಾಧಿಕಾರ ಬಳಸಿಕೊಂಡು ತಮಿಳುನಾಡು ರಾಜ್ಯಪಾಲರು ಬಾಕಿ ಉಳಿಸಿಕೊಂಡಿದ್ದ 10 ವಿಧೇಯಕಗಳಿಗೆ ಸುಪ್ರೀಂ ಕೋರ್ಟ್ ಸ್ವಯಂ ಅಂಕಿತ ಹಾಕಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಪಾಲರ ಸಹಿ ಇಲ್ಲದೆ ವಿಧೇಯಕಗಳು ಕಾಯಿದೆಗಳಾಗಿ ಜಾರಿಗೆ ಬಂದಿವೆ.
ಸಂವಿಧಾನ ಕಲಂ 201 ಏನು ಹೇಳುತ್ತದೆ? ರಾಷ್ಟ್ರಪತಿಗಳಿಗೆ ಪರಮಾಧಿಕಾರ ಒಕ್ಕೂಟ ವ್ಯವಸ್ಥೆ, ಸಂವಿಧಾನಕ್ಕೆ ವಿರುದ್ಧವಾದ ವಿಧೇಯಕ ತಡೆ ಹಿಡಿಯಲು ವಿಶೇಷ ಅಧಿಕಾರ ಅನಿರ್ದಿಷ್ಟಾವಧಿ ತನಕ ವಿಧೇಯಕಗಳನ್ನು ತಡೆಯುವ ಅಧಿಕಾರ.