ಬೆಂಗಳೂರು,ಮೇ 21– ರಾಹುಲ್ಗಾಂಧಿಯವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ಗೆ ಹೋಲಿಸಿ ಹೀಯಾಳಿಸಿದ ಬಿಜೆಪಿಯ ಐಟಿ ಸೆಲ್ನ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಜಾಮೀನುರಹಿತ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಎಂ.ಎಂ.ಶ್ರೀಧರ್ ನೀಡಿರುವ ದೂರು ಆಧರಿಸಿ ನಿನ್ನೆ ಹೈಗ್ರೌಂಡ್್ಸ ಪೊಲೀಸ್ ಠಾಣೆಯಲ್ಲಿ ಭಾರತ ನ್ಯಾಯ ಸಂಹಿತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ದೂರು ನೀಡಿರುವ ಶ್ರೀಧರ್ರವರು ಅಮಿತ್ ಮಾಳವೀಯ ತಮ ಸಾಮಾಜಿಕ ಜಾಲತಾಣ ಎಕ್್ಸ ಖಾತೆಯಲ್ಲಿ ಸುಳ್ಳು ಹಾಗೂ ದ್ವೇಷ ಹರಡುವಂತಹ ಪೋಸ್ಟ್ ಮಾಡಿದ್ದಾರೆ. ರಾಹುಲ್ಗಾಂಧಿ ಪಾಕಿಸ್ತಾನದ ಹಿತೈಷಿ ಭಾಷೆಯಲ್ಲಿ ಮಾತನಾಡುವುದು ಅಚ್ಚರಿಯೇನಲ್ಲ. ಆಪರೇಷನ್ ಸಿಂಧೂರ್ಗೆ ಸಂಬಂಧಪಟ್ಟಂತೆ ರಾಹುಲ್ಗಾಂಧಿ ಪ್ರಧಾನಿಯವರನ್ನು ಅಭಿನಂದಿಸಿಲ್ಲ. ಭಾರತ ತನ್ನ ಪ್ರಾಬಲ್ಯವನ್ನು ಪ್ರದರ್ಶನ ಮಾಡಿದೆ.
ಅದರ ಹೊರತಾಗಿಯೂ ರಾಹುಲ್ಗಾಂಧಿ ನಾವು ಎಷ್ಟು ಜೆಟ್ಗಳನ್ನು ಕಳೆದುಕೊಂಡಿದ್ದೇವೆ ಎಂದು ಪದೇಪದೇ ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ಸೇನೆಯ ವಕ್ತಾರರು ಈಗಾಗಲೇ ವಿವರಣೆ ನೀಡಿದ್ದಾರೆ. ಆದರೂ ರಾಹುಲ್ಗಾಂಧಿ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ರಾಹುಲ್ಗಾಂಧಿಯವರ ಮುಂದಿನ ಗುರಿಯೇನು?, ನಿಶಾನ್ ಇ ಪಾಕಿಸ್ತಾನ್ ಅವರ ಗುರಿಯೇ ಎಂದು ಪ್ರಶ್ನಿಸಿದ್ದು, ಅಸೀಂ ಮುನೀರ್ ಮತ್ತು ರಾಹುಲ್ಗಾಂಧಿ ಅವರ ಭಾವಚಿತ್ರಗಳನ್ನು ಜೋಡಿಸಿ ಅರ್ಧನಾರೀಶ್ವರ ರೂಪ ಕೊಟ್ಟು ಪ್ರಕಟಿಸಲಾಗಿದೆ.
ಜೊತೆಗೆ ಒನ್ ಅಜೆಂಡಾ ಎಂಬ ಒಕ್ಕಣೆಯನ್ನೂ ನೀಡಲಾಗಿದೆ. ಇದು ಕೋಮುದ್ವೇಷವನ್ನು ಪ್ರಚೋದಿಸುವ ಪ್ರವೃತ್ತಿ ಎಂದು ದೂರುದಾರರು ಆರೋಪಿಸಿದ್ದಾರೆ.ದುರುದ್ದೇಶಪೂರಕವಾಗಿ ರಾಹುಲ್ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಪ್ರಚೋದನಾಕಾರಿ ಪ್ರವೃತ್ತಿಯನ್ನು ಅಮಿತ್ ಮಾಳವೀಯ ಪ್ರದರ್ಶಿಸಿದ್ದಾರೆ.
ರಾಷ್ಟ್ರೀಯ ಸಮಗ್ರತೆ, ಶಾಂತಿ ಮತ್ತು ಸಾಮರಸ್ಯವನ್ನು ಹಾಳು ಮಾಡುವ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ.ಪಹಲ್ಗಾಮ್ನಲ್ಲಿನ ಭಯೋತ್ಪಾದಕರ ದಾಳಿಗೆ ಪ್ರತ್ಯುತ್ತರ ನೀಡುವ ಸೇನೆಯ ಪ್ರಯತ್ನಕ್ಕೆ ಕಾಂಗ್ರೆಸ್ ಹೃದಯಪೂರ್ವಕವಾಗಿ ಬೆಂಬಲ ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರಗಳಿಗೂ ಸಹಮತ ವ್ಯಕ್ತಪಡಿಸಿದೆ. ಆದರೆ ವಿದೇಶಾಂಗ ಸಚಿವ ಜೈಶಂಕರ್ ಅವರು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಎಂಬುದನ್ನು ರಾಹುಲ್ಗಾಂಧಿ ಪ್ರಶ್ನೆ ಮಾಡಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ವಿಚಾರದ ಪೂರಕವಾಗಿ ರಾಹುಲ್ಗಾಂಧಿ ನಡೆದುಕೊಳ್ಳುತ್ತಿದ್ದು, ಅಮಿತ್ ಮಾಳವೀಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರುದಾರರು ಆಕ್ಷೇಪಿಸಿದ್ದು, ಅಮಿತ್ ಮಾಳವೀಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.