ಬೆಂಗಳೂರು,ಏ.22– ಬಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಂಗ್ ಕಮಾಂಡರ್ ಹಲ್ಲೆ ಪ್ರಕರಣ ಭಾಷೆಗೆ ಸಂಬಂಧಪಟ್ಟಿದ್ದು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಯ್ಯಪ್ಪನಹಳ್ಳಿ ಪ್ರಕರಣದಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ವಾಯುಸೇನೆಯ ವಿಂಗ್ ಕಮಾಂಡರ್ ಶೀಲಾದಿತ್ಯಬೋಸ್ ಪತ್ನಿ ಬೈಕ್ ಸವಾರನ ವಿರುದ್ಧ ದೂರು ನೀಡಿದ್ದರು. ವಿಮಾನನಿಲ್ದಾಣಕ್ಕೆ ಹೋಗುತ್ತಿದ್ದಾಗ ಬೈಕ್ ಸವಾರ ತಮ ಪತಿ ಮೇಲೆ ಹಲ್ಲೆ ಮಾಡಿ ವಾಹನಕ್ಕೆ ಧಕ್ಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಎರಡನೇ ಪ್ರಕರಣದಲ್ಲಿ ಬೈಕ್ ಸವಾರ ಏರ್ಫೋರ್ಸ್ ಅಧಿಕಾರಿ ತಮ ಮೇಲೆ ಹಲ್ಲೆ ಮಾಡಿದ್ದಾರೆ. ಬೈಕ್ ಕಾರಿಗೆ ತಗುಲಿದ ಸಣ್ಣ ಕಾರಣಕ್ಕಾಗಿ ವಾಗ್ವಾದ ನಡೆದು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಎರಡೂ ಪ್ರಕರಣಗಳು ದಾಖಲಾಗಿದ್ದು ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದರು.
ತನಿಖೆ ನಡೆಯುತ್ತಿರುವುದರಿಂದ ಘಟನೆಯ ಕಾರಣಗಳ ಬಗ್ಗೆ ವಿಶ್ಲೇಷಣೆ ನಡೆಸುವುದು ಸರಿಯಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದ ವಿಡಿಯೋವನ್ನು ಆಧರಿಸಿ ಪೊಲೀಸರು ಡಿಆರ್ಡಿಒ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದ್ದು, ಅದರ ಆಧಾರದ ಮೇಲೆ ದೂರು ಪಡೆದು ಪ್ರಕರಣ ದಾಖಲಿಸಲಾಯಿತು.
ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿರುವ ಅಂಶಗಳು ವಾಸ್ತವಾಂಶದಿಂದ ಕೂಡಿಲ್ಲ ಎಂದು ಕಂಡುಬಂದಿದೆ. ಆದರೆ ತನಿಖೆಯ ಭಾಗವಾಗಿರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಭಾಷಾ ವಿಚಾರಕ್ಕೆ ಈ ಗದ್ದಲ ಆಗಿದೆಯೇ ಎಂಬ ಬಗ್ಗೆ ಒಂದೇ ದೃಷ್ಟಿಕೋನದಿಂದ ಹೇಳಲು ಸಾಧ್ಯವಿಲ್ಲ. ಕಾರು ಮತ್ತು ಬೈಕ್ ನಡುವೆ ಸಣ್ಣ ಅಪಘಾತ ಪ್ರಕರಣ ಆಧಾರದಲ್ಲಿ ವಾಗ್ವಾದ ನಡೆದು ಹಲ್ಲೆಯಾಗಿದೆ. ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಬೇರೆಬೇರೆ ಅಂಶಗಳು ಹೊರಬರುತ್ತಿವೆ ಎಂದರು.
ಗಂಭೀರ ಪ್ರಕರಣ – ಸಿಸಿಬಿಗೆ ತನಿಖೆಗೆ :
ಎಚ್ಎಸ್ಆರ್ಲೇಔಟ್ನಲ್ಲಿ ನಡೆದ ನಿವೃತ್ತ ಡಿಜಿಪಿ ಓಂಪ್ರಕಾಶ್ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಆಧರಿಸಿ ಸಿಸಿಬಿ ತನಿಖೆಗೆ ವಹಿಸಲಾಗಿದೆ. ಆದಷ್ಟು ಶೀಘ್ರದಲ್ಲೇ ಸಿಸಿಬಿ ಪೊಲೀಸರು ತನಿಖೆ ಆರಂಭಿಸುತ್ತಾರೆ ಎಂದು ತಿಳಿಸಿದರು.
ಪೊಲೀಸರು ಸ್ಥಳ ಪರಿಶೀಲನೆ, ವಿಧಿ ವಿಜ್ಞಾನ ಪ್ರಯೋಗಾಲಯ ಪರಿಶೀಲನೆ, ಸಾಂದರ್ಭಿಕ ಸಾಕ್ಷಿಗಳ ಆಧಾರದ ಮೇಲೆ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ. ದೂರುದಾರರು ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ತನಿಖೆ ಮತ್ತು ಸಾಕ್ಷಿ ಆಧಾರಗಳನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.