ಬೆಂಗಳೂರು, ಜೂ. 2- ಸ್ಕೂಟರ್ಗೆ ಆಟೋತಾಗಿತ್ತೆಂದು ಆಟೋಚಾಲಕನಿಗೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ ಬಿಹಾರ ಮೂಲದ ಯುವತಿ ತಪ್ಪು ಒಪ್ಪಿಕೊಂಡು ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ.
ಬೆಳ್ಳಂದೂರು ವೃತ್ತದಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕರಿಂದ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಹಾಗೂ ಬೆಳ್ಳಂದೂರು ಪೊಲೀಸರು ನೋಟೀಸ್ ನೀಡಿದ ಹಿನ್ನಲೆಯಲ್ಲಿ ಠಾಣೆಗೆ ಬಂದ ಯುವತಿ ಮತ್ತು ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮಿಸಿ ತಪ್ಪಾಯಿತು ಎಂದು ಬೇಡಿಕೊಂಡಿದ್ದಾರೆ.
ಬಹಳ ವರ್ಷದಿಂದ ಬೆಂಗಳೂರಿನಲ್ಲೇ ಇದ್ದೇವೆ, ನಮಗೆ ಇಲ್ಲಿನ ಜನರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಕನ್ನಡಿಗರ ಬಗ್ಗೆ ಗೌರವವಿದೆ ಎಂದು ದಂಪತಿ ಹೇಳಿದ್ದಾರೆ. ಗರ್ಭಿಣಿಯಾಗಿರುವ ಈ ಯುವತಿ ಆಸ್ಪತ್ರೆಗೆ ಹೋಗಿ ವಾಪಾಸ್ ಬರುವಾಗ ಈ ಘಟನೆ ನಡೆದಿದೆ. ನನ್ನ ಗಾಡಿಗೆ ಆಟೋ ಬಡಿದ ಕಾರಣ ಕೋಪದಲ್ಲಿ ಚಪ್ಪಲಿಯಿಂದ ಹೊಡೆದಿದ್ದೇನೆಂದು ತಪ್ಪು ಒಪ್ಪಿಕೊಂಡ ಹಿನ್ನಲೆಯಲ್ಲಿ ಠಾಣೆ ಜಾಮೀನಿನ ಮೇಲೆ ಯುವತಿಯನ್ನು ಬಿಟ್ಟು ಕಳುಹಿಸಲಾಗಿದೆ.
ಆದರೆ, ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿರುವುದರಿಂದ ನನಗೆ ತುಂಬಾ ಬೇಜಾರಾಗಿದೆ ಯಾವುದೇ ಕಾರಣಕ್ಕೂ ದೂರು ವಾಪಸ್ ಪಡೆಯುವುದಿಲ್ಲ ಎಂದು ಆಟೋ ಚಾಲಕ ಲೋಕೇಶ್ ಹೇಳಿದ್ದಾರೆ.
ಯುವತಿ ಪಶ್ಚಾತಾಪ ಪಟ್ಟು ಹೇಳಿಕೆ ನೀಡಿದ್ದಾರೆ. ಆದರೆ ಈ ಘಟನೆಯಿಂದ ನಾನು ಎರಡು ದಿನ ಅನುಭವಿಸಿದ ಯಾತನೆ ಯಾರಿಗೂ ಬೇಡ. ಯಾರಿಗೂ ಮುಖ ತೋರಿಸಲು ಆಗಲಿಲ್ಲ, ಯಾವುದೇ ಕಾರಣಕ್ಕೂ ಪ್ರಕರಣದಿಂದ ಹಿಂದೆ ಸರಿಯಲ್ಲ ಎಂದು ಆಟೋ ಚಾಲಕ ಲೋಕೇಶ್ ತಿಳಿಸಿದ್ದಾರೆ.