ಬೆಂಗಳೂರು,ಏ.23- ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟಿರುವ ಕರ್ನಾಟಕದ ಮೂವರ ಪಾರ್ಥೀವ ಶರೀರಗಳನ್ನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊಳಗಾಗಿ ತಾಯ್ನಾಡಿಗೆ ತರಲು ಪ್ರಯತ್ನಗಳು ಮುಂದುವರೆದಿವೆ.
ಜಮ್ಮು-ಕಾಶ್ಮೀರದ ಪ್ರವಾಸದಲ್ಲಿದ್ದ ಐಪಿಎಸ್ ಅಧಿಕಾರಿ ಆರ್.ಚೇತನ್ ಅವರು ಸ್ಥಳದಲ್ಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ಮುಂಜಾನೆ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದು, ಅಲ್ಲಿ ಪರಿಹಾರ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ದಾಳಿಯಲ್ಲಿ ಗಾಯಗೊಂಡು, ಸಂಕಷ್ಟಕ್ಕೆ ಸಿಲುಕಿರುವವರ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಶಿವಮೊಗ್ಗದ ಮಂಜುನಾಥ್ ರಾವ್, ಹಾವೇರಿಯ ಭರತ್ ಭೂಷಣ್, ಆಂಧ್ರಪ್ರದೇಶ ಮೂಲದ ಬೆಂಗಳೂರು ನಿವಾಸಿ ಮಧುಸೂದನ್ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮಂಜುನಾಥ್ ರಾವ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ತಮ್ಮ ಪುತ್ರ ಹಾಗೂ ಪತ್ನಿಯೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪುತ್ರ ಪಿಯುಸಿ ವಿದ್ಯಾರ್ಥಿಯಾಗಿದ್ದು ಉತ್ತಮ ಅಂಕ ಪಡೆದರೆ ಪ್ರವಾಸ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದರು. ಅದರಂತೆ ಪುತ್ರ ಶೇ.97ರಷ್ಟು ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದ. ಆ ಖುಷಿಯಲ್ಲಿ ಪ್ರವಾಸಕ್ಕೆ ತೆರಳಿದ್ದರು.
ಪಹಗಾಮ್ನ ಮಿನಿ ಸ್ಟಿಕ್ಟರ್ಲ್ಯಾಂಡ್ ಭಾಗದಲ್ಲಿ ಪ್ರವಾಸದ ಮೋಜಿನಲ್ಲಿದ್ದಾಗ ಉಗ್ರರ ದಾಳಿಯಿಂದಾಗಿ ಮಂಜುನಾಥ್ ರಾವ್ ಅವರ ತಲೆಗೆ ಗುಂಡು ಹೊಕ್ಕಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು.ಭರತ್ ಭೂಷಣ್ ಹಾವೇರಿ ಮೂಲದವರಾಗಿದ್ದು, ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಬೆಂಗಳೂರಿನ ಜಾಲಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರ್ನಗರದಲ್ಲಿ ವಾಸವಿದ್ದರು. ಆಂಧ್ರ ಪ್ರದೇಶದ ನೆಲ್ಲೂರಿನ ಮಧುಸೂದನ್ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ವಾಸವಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬ ಸಮೇತರಾಗಿ ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.
ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಯುತ್ತಿದ್ದಂತೆ ಪೊಲೀಸರು ಸಂಪಂಗಿರಾಮನಗರದ ನಿವಾಸದ ಬಳಿ ಧಾವಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಉಳಿದಂತೆ ಕೊಪ್ಪಳದ 12 ಮಂದಿ ದಾಳಿಯಲ್ಲಿ ಸಿಲುಕಿ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರದುರ್ಗ ಮೂಲದ ನಂದೀಶ್ ಅವರು ಮದುವೆಯ ವಾರ್ಷಿಕೋತ್ಸವಕ್ಕಾಗಿ ಪತ್ನಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಉಗ್ರರ ದಾಳಿಯಾಗುತ್ತಿದ್ದಂತೆ ಜಮ್ಮು-ಕಾಶ್ಮೀರ ಪ್ರವಾಸವನ್ನು ಮೊಟಕುಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದರು.
ಕಣಿವೆ ರಾಜ್ಯದಲ್ಲಿ ಸಂಪೂರ್ಣ ಅಘೋಷಿತ ಕರ್ಪ್ಯೂ ವಿಧಿಸಿ ಭದ್ರತೆ ಹೆಚ್ಚಿಸಲಾಯಿತು. ವಾಪಸ್ ತೆರಳಲು ಪ್ರಯತ್ನಿಸಿದರೆ ವಿಮಾನನಿಲ್ದಾಣದ ಟಿಕೆಟ್ ದರಗಳು ದುಪ್ಪಟ್ಟಾಗಿದ್ದವು. ಇದರಿಂದ ಬಹಳಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದರು. ರಾಜ್ಯದಿಂದ ಪರಿಹಾರ ಕಾರ್ಯಗಳಿಗಾಗಿ ತೆರಳಿದ ನಿಯೋಗದ ಜೊತೆ ಸಂಪರ್ಕಿಸಲು ಬಹಳಷ್ಟು ಮಂದಿ ಪ್ರಯತ್ನಿಸಿದ್ದು ಕಂಡುಬಂದಿತು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-06-2025)
- ಕಾಡುವ ಪಾತ್ರಗಳು.. ಕನ್ನಡ ಕಂಪು .. ಸೀಸ್ ಕಡ್ಡಿಯ ವಿಭಿನ್ನ ಕಥೆ
- ಸೈಲೆಂಟ್ ಆಗಿಯೇ ಕಾಡುವ `ಮಾದೇವ’ : ಮೆಚ್ಚಬೇಕು ನಿರ್ದೇಶಕನ ಧೈರ್ಯವ..!
- ಡ್ಯೂಪ್ಲೆಕ್ಸ್ ಮನೆಯಲ್ಲಿಯೇ ಕಾಡುವ `ನೀತಿ’
- ಕಾಲೇಜು ಕಲಾವಿದನ ಕಲರ್ ಫುಲ್ ಲೋಕ