Friday, June 6, 2025
Homeಅಂತಾರಾಷ್ಟ್ರೀಯ | Internationalಕನ್ನಡದ ಲೇಖಕಿ ಬಾನು ಮುಷ್ತಾಕ್‌ ಅವರ ಕೃತಿಗೆ ಅಂತರರಾಷ್ಚ್ರೀಯ ಬೂಕರ್ ಪ್ರಶಸ್ತಿ

ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಅವರ ಕೃತಿಗೆ ಅಂತರರಾಷ್ಚ್ರೀಯ ಬೂಕರ್ ಪ್ರಶಸ್ತಿ

Banu Mushtaq scripts history, wins International Booker for 'Heart Lamp'

ಲಂಡನ್, ಮೇ 21- ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ಕಾಕ್ ಅವರ ಹಸೀನಾ ಮತ್ತು ಇತರ ಕತೆಗಳು ಕಥಾಸಂಕಲನದ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್ ಕೃತಿಯು ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಕನ್ನಡದ ಕೃತಿಯೊಂದಕ್ಕೆ ಈ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು. ಹೀಗಾಗಿ ಈ ಪ್ರಶಸ್ತಿ ಕನ್ನಡಿಗರಲ್ಲಿ ಪುಳಕವನ್ನುಂಟು ಮಾಡಿದೆ.

ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾರೀ ಪೈಪೋಟಿ ಹಾಗೂ ಸ್ಪರ್ಧೆ ಇರುತ್ತದೆ. ಇಷ್ಟೊಂದು ಸ್ಪರ್ಧೆಗಳ ನಡುವೆ ಪ್ರಶಸ್ತಿ ಕನ್ನಡತಿಗೆ ಸಂದಿದೆ. ನಿನ್ನೆ ನಡೆದ ಸಮಾರಂಭದಲ್ಲಿ ಈ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿದೆ. ವಿಜೇತರಿಗೆ 50,000 ಪೌಂಡ್ ಬಹುಮಾನ ಸಿಗಲಿದೆ. ಇದನ್ನು ಲೇಖಕರು ಹಾಗೂ ಅನುವಾದಕರ ನಡುವೆ ಹಂಚಲಾಗುತ್ತದೆ. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಪ್ರಶಸ್ತಿಯ ಅಂತಿಮ ಘಟ್ಟಕ್ಕೆ ಆರು ಕೃತಿಗಳು ತಲುಪಿದ್ದವು. ಅವುಗಳ ಪೈಕಿ ಬಾನು ಮುಷ್ಕಾಕ್ ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡ ಸಾಹಿತ್ಯಕ್ಕೆ ವಿಶ್ವ ವೇದಿಕೆಯಲ್ಲಿ ಮಹತ್ವದ ಸ್ಥಾನ ದೊರೆತಂತಾಗಿದೆ. ಇನ್ನು ಇದು 12 ಕಥೆಗಳ ಗುಚ್ಛವಾಗಿದೆ. 1990 ಹಾಗೂ 2023ರ ನಡುವೆ ಪ್ರಕಟವಾಗಿದ್ದ 12 ಕತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ದೀಪಾ ಭಕ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು.

ಹಾರ್ಟ್ ಲ್ಯಾಂಪ್ ಕೃತಿ ಈ ಹಿಂದೆ ಲಾಂಗ್ ಲಿಸ್ಟ್‌ಗೆ ಆಯ್ಕೆಯಾಗಿತ್ತು. ಹಾರ್ಟ್ ಲ್ಯಾಂಪ್ ಕಳೆದ ವರ್ಷ ಪೆನ್ ಟ್ರಾನ್ಸೆಟ್ಸ್ ಪ್ರಶಸ್ತಿಯನ್ನೂ ಪಡೆದಿತ್ತು. ಅಂತಿಮ ಹಂತದಲ್ಲಿದ್ದ ಆರು ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಎರಡು ಫ್ರೆಂಚ್ ಮತ್ತು ಡ್ಯಾನಿಶ್, ಇಟಾಲಿಯನ್, ಕನ್ನಡ ಮತ್ತು ಜಪಾನೀ ಭಾಷೆಯ ತಲಾ ಒಂದು ಕೃತಿಗಳಿದ್ದವು.

ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ. ಟೇಟ್ ಮಾಡ್ರನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಪ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ.

ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು ಎಂದು ಹೇಳಿದ್ದಾರೆ.
ನನ್ನ ಸುಂದರವಾದ ಭಾಷೆಗೆ ದೊರೆತ ಎಂತಹ ಸೊಗಸಾದ ಗೆಲುವು ಇದು ಎಂದು ಅನುವಾದಕಿ ಭಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

ಫ್ರೆಂಚ್‌ನಿಂದ ಅನುವಾದವಾದ ಎರಡು ಕೃತಿಗಳು, ಜಪಾನ್, ಇಟಾಲಿಯನ್ ಹಾಗೂ ಡ್ಯಾನಿಷ್ ಭಾಷೆಯ ತಲಾ ಒಂದು ಕೃತಿ ಶಾರ್ಟ್ ಲಿಸ್ಟ್‌ನಲ್ಲಿದ್ದವು. ಯುಕೆ ಮತ್ತು ಐರ್ಲೆಂಡ್‌ನಲ್ಲಿ ಪ್ರಕಟವಾದ ಇಂಗ್ಲಿಷ್‌ಗೆ ಅನುವಾದಿಸಲಾದ ಅತ್ಯುತ್ತಮ ಕಾದಂಬರಿ ಅಥವಾ ಸಣ್ಣ ಕಥೆಗಳ ಸಂಗ್ರಹಕ್ಕೆ ಈ ಬೂಕರ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಾಹಿತ್ಯ ವಲಯದ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿ ಕೂಡ ಇದಾಗಿದೆ.

ಸಣ್ಣ ಕಥೆಗಳಲ್ಲಿ ಸಂಬಂಧದ ಚಿತ್ರಣ
ಈ ಗೆಲುವು ವೈವಿಧ್ಯತೆಗೆ ಸಿಕ್ಕ ಜಯ. ಇತರ 6 ಕೃತಿಗಳು ಸ್ಪರ್ಧೆಯಲ್ಲಿದ್ದವು. ಬಾನು ಮುಷ್ಕಾಕ್ ಅವರ ಕೃತಿಯು ತೀರ್ಪುಗಾರರ ಮೆಚ್ಚಿಸಿತು. ಕೃತಿಯಲ್ಲಿನ ಹಾಸ್ಯ, ಚುರುಕುತನ, ವಾಸ್ತವತೆ ಜೊತೆಗೆ ನೋವುಗಳನ್ನು ಬರಹದಲ್ಲಿ ಮೂಡಿಸಿದ ಪರಿ ತೀರ್ಪುಗಾರರಿಗೂ ಇಷ್ಟವಾಯ್ತು ಎಂದು ಬಾನು ಮುಷ್ಕಾಕ್ ಹೇಳಿದ್ದಾರೆ.

ಕುಟುಂಬ ಮತ್ತು ಸಮುದಾಯದ ಸಂಬಂಧಗಳನ್ನು ಈ ಕೃತಿಯಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಪ್ರಶಸ್ತಿ ಪಡೆದ ಬಳಿಕ ಮಾತಾಡಿದ ಬಾನು ಮುಷ್ಕಾಕ್, ಯಾವುದೇ ಕಥೆಯು ಚಿಕ್ಕದಲ್ಲ. ಮಾನವ ಅನುಭವದ ಕಥೆಯಲ್ಲಿ ಪ್ರತಿಯೊಂದು ಎಳೆಯೂ ಮುಖ್ಯವಾಗಿರುತ್ತದೆ ಎಂದರು. ಸಾಹಿತ್ಯವು ನಾವು ಪರಸ್ಪರರ ಮನಸ್ಸಿನಲ್ಲಿ ಬದುಕಲು ಸಾಧ್ಯವಾಗುವ ಪವಿತ್ರ ಸ್ಥಳವಾಗಿದೆ. ಒಬ್ಬ ವಿಮರ್ಶಕನಾಗಿರುವುದು ಸುಲಭವಲ್ಲ ಎಂದು ಹೇಳಿದರು.

ಇದೇ ವೇಳೆ ಮಾತಾಡಿದ ಅನುವಾದಕಿ ಭಸ್ತಿ ಹರ್ಷ ಅವರು ಸುಂದರವಾದ ಭಾಷೆಗೆ ದೊರೆತ ಎಂತಹ ಸೊಗಸಾದ ಗೆಲುವು ಇದು ಎಂದು ಸಂತಸ ಹಂಚಿಕೊಂಡಿದ್ದಾರೆ. ತರ್ಜುಮೆಗೊಂಡು ತೀರ್ಪುಗಾರರಿಂದ ಆಯ್ಕೆಗೊಂಡ ಪ್ರಮುಖ ಪುಸ್ತಕ ಪ್ರಶಸ್ತಿ ಮೊತ್ತ 52,00,000 ರೂ. ಆಗಿದ್ದು, ಇದರಲ್ಲಿ ಲೇಖಕರಿಗೆ 25,00,000 ಹಾಗೂ ತರ್ಜುಮೆಗಾರರಿಗೆ 26,00,000 ರೂ. ನೀಡಲಾಗುವುದು. ಜೊತೆಗೆ ಶಾರ್ಟ್‌ಸ್ಟ್ ಪ್ರತಿಯೊಂದು ಪುಸ್ತಕಕ್ಕೆ ಸುಮಾರು 5,20,000 ರೂ. ಬಹುಮಾನವಿದೆ. ಇದರಲ್ಲಿ ಮೂಲ ಲೇಖಕರಿಗೆ 2,60,000 ರೂ., ಅನುವಾದಕರಿಗೆ 2,60,000 ರೂ. ನೀಡಲಾಗುತ್ತದೆ.

ಪುಸ್ತಕ ಕುರಿತು ಬಾನು ಮುಷ್ಕಾಕ್ ಅವರ ಕೃತಿಯು ಕುಟುಂಬ ಮತ್ತು ಸಮುದಾಯದ ಉದ್ವಿಗ್ನತೆಗಳ ಭಾವಚಿತ್ರಗಳನ್ನು ಸೆರೆಹಿಡಿಯುವ ಚಮತ್ಕಾರಿ, ಎದ್ದುಕಾಣುವ, ಆಡುಮಾತಿನ, ಹೃದಯಸ್ಪರ್ಶಿ ಮತ್ತು ರೋಮಾಂಚನಕಾರಿ ಶೈಲಿಯನ್ನು ಹೊಂದಿದೆ.

ದಕ್ಷಿಣ ಭಾರತದ ಮುಸ್ಲಿಂ ಮಹಿಳೆಯರ ಜೀವನದ ಮೂಲಕ ಆಧುನಿಕತೆಯನ್ನು ಅತಿಕ್ರಮಿಸುವ ಕಥೆಯನ್ನು ಈ ಕೃತಿಯು ಒದಗಿಸುತ್ತದೆ. ನನ್ನ ಕಥೆಗಳು ಮಹಿಳೆಯರ ಬಗ್ಗೆ – ಧರ್ಮ, ಸಮಾಜ ಮತ್ತು ರಾಜಕೀಯವು ಅವರಿಂದ ಪ್ರಶ್ನಾತೀತ ಅನುಕಂಪವನ್ನು ಹೇಗೆ ಬಯಸುತ್ತದೆ, ಅವರ ಮೇಲೆ ಅಮಾನವೀಯ ಕ್ರೌರ್ಯ ಹೇರುವಿಕೆ. ಅವರನ್ನು ಅಧೀರರನ್ನಾಗಿ ಹೇಗೆ ಮಾಡುತ್ತದೆ ಎಂದು ವಿವರಿಸುತ್ತದೆ ಎನ್ನುತ್ತಾರೆ ಬಾನು ಮುಷ್ಕಾಕ್.

ಮಾಧ್ಯಮಗಳಲ್ಲಿ ವರದಿಯಾಗುವ ದೈನಂದಿನ ಘಟನೆಗಳು ಮತ್ತು ನಾನು ಅನುಭವಿಸಿದ ವೈಯಕ್ತಿಕ ಅನುಭವಗಳು ನನಗೆ ಸ್ಫೂರ್ತಿಯಾಗಿವೆ. ಮಹಿಳೆಯರ ನೋವು, ಸಂಕಟ ಮತ್ತು ಅಸಹಾಯಕ ಜೀವನಗಳು ನನ್ನೊಳಗೆ ಆಳವಾದ ಭಾವನಾತ್ಮಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ನಾನು ವ್ಯಾಪಕವಾದ ಸಂಶೋಧನೆಯಲ್ಲಿ ತೊಡಗುವುದಿಲ್ಲ. ನನ್ನ ಹೃದಯವೇ ನನ್ನ ಅಧ್ಯಯನ ಕ್ಷೇತ್ರ ಎನ್ನುತ್ತಾರೆ ಅವರು.

ಪುಸ್ತಕದ ಅನುವಾದಕಿ ದೀಪಾ ಬಸ್ತಿ, ನನಗೆ, ಅನುವಾದವು ಒಂದು ಸಹಜ ಅಭ್ಯಾಸವಾಗಿದೆ, ಪ್ರತಿ ಪುಸ್ತಕವು ಸಂಪೂರ್ಣವಾಗಿ ವಿಭಿನ್ನ ಪ್ರಕ್ರಿಯೆಯನ್ನು ಬಯಸುತ್ತದೆ. ಬಾನು ಅವರ ಕಥೆಗಳೊಂದಿಗೆ, ನಾನು ಮೊದಲು ಅವರು ಪ್ರಕಟಿಸಿದ ಎಲ್ಲಾ ಕಾದಂಬರಿಗಳನ್ನು ಓದಿದ್ದೇನೆ. ಮೊದಲು ನಾನು ಅದನ್ನು ಹಾರ್ಟ್ ಲ್ಯಾಂಪ್‌ನಲ್ಲಿರುವ ಕಥೆಗಳಿಗೆ ಸಂಕುಚಿತಗೊಳಿಸುತ್ತೇನೆ. ಕಥೆಯೇ ನನ್ನ ಆಸಕ್ತಿ ಕ್ಷೇತ್ರ. ಈ ಸಾಧನೆಯು ಐತಿಹಾಸಿಕ ಕ್ಷಣವನ್ನು ಸೂಚಿಸುತ್ತದೆ, ಹಾರ್ಟ್ ಲ್ಯಾಂಪ್ ಈ ಮಟ್ಟದಲ್ಲಿ ಗುರುತಿಸಲ್ಪಟ್ಟ ಕೆಲವೇ ಕನ್ನಡ ಭಾಷೆಯ ಕೃತಿಗಳಲ್ಲಿ ಒಂದಾಗಿದೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕತೆ ಹೊಂದಿದ್ದು, ಮುಸ್ಲಿಂ ಸಮುದಾಯಗಳಲ್ಲಿನ ಮಹಿಳೆಯರು ಮತ್ತು ಬಾಲಕಿಯರ ದೈನಂದಿನ ಅನುಭವಗಳನ್ನು ಓರೆಗಚ್ಚುವ ಕಥೆಯನ್ನು ಈ ಪುಸ್ತಕ ಹೊಂದಿದೆ. ಸೌಮ್ಯ ಹಾಸ್ಯದ ಜೊತೆಗೆ ಕುಟುಂಬ ಮತ್ತು ಸಮುದಾಯದ ಚಿತ್ರಣಗಳಿವೆ. ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಮುದಾಯದ ಯುವತಿಯರ ಮತ್ತು ಮಹಿಳೆಯರ ಜೀವನಶೈಲಿಯನ್ನು ಬಿಂಬಿಸುವ ಕಥೆಗಳನ್ನು ಒಳಗೊಂಡಿದೆ. ಈ ಕಥೆಗಳನ್ನು 1990 ಮತ್ತು 2023ರಲ್ಲಿ ಬರೆಯಲಾಗಿದ್ದು, ಹಾಸ್ಯ, ಬುದ್ದಿವಂತಿಕೆ ಮತ್ತು ಭಾವನಾತ್ಮಕ ಶಕ್ತಿಯ ಮೂಲಕ ಆಳವಾದ ಸಾಮಾಜಿಕ ತಲ್ಲಣಗಳನ್ನು ಕಥೆಯ ಮೂಲಕ ವಿವರಿಸಲಾಗಿದೆ.

ಶಾರ್ಟ್‌ಲಿಸ್ಟ್ ಹೇಗೆ? 2025ರ ತೀರ್ಪುಗಾರ ಮಂಡಳಿ ಆರು ಪುಸ್ತಕಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದು, ಅದರಲ್ಲಿ ಐದು ಕಾದಂಬರಿ ಮತ್ತು ಸಣ್ಣ ಕಥೆಗಳ ಒಂದು ಸಂಗ್ರಹವಿದೆ. ಬೂಕರ್ ಪ್ರಶಸ್ತಿಗೆ ಆಯ್ಕೆಯಲ್ಲಿ ಲೇಖಕ ಮ್ಯಾಕ್ಸ್ ಪೋರ್ಟರ್ ಅಧ್ಯಕ್ಷತೆ ವಹಿಸಿದ್ದಾರೆ. ಪ್ರಶಸ್ತಿ ವಿಜೇತ ಕವಿ, ನಿರ್ದೇಶಕ ಮತ್ತು ಛಾಯಾಗ್ರಾಹಕ ಕ್ಯಾಲೆಬ್ ಫೆಮಿ, ವಾಸಫಿರಿಯ ಬರಹಗಾರ ಮತ್ತು ಪ್ರಕಾಶನ ನಿರ್ದೇಶಕಿ ಸನಾ ಗೋಯಲ್, ಲೇಖಕ ಆಂಟನ್ ಹರ್ ಮತ್ತು ಪ್ರಶಸ್ತಿ ವಿಜೇತ ಗಾಯಕ ಗೀತರಚನೆಕಾರ ಬೆತ್ ಆರ್ಟನ್ ಇತರೆ ತೀರ್ಪುಗಾರ ಸದಸ್ಯರಾಗಿದ್ದರು.

ಪಬ್ಲಿಷರ್‌ಗಳು ಸಲ್ಲಿಸಿದ 154 ಪುಸ್ತಕಗಳನ್ನು ತೀರ್ಪುಗಾರರು ಆಯ್ಕೆ ಮಾಡಬೇಕಿದೆ. ಈ ಪ್ರಶಸ್ತಿ ಆರಂಭವಾದಾಗಿನಿಂದ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಪುಸ್ತಕಗಳು ಮಂಡಳಿಗೆ ಹೋಗಿವೆ. 2025ರ ಸಮಿತಿ ಅನುಸಾರ ಯುಕೆ ಮತ್ತು ಐರ್ಲೆಂಡ್‌ನಲ್ಲಿ 2024 ಮೇ 1ರಿಂದ 2025ರ ಏಪ್ರಿಲ್ 30 ಬಿಡುಗಡೆಯಾದ ಅತ್ಯುತ್ತಮ ಇಂಗ್ಲಿಷ್ ಭಾಷೆಯ ಸಣ್ಣ ಕಥೆ, ಸಾಹಿತ್ಯಗಳು ಇವೆ. ವಿಜೇತರನ್ನು ಮೇ 20ರಂದು ಲಂಡನ್‌ನ ಟೇಟ್ ಮಾರ್ಡನ್‌ನಲ್ಲಿ ಬಹಿರಂಗಪಡಿಸಲಾಗುತ್ತದೆ.

ಪುಸ್ತಕದ ಪ್ರಮುಖ ವೈಶಿಷ್ಟ್ಯ ಮತ್ತು ನಿರೂಪಣೆ : ಧೈಯ, ವಿವರಣೆ, ಮಹಿಳೆಯರ ಜೀವನ, ಆಕಾಂಕ್ಷೆ, ಕಷ್ಟ ಮತ್ತು ಸಂಪ್ರದಾಯಸ್ಥ ಸಮುದಾಯದಲ್ಲಿ ಮಹಿಳೆಯರ ಸ್ಥಿತಿ ಸ್ಥಾಪಕತ್ವ, ಜಾತಿ ಮತ್ತು ವರ್ಗ, ವ್ಯವಸ್ಥಿತ ದಬ್ಬಾಳಿಕೆಯ ವಿಮರ್ಶೆ ಮಾಡಲಾಗಿದೆ. ಕುಟುಂಬ ಮತ್ತು ಸಮುದಾಯ ಕುಟುಂಬಗಳೊಳಗಿನ ಪರಸ್ಪರ ಸಂಬಂಧ ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಪರಿಶೋಧಿಸುತ್ತದೆ. ಸಾಮಾಜಿಕ ಅನ್ಯಾಯ ಭ್ರಷ್ಟಾಚಾರ, ಹಿಂಸೆ ಮತ್ತು ತಾರತಮ್ಯವನ್ನು ಅಚಲ ಪ್ರಾಮಾಣಿಕತೆಯಿಂದ ಪರಿಹರಿಸುತ್ತದೆ. ಹಾಸ್ಯ ಮತ್ತು ವಿಡಂಬನೆ ಸಾಮಾಜಿಕ ರೂಢಿಗಳನ್ನು ವಿಮರ್ಶಿಸಲು ಸೌಮ್ಯ ಹಾಸ್ಯವನ್ನು ಬಳಸುತ್ತದೆ.

ಬಾನು ಮುಷ್ಕಾಕ್ ಪರಿಚಯ :
ಪತ್ರಕರ್ತೆ ಮತ್ತು ವಕೀಲರಾಗಿಯೂ ಮುಸ್ತಾಕ್ ಗುರುತಿಸಿಕೊಂಡಿದ್ದು, ಮಹಿಳೆಯರ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕೆ ಸಮರ್ಪಿಸಿಕೊಂಡಿದ್ದು, ಅವರ ಕಥೆಗಳಲ್ಲೂ ಇವು ಬಿಂಬಿತವಾಗಿದೆ. ಅವರ ಕಥೆಗಳಲ್ಲಿ ವ್ಯಕ್ತಿಗಳ ಹೋರಾಟ ಹೊಂದಿದೆ. 1970-80ರಲ್ಲಿ ಮುಸ್ತಾಕ್ ಪ್ರಗತಿಪರ ಪ್ರತಿಭಟನೆಯ ಸಾಹಿತ್ಯದ ಬರವಣಿಗೆಯನ್ನು ಅಳವಡಿಸಿಕೊಂಡವರು. ಜಾತಿ ಮತ್ತು ವರ್ಗ ವ್ಯವಸ್ಥೆಯ ಟೀಕೆ, ಬಂಡಾಯ ಸಾಹಿತ್ಯದ ಚಳವಳಿಯು ದಲಿತ ಮತ್ತು ಮುಸ್ಲಿಂ ಬರಹಗಾರರನ್ನು ಹುಟ್ಟುಹಾಕಿತು.

ಮುಸ್ತಾಕ್ ಇಲ್ಲಿಯವರೆಗೆ ಆರು ಸಣ್ಣ ಕಥಾ ಸಂಕಲನಗಳು, ಒಂದು ಕಾದಂಬರಿ, ಒಂದು ಪ್ರಬಂಧ ಸಂಗ್ರಹ ಮತ್ತು ಒಂದು ಕವನ ಸಂಕಲನ ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳು ಸೇರಿದಂತೆ ಅವರ ಸಾಹಿತ್ಯ ಕೃತಿಗಳಿಗಾಗಿ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಅನೇಕ ಕಥೆಗಳು ಉರ್ದು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಅನುವಾದಿಸಲ್ಪಟ್ಟಿದ್ದು, ಇಂಗ್ಲಿಷ್‌ಗೆ ಮೊದಲ ಪುಸ್ತಕ ಅನುವಾದ ಹಾರ್ಟ್ ಲ್ಯಾಂಪ್ 2025 ರಲ್ಲಿ ಪ್ರಕಟವಾಗಿದ್ದು, ಇದು ಪ್ಯಾರಿಸ್ ವಿಮರ್ಶೆಯಲ್ಲಿ ಪ್ರಕಟವಾಗಿದೆ.

ಮುಸ್ತಾಕ್ ಸಾಹಿತ್ಯವನ್ನು ಮೀರಿ. ಅವರು ಪತ್ರಕರ್ತೆಯಾಗಿ ಒಂಬತ್ತು ವರ್ಷಗಳನ್ನು ಕಳೆದಿದ್ದಾರೆ ಮತ್ತು ಹಾಸನ ನಗರ ಪುರಸಭೆಯಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಅವರ ಕರಿ ನಾಗರಗಳು ಕೃತಿಯು ಚಲನಚಿತ್ರ ನಿರ್ಮಾಪಕ ಗಿರೀಶ್ ಕಾಸರವಳ್ಳಿ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಹಸೀನಾ (2004)ಗೆ ಸೂರ್ತಿಯಾಗಿದೆ. ಇಂಗ್ಲಿಷ್ ಸಾಹಿತ್ಯ ಜಗತ್ತಿನಲ್ಲಿ ಅತ್ಯುತ್ತಮ ಪ್ರಶಸ್ತಿಗಳಲ್ಲಿ ಬೂಕರ್ ಪ್ರಶಸ್ತಿ ಒಂದಾಗಿದ್ದು, ಇದು ಜಾಗತಿಕ ಮನ್ನಣೆ, ಪ್ರಶಸ್ತಿ ಮತ್ತು ಓದುಗ ವಲಯವನ್ನು ಕಳೆದ ಐದು ದಶಕದಿಂದ ಹೆಚ್ಚಿಸುತ್ತಿದೆ. ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ತೀರ್ಪುಗಾರರ ಆಯ್ಕೆ ಮೇಲೆ ಪ್ರಕಟಿಸಲಾಗುವುದು. ಇಂಗ್ಲಿಷ್‌ ನಲ್ಲಿ ಬರೆದ ಹಾಗೂ ಯುಕೆ ಮತ್ತು ಐರ್ಲೆಂಡ್‌ನಲ್ಲಿ ಪ್ರಕಟವಾದ ಉತ್ತಮ ಕಥೆಗಳಿಗೆ ಇದು ಲಭ್ಯವಾಗುತ್ತದೆ. ಇದು ಪ್ರಶಸ್ತಿ ವಿಜೇತರ ಬದುಕನ್ನೇ ಬದಲಿಸುತ್ತದೆ.

ಕುಮಾರಸ್ವಾಮಿ ಅಭಿನಂದನೆ :
ಜಾಗತಿಕ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ನಮ್ಮ ನಾಡಿನ ಹೆಮ್ಮೆಯ ಲೇಖಕಿ ಬಾನು ಮುಷ್ಕಾಕ್ ಅವರಿಗೆ ಕೇಂದ್ರ ಬೃಹತ್ ಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಾನು ಮುಷ್ಕಾಕ್ ಅವರಿಂದ ಇದೇ ರೀತಿಯಲ್ಲಿ ಇನ್ನಷ್ಟು ಉತ್ತಮ ಕೃತಿಗಳು ಬರಲಿ. ಅವರಿಂದ ಕನ್ನಡ ದಾಹಿತ್ಯಲೋಕ ಮತ್ತಷ್ಟು ಶ್ರೀಮಂತವಾಗಲಿ ಹಾಗೂ ಜಗತ್ತಿನ ಉದ್ದಗಲಕ್ಕೂ ಕನ್ನಡದ ಕಂಪು ಹರಡಲಿ ಎಂದು ಹಾರೈಸಿದ್ದಾರೆ. ಹಾಗೆಯೇ ಬೂಕರ್ ಪ್ರಶಸ್ತಿ ಪುರಸ್ಕೃತವಾಗಿರುವ ಅವರ ಹೃದಯ ದೀಪ ಕೃತಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ ಲೇಖಕಿ ದೀಪಾ ಭಸ್ತಿ ಅವರಿಗೂ ಶುಭತೋರಿದ್ದಾರೆ.

RELATED ARTICLES

Latest News