ನವದೆಹಲಿ, ಮೇ.4- ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ, ದೇಶಾದ್ಯಂತ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ದೀರ್ಘ ರಜೆ ರದ್ದುಗೊಳಿಸಲಾಗಿದೆ.
ದೇಶಾದ್ಯಂತ 12 ಶಸ್ತ್ರಾಸ್ತ್ರ ಕಾರ್ಖಾನೆಗಳ ಸಮೂಹವಾದ ಮುನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್) ತನ್ನ ಹೆಚ್ಚಿನ ಸ್ಥಾವರಗಳಲ್ಲಿನ ಉದ್ಯೋಗಿಗಳ ದೀರ್ಘ ರಜೆಗಳನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಎರಡು ತಿಂಗಳವರೆಗೆ ಎರಡು ದಿನಗಳಿಗಿಂತ ಹೆಚ್ಚಿನ ರಜೆಯನ್ನು ಅನುಮತಿಸಲಾಗುವುದಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಏ.22 ರ ನಂತರದ ಉದ್ವಿಗ್ನತೆಗೂ ಈ ನಿರ್ದೇಶನಕ್ಕೂ ಯಾವುದೇ ಸಂಬಂಧವಿಲ್ಲ.
ಚಂದ್ರಾಪುರದಿಂದ ಜಬಲ್ಪುರದ ವರೆಗಿನ ಆರ್ಡನೆನ್ಸ್ ಫ್ಯಾಕ್ಟರಿ ಏಪ್ರಿಲ್ ತಿಂಗಳ ಉತ್ಪಾದನಾ ಗುರಿಗಳನ್ನು ತಲುಪಿಲ್ಲ ಹೀಗಾಗಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಲಾಗಿದೆ.
ಜಾಗತಿಕ ರಫ್ತು ಆದೇಶಗಳ ಒತ್ತಡ ನಿಭಾಯಿಸಬೇಕಿದೆ ಎಂದು ಹಿರಿಯ ನಿರ್ವಹಣಾ ಮೂಲಗಳು ಸ್ಪಷ್ಟಪಡಿಸಿವೆ. ತುರ್ತು ಸಂದರ್ಭದಲ್ಲಿ ನೌಕರರು ಸೂಕ್ತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.