ವಿಜಯಪುರ,ಏ.29– ಬಿಜೆಪಿಯಲ್ಲಿ ಗಂಡಸರಿರಲಿಲ್ಲವೇ..? ಹೆಣ್ಣು ಮಕ್ಕಳನ್ನು ಬಳಸಿಕೊಂಡು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮೂದಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ಇನ್ನು ಮುಂದೆ ನರೇಂದ್ರ ಮೋದಿಯವರ ಕಾರ್ಯಕ್ರಮಗಳಿಗೆ ನಾವು 50, 100 ಜನ ನುಗ್ಗಿ ಗಲಾಟೆ ಮಾಡುತ್ತೇವೆ. ನಮದೂ ಸರ್ಕಾರ ಇದೆ. ನಮಗೂ ಪ್ರತಿಕ್ರಿಯಿಸಲು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಪ್ರತಿಭಟನೆಗೆ ಹೆಣ್ಣು ಮಕ್ಕಳನ್ನು ಕಳುಹಿಸಿ ಕಾರ್ಯಕ್ರಮ ಅಡ್ಡಿಪಡಿಸುವ ಅಗತ್ಯವೇನಿತ್ತು, ಏಕೆ ಬಿಜೆಪಿಯಲ್ಲಿ ಗಂಡಸಿರಲಿಲ್ಲವೇ?, ಇಂತಹ ನಡವಳಿಕೆಗಳಿಗೆ ಪ್ರತಿಕ್ರಿಯೆಗಳು ವ್ಯಕ್ತವಾದರೆ ಪರಿಸ್ಥಿತಿ ಏನಾಗುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಗೊಂದಲಗಳಾದಾಗ ಯಾರು ಅದು ಅಧಿಕಾರಿ ಎಂದು ಕೈ ಎತ್ತಿ ಕೇಳಿದರು. ಅದನ್ನು ಹೊಡೆಯಲು ಹೋಗಿದ್ದರು ಎಂದು ಬಿಂಬಿಸಲಾಗಿದೆ. ವೇದಿಕೆಯ ಮೇಲೆ ಖುದ್ದು ನಾನೇ ಇದ್ದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನನ್ನನ್ನೇ ಕಳುಹಿಸಿ ಮುಖ್ಯಮಂತ್ರಿಯವರು ತಮ ಪಾಡಿಗೆ ತಾವು ಮಾತನಾಡಲಿ. ಪ್ರತಿಭಟನೆ ಮಾಡುವವರಿಗೆ ಪ್ರತಿಕ್ರಿಯಿಸದಂತೆ ಸಮಾಧಾನ ಪಡಿಸಿ ಎಂದು ಹೇಳಿದರು. ಯಾರನ್ನೂ ಹೊಡೆಯಲಿ ಸಿಎಂ ಕೈ ಎತ್ತಲಿಲ್ಲ ಎಂದು ಎಂ.ಬಿ.ಪಾಟೀಲ್ ಸಮರ್ಥಿಸಿಕೊಂಡರು.
ಮಾನವೀಯತೆ ಮೇಲೆ ನಂಬಿಕೆ ಇರುವ ವಿಶ್ವದ ಪ್ರತಿಯೊಬ್ಬರೂ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಾರೆ. ಅಮಾಯಕ ಯಾತ್ರಿಕರನ್ನು ಹತ್ಯೆ ಮಾಡುವುದನ್ನು ಕ್ಷಮಿಸುವುದಿಲ್ಲ. ದುಷ್ಕರ್ಮಿಗಳನ್ನು ಹುಡುಕಾಡಿ ಗುಂಡಿಟ್ಟು ಕೊಲ್ಲಬೇಕು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಸಹಾಯ ಮಾಡದೇ ಮೂಲೆಗುಂಪು ಮಾಡುವ ಪ್ರಯತ್ನಗಳಾಗಬೇಕು ಎಂದು ಹೇಳಿದರು.
ಭಯೋತ್ಪಾದನೆಯಂತ ಕೃತ್ಯಗಳು ಇಸ್ಲಾಂನಲ್ಲಿ ಇಲ್ಲ ಎಂದು ಅಲ್ಲಿನ ಮುಸ್ಲಿಮರು ಹೇಳಿದ್ದಾರೆ. ದಾಳಿಯ ಬಳಿಕ ಪ್ರವಾಸಿಗರ ಜೀವರಕ್ಷಣೆಗೆ ಸ್ಥಳೀಯ ಮುಸ್ಲಿಮರೇ ಮುಂದೆ ನಿಂತಿದ್ದರು. ಅಲ್ಲಿನ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕಣ್ಣೀರು ಹಾಕಿದರು ಎಂದು ವಿವರಿಸಿದರು.
ಹಿಂದೂ, ಮುಸ್ಲಿಂ ಎಂಬ ಬೇಧಭಾವವಿಲ್ಲದೆ ಶಾಂತಿ ನೆಲೆಸಬೇಕು ಎಂದು ಕಾಶೀರದಲ್ಲೂ ಜನ ಹೇಳುತ್ತಿದ್ದಾರೆ. ಅಲ್ಲಿನ ಪ್ರವಾಸೋದ್ಯಮವನ್ನು ಹಾಳು ಮಾಡಬೇಕೆಂಬ ಕಾರಣಕ್ಕಾಗಿ ದುಷ್ಕರ್ಮಿಗಳು ಪಹಲ್ಗಾಮ್ನಲ್ಲಿ ದಾಳಿ ಮಾಡಿದ್ದಾರೆ. ಪಾಕಿಸ್ತಾನದ ಉಗ್ರವಾದವನ್ನು ದೇಶದಲ್ಲಿ ಪ್ರತಿಯೊಬ್ಬರೂ ತೀವ್ರವಾಗಿ ಪ್ರತಿರೋಧಿಸಿರುವುದು ಕಂಡುಬರುತ್ತಿದೆ ಎಂದರು.
ಚೀನಾ ಹಾಗೂ ಇತರ ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ನೀಡುವುದು ಸರಿಯಲ್ಲ. ಭಯೋತ್ಪಾದನೆ ಎಂಬುದು ಯಾವುದೇ ದೇಶಕ್ಕೂ ಒಳ್ಳೆಯದಲ್ಲ. ಪಾಕಿಸ್ತಾನ ದರಿದ್ರ ದೇಶ. ಅವರಿಗೆ ಬೇರೆ ಕೆಲಸ ಇಲ್ಲ. ಇಂತಹ ಕೆಲಸಗಳನ್ನು ಮಾಡಿಸಲು ಜೀವನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಗಬೇಕು. ಅದಕ್ಕಾಗಿ ಯುದ್ಧ ಸನ್ನದ್ಧ ಪರಿಸ್ಥಿತಿ ಅಗತ್ಯ. ಇಲ್ಲವಾದರೆ ಪಾಕಿಸ್ತಾನವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಬೇಡ ಎನ್ನಲು ಬಲವಾದ ಕಾರಣಗಳಿವೆ. ಎರಡೂ ಕಡೆಗಳಲ್ಲಿ ಜೀವಹಾನಿಯಾಗುತ್ತದೆ. ಸಾಕಷ್ಟು ಹಾನಿಯಾಗುತ್ತದೆ ಎಂಬ ಉದ್ದೇಶಕ್ಕಾಗಿ ಯುದ್ಧ ಅನಿವಾರ್ಯವಲ್ಲದ ಹೊರತು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.