ಬೆಂಗಳೂರು, ಮೇ 29- ಬೆಂಗಳೂರು ಅರಮನೆ ಜಾಗದ ಟಿಡಿಆರ್ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನು ಹೋರಾಟ ಮುಂದುವರೆಸಲಿದೆ ಎಂದು ಕಾನೂನು ಸಚಿವ ಹೆಚ್ .ಕೆ.ಪಾಟೀಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಡಿಆರ್ಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಕೈಗೆತ್ತಿಕೊಂಡಿದೆ ಎಂದರು.
ಇಲ್ಲಿಯವರೆಗೆ ನಮಗೆ ಹಿನ್ನಡೆಯಾಗಿತ್ತು. ನ್ಯಾಯಾಲಯದಲ್ಲಿ ನಮ್ಮ ವಾದವನ್ನು ನಾವು ಮಾಡುತ್ತೇವೆ. ಇಲ್ಲಿಯವರೆಗೆ ನಾಲ್ಕು ಆದೇಶಗಳು ಬಂದಿವೆ. ಇದೆಲ್ಲವನ್ನು ಮತ್ತೆ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಅರಮನೆ ಮೈದನಾನಕ್ಕೆ ಸಂಬಂಧಿಸಿದಂತೆ 3400 ಕೋಟಿ ರೂ. ಟಿಡಿಆರ್ ನೀಡುವ ಸುಪ್ರೀಂ ಕೋರ್ಟಿನ ಸಲಹೆಗೆ ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ.
ಈ ವಿಚಾರದ ವಿಚಾರಣೆ ನಡೆಯುತ್ತಲೇ ಇದೆ. 15 ಎಕರೆಗೆ 3400 ಕೋಟಿ ರೂ. ಕೊಡುವುದು ಸರಿಯಲ್ಲ, ಇದು ಅವೈಜ್ಞಾನಿಕ ಬೆಲೆ ಇದ್ದಂತೆ. ಒಮ್ಮೆ ಈ ರೀತಿ ಕೊಟ್ಟರೆ ಬೇರೆಯದಕ್ಕೂ ಇದು ಅನ್ವಯವಾಗುತ್ತದೆ. ಅರಮನೆಯ 400 ಎಕರೆ ಭೂಮಿಯನ್ನು ಕಾನೂನು ಪ್ರಕಾರವೇ ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು.
11 ಕೋಟಿ ರೂ.ಗಳನ್ನು ಅವತ್ತಿನ ಕಾಲದಲ್ಲೇ ನೀಡಲಾಗಿದೆ. ಇದನ್ನು ವಿರೋಧಿಸಿ ಅರಮನೆಯವರು ಕೋರ್ಟ್ಗೆ ಹೋಗಿದ್ದರು. ಈ ವಿಚಾರದಲ್ಲಿ ಯಾವುದೇ ತಡೆಯಾಜ್ಞೆ ಇರಲಿಲ್ಲ. ಕಳೆದ 28 ವರ್ಷದಿಂದ ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಾಗಿದೆ. ನಾಲೈದು ದಿನದ ಹಿಂದೆ ಸುಪ್ರೀಂ ಕೋರ್ಟಿನ ಪೀಠ 3400 ಕೋಟಿ ರೂ. ಕೊಡುವಂತೆ ನಿರ್ಣಯ ನೀಡಿದೆ.
ನಾವು ಸುಪ್ರೀಂ ಕೋರ್ಟಿಗೆ ಮನವರಿಕೆ ಪ್ರಯತ್ನ ಮಾಡಿದ್ದೆವು. ಇದು ಮೊತ್ತ ತುಂಬಾ ದುಬಾರಿಯಾಗಿದೆ. ಇದು ನಮ್ಮ ಆಸ್ತಿಯಾಗಿರುವುದರಿಂದ ಟಿಡಿಆರ್ ಬರಲ್ಲ. ಆದರೂ ಟಿಡಿಆರ್ ಕೊಡಬೇಕು ಎಂದು ನ್ಯಾಯಾಲಯ ಹೇಳಿದ್ದು, ನಮ್ಮ ಮನವಿಯನ್ನ ನ್ಯಾಯಾಲಯ ತಿರಸ್ಕಾರ ಮಾಡಿತ್ತು. ನಾವು ಈ ಬಗ್ಗೆ ಕಾನೂನನ್ನು ಜಾರಿಗೆ ತಂದಿದ್ದೆವು. ನಮಗೆ ಜಾಗವೇ ಬೇಡವೆಂದು ಹೇಳಿದ್ದವು. ಆದರೂ ಸುಪ್ರೀಂ ಕೋರ್ಟ್ ನಮ್ಮ ಮನವಿ ಪರಿಗಣಿಸದೇ ನೀವು ಕೊಡಲೇಬೇಕೆಂದು ವಿಭಾಗೀಯ ಪೀಠ ಆದೇಶ ನೀಡಿತ್ತು ಎಂದು ಅವರು ವಿವರಿಸಿದರು.
ಮುಸ್ಲಿಂ ಮೀಸಲಾತಿ ವಿಧೇಯಕ ರಾಜ್ಯಪಾಲರಿಂದ ವಾಪಸ್ ಬಂದಿದೆ ಎಂಬುದನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಇದರ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಹೆಜ್ .ಕೆ.ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದರು.