ಬೆಂಗಳೂರು,ಏ.21- ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕಾರನ್ನು ಅಡ್ಡಗಟ್ಟಿ ಸಶಸ್ತ್ರ ಪಡೆಯ ಅಧಿಕಾರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರು ಘಟನೆ ನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಅಧಿಕಾರಿ ತಮ್ಮ ಮೇಲಾದ ಹಲ್ಲೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಿವಿ ರಾಮನ್ನಗರದ, ಗೋಪಾಲನ್ ಗ್ರಾಂಡ್ ಮಾಲ್ ಬಳಿ ಘಟನೆ ನಡೆದಿದೆ.
ಅಧಿಕಾರಿಯು ತಮ್ಮ ಪತ್ನಿಯೊಂದಿಗೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪರಿಚಿತ ಇಬ್ಬರು ಬೈಕ್ನಲ್ಲಿ ಬಂದು ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ಅಧಿಕಾರಿಯ ಮುಖ ಮತ್ತು ತಲೆಗೆ ಹೊಡೆದಿದ್ದು ರಕ್ತ ಬಂದಿದೆ .ಈ ವಿಡಿಯೋವನ್ನು ಅಮಿತಾಬ್ ಚೌದರಿ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ಅಥವಾ ಗುಂಪುಗಳು ಭಾಷೆ, ಜಾತಿ ಮತ್ತು ರಾಜಕಾರಣದ ಹೆಸರಿನಲ್ಲಿ ಒಡೆದು ಆಳುವುದು ಕರ್ನಾಟಕ ಮತ್ತು ಭಾರತಕ್ಕೆ ಹಾನಿಕಾರಕಎಂದು ಟ್ವಿಟ್ ಮಾಡಿದ್ದಾರೆ.
ನಾವು ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿರುವ ಡಿಆರ್ಡಿಒ ಕಾಲೋನಿಯಲ್ಲಿ ವಾಸವಾಗಿದ್ದು, ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇವು. ಈ ವೇಳೆ ನಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂದ ಓರ್ವ ಬೈಕ್ ಸಾವರ, ನಮಗೆ ಅಡ್ಡ ಹಾಕಿದ್ದಾನೆ. ಆಗ ನಾನು ಕಾರು ನಿಲ್ಲಿಸಿದೆ.
ನಂತರ ಆ ವ್ಯಕ್ತಿ ಏಕಾಏಕಿ ಕನ್ನಡದಲ್ಲಿ ನನ್ನನ್ನು ನಿಂದಿಸಲು ಪ್ರಾರಂಭಿಸಿದನು. ನನ್ನ ಕಾರಿನ ಮೇಲೆ ಡಿಆರ್ಡಿಒ ಸ್ಟಿಕ್ಕರ್ ನೋಡಿ ನೀವು ಡಿಆರ್ಡಿಒ ಜನರು ಎಂದು ಹೇಳಿ, ನನ್ನ ಹೆಂಡತಿಯನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದನು. ಮತ್ತು ನನಗೆ ಅದು ಸಹಿಸಲಾಗಲಿಲ್ಲ. ನಾನು ಕಾರಿನಿಂದ ಇಳಿದ ಕ್ಷಣ, ಆ ವ್ಯಕ್ತಿ ಕೀಲಿಯಿಂದ ನನ್ನ ಹಣೆಗೆ ಹೊಡೆದನುಎಂದು ಹೇಳಿದರು.
ಆಗ ನಾನು, ಗಡಿಯಲ್ಲಿ ನಿಂತು ನಾನು ನಿಮ್ಮನ್ನು ರಕ್ಷಿಸುತ್ತೇನೆ. ನಮ್ಮ ಜೊತೆ ನೀವು ಈ ರೀತಿ ವರ್ತಿಸುವುದು ಸರಿಯಲ್ಲ. ಭೂ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಅಧಿಕಾರಿಗಳನ್ನು ಏಕೆ ಈ ರೀತಿ ನಡೆಸಿಕೊಳ್ಳುತ್ತೀರಿ ಎಂದು ಕೂಗಿದೆ. ಬಳಿಕ, ಸುತ್ತಮುತ್ತಲಿನ ಜನರು ಸೇರಿದರು. ಅವರೂ ಕೂಡ ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ನಂತರ, ಬೈಕ್ ಸವಾರ ಕಲ್ಲು ತೆಗೆದುಕೊಂಡು ನನ್ನ ಕಾರಿನ ಗಾಜು ಒಡೆಯಲು ಪ್ರಯತ್ನಿಸಿದನು. ಆದರೆ, ಅದು ನನ್ನ ತಲೆಗೆ ಬಡಿಯಿತು. ಇದು ನನ್ನ ಸ್ಥಿತಿ ಎಂದು ಅಧಿಕಾರಿ ಹೇಳಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ನನ್ನ ಹೆಂಡತಿ, ನನ್ನನ್ನು ಕಾರಿನಲ್ಲಿ ಕೂರಿಸಿ ಕರೆದುಕೊಂಡು ಹೋದರು. ನಾವು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದೆವು. ಆದರೆ, ಅಲ್ಲಿ ನಮಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಕರ್ನಾಟಕ ಏಕೆ ಹೀಗಾಯಿತು ನನಗೆ ನಂಬಲು ಆಗುತ್ತಿಲ್ಲ. ದೇವರು ನಮಗೆ ಸಹಾಯ ಮಾಡುತ್ತಾನೆ. ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ನಮಗೆ ಸಹಾಯ ಮಾಡದಿದ್ದರೆ, ನಾನು ಪ್ರತೀಕಾರ ತೀರಿಸುತ್ತೇನೆ ಎಂದು ಕಾರಿನಲ್ಲಿ ವೀಡಿಯೊ ರೆಕಾಡ್ ೯ ಮಾಡುವಾಗ ಅಧಿಕಾರಿ ಹೇಳಿದರು.
ಈ ಹಲ್ಲೆ ಅಪ್ರಚೋದಿತವಾಗಿ ನಡೆದಿದೆಯೇ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದರ ನಡುವೆ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಅಧಿಕಾರಿ, ಮಪ್ತಿಯಲ್ಲಿದ್ದು, ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಕಾರಿಗೆ ಟಚ್ ಆಗಿದೆ. ಈ ವಿಚಾರಕ್ಕೆ ಬೈಕ್ ಸವಾರರು ಮತ್ತು ಅಧಿಕಾರಿ, ನಡುವೆ ಗಲಾಟೆಯಾಗಿ ಪರಸ್ಪರ ಹೊಡದಾಡಿದ್ದಾರೆ. ಭಾಷೆ ವಿಚಾರಕ್ಕೆ ಗಲಾಟೆ ಆಗಿಲ್ಲ ಎಂದು ಎಫ್ಐರ್ಆ ನಲ್ಲಿ ದಾಖಲಾಗಿದೆ. ಆರೋಪಿಗಳಿಗಾಗಿ ಬೈಯಪ್ಪನಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.