ಬೆಂಗಳೂರು,ಜೂ.1– ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಖುದ್ದು ಕಾಂಗ್ರೆಸ್ ಶಾಸಕರುಗಳೇ ಆಕ್ಷೇಪ ವ್ಯಕ್ತಪಡಿಸಿದ್ದು ಪ್ರಮುಖವಾಗಿ ಯೋಜನೆಯಿಂದ ಬಾಧಿತವಾಗುವ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಬಹಿರಂಗ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರಿಗೆ, ಯಾರೂ ಹೆದರಿಕೊಳ್ಳುವುದಿಲ್ಲ. ಯಾರಿಗೆ ಯಾರೂ ಊಟ, ಬಟ್ಟೆ ಕೊಡುವುದಿಲ್ಲ. ತಾವು ಪ್ರತಿನಿಧಿಸುವ ಕ್ಷೇತ್ರಗಳ ಹಿತರಕ್ಷಣೆ ಮುಖ್ಯವಾಗಿರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ಹೋರಾಟ ಮಾಡುತ್ತಿ ರುವ ರೈತರ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಪ್ರತಿಕ್ರಿ ಯಿಸಲು ನಿರಾಕರಿಸಿದ ಶಾಸಕರು ನಾನು ನಿನ್ನೆ ಆಸ್ಪತ್ರೆ ಯಲ್ಲಿದ್ದೆ. ವಿಚಾರ ಗೊತ್ತಿಲ್ಲ. ಮಾಹಿತಿ ಪಡೆದು ಚರ್ಚೆ ಮಾಡುತ್ತೇನೆ ಎಂದರು. ತಾಂತ್ರಿಕ ಸಮಿತಿ ಮುಂದೆ ಈಗಾಗಲೇ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ.
ಬುಗುಡನಹಳ್ಳಿಯಿಂದ ಮುಂದಕ್ಕೆ ನಾಲೆಯನ್ನು ವಿಸ್ತರಣೆ ಮಾಡಿಕೊಂಡು ಹೋದರೆ ಇಷ್ಟೆಲ್ಲಾ ರಗಳೆಯೇ ಇರುವುದಿಲ್ಲ. ಗೊರೂರು ಅಣೆಕಟ್ಟಿನಿಂದ ಹೇಮಾವತಿ ನೀರು ಇಲ್ಲಿಯವರೆಗೂ ಹರಿದುಬರುತ್ತದೆ. ಇಲ್ಲಿಂದ ಕುಣಿಗಲ್ಗೆ ಹತ್ತು ಕಿ.ಮೀ. ದೂರವಿದ್ದು, ಅಲ್ಲಿಗೆ ನೀರು ಹರಿಯುವುದಿಲ್ಲ. ಅನಗತ್ಯವಾಗಿ ಹಠ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ನಮದೇ ಪಕ್ಷದ ಶಾಸಕರಾದ ಕುಣಿಗಲ್ನ ಶಾಸಕ ಎಚ್.ಡಿ.ರಂಗನಾಥ್, ಮಾಗಡಿ ಕ್ಷೇತ್ರದ ಎಚ್.ಸಿ. ಬಾಲಕೃಷ್ಣ ಅವರ ಜೊತೆ ಚರ್ಚೆ ಮಾಡುತ್ತೇನೆ. ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಷಯ ತಿಳಿಸಬೇಕು.ಅನಂತರ ಪ್ರತಿಭಟನೆಯಲ್ಲಿ ಭಾಗವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಯೋಜನೆಯ ಬಗ್ಗೆ ಈಗಾಗಲೇ ನಾನು ಸಂಬಂಧಪಟ್ಟ ಎಂಜಿನಿಯರ್ಗಳಿಗೆ ವಿಷಯ ತಿಳಿಸಿದ್ದೇನೆ. ಆದರೂ ಏಕೆ ಕಾಮಗಾರಿ ಮುಂದುವರೆಸಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ಮನೆಗೆ ಬಂದಿದ್ದ ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರೊಂದಿಗೂ ಮಾತನಾಡಿದ್ದೇನೆ. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಏಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದೆ.
ಆದರೂ ನನ್ನ ಮಾತು ಕೇಳುತ್ತಿಲ್ಲ. ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಆಗಬೇಕೆಂದು ಹಠ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒಂದು ಪಕ್ಷದ ಚೌಕಟ್ಟಿನಲ್ಲಿರುವುದರಿಂದಾಗಿ ಏಕಾಏಕಿ ಪ್ರತಿಭಟನೆಯಲ್ಲಿ ಭಾಗವಹಿಸಲಾಗುವುದಿಲ್ಲ. ಇದೆಲ್ಲಾ ಆಂತರಿಕ ವಿಚಾರ. ಮೊದಲು ನಾನು ನಮ ಪಕ್ಷದಲ್ಲಿ ಮಾತನಾಡುತ್ತೇನೆ. ರೈತರ ಆಕ್ರೋಶ ಸಹಜವಾಗಿದೆ. ಅದಕ್ಕೆ ನಾನು ಆಕ್ಷೇಪಿಸುವುದಿಲ್ಲ ಎಂದರು.