ಬೆಂಗಳೂರು,ಜೂ.3- ಸರಣಿ ಕೊಲೆಗಳ ಮೂಲಕ ಕೋಮು ಸಂಘರ್ಷದ ಕುಲುಮೆಯಾಗಿದ್ದ ಕರಾವಳಿಯಲ್ಲೀಗ ಗಡಿಪಾರು ಪ್ರಕ್ರಿಯೆಗಳು ಭಾರೀ ಸದ್ದು ಮಾಡಿದೆ. ಕೋಮು ಹಾಗೂ ಮಧ್ಯವಾದವನ್ನು ಹತ್ತಿಕ್ಕಲು ಜಿಲ್ಲೆಯ ಪೊಲೀಸರು ರಾತ್ರೋರಾತ್ರಿ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರ ಮನೆಗಳಿಗೆ ನುಗ್ಗಿ ಜಿಪಿಎಸ್ ಲೊಕೇಶನ್ ಟ್ರಾಕರ್ ಪಡೆಯಲಾಗುತ್ತಿದ್ದು, ಅರ್ಧರಾತ್ರಿಯಲ್ಲಿ ಪೊಲೀಸ್ ಅಧಿಕಾರಿಗಳು ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಆರೋಪಿಗಳಂತೆ ನಿಲ್ಲಿಸಿ ಫೋಟೊ ತೆಗೆಯುತ್ತಿದ್ದಾರೆ.
ಈವರೆಗೂ ಹಿಂದುತ್ವದ ರಕ್ಷಣೆಗಾಗಿ ಜೀವನ ಮುಡುಪಾಗಿಟ್ಟು ಹೋರಾಟಕ್ಕಿಳಿದಿದ್ದ ಕಾರ್ಯಕರ್ತರಿಗೆ ಜಿಲ್ಲಾಡಳಿತದ ಈ ನಡವಳಿಕೆ ಆತಂಕ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರುಣ್ ಪುತ್ತಿಲ ಸೇರಿದಂತೆ 36 ಮಂದಿಯನ್ನು ಗಡಿಪಾರು ಮಾಡಲು ನೊಟೀಸ್ ನೀಡಲಾಗಿದೆ. ಸಂಘ ಪರಿವಾರದ ಪ್ರಮುಖ ನಾಯಕ ಪ್ರಭಾಕರ್ ಭಟ್ ಸೇರಿದಂತೆ ಹಲವರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಯಾವಾಗ, ಯಾರನ್ನು, ಯಾವ ರೀತಿ ಬಂಧಿಸಲಾಗುವುದೊ ಎಂಬ ಆತಂಕ ಸೃಷ್ಟಿಯಾಗಿದೆ. ಗಡಿಪಾರಿಗೆ ಪಟ್ಟಿ ಮಾಡಲಾದವರ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಘಟನೆಗಳ ಹೆಸರನ್ನು ಸೇರಿಸಲಾಗಿದೆ. ರಾಜ್ಯದಲ್ಲಿ ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ ಪ್ರಮುಖ ಪ್ರವಾಸಿ ತಾಣ. ಬಂಡವಾಳ ಹೂಡಿಕೆಗೆ ಪ್ರಸಕ್ತವಾದ ವಲಯವಾಗಿತ್ತು. ಕೋಮು ಸಂಘರ್ಷದಿಂದಾಗಿ ಅಲ್ಲಿ ವಾತಾವರಣ ಹದಗೆಟ್ಟಿದ್ದು, ಇತ್ತೀಚೆಗೆ ಸರಣಿ ಕೊಲೆಗಳು ಪದೇಪದೇ ನಡೆಯುತ್ತಿವೆ. ಕರಾವಳಿಯಲ್ಲಿ ಕೋಮುದ್ದೇಷವನ್ನು ಹತ್ತಿಕ್ಕಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರ ನಾನಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಈಗಾಗಲೇ ಕೋಮು ಹಿಂಸೆ ನಿಗ್ರಹಪಡೆ ರಚನೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪೊಲೀಸರು ಮಾಕ್ ಡ್ರಿಲ್ ಮೂಲಕ ಆರೋಪಿಗಳಲ್ಲಿ ಭಯ ಹುಟ್ಟಿಸಿ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.ಒಂದಷ್ಟು ಮಂದಿ ನಾಯಕರು ಪ್ರಚೋದನಾಕಾರಿ ಭಾಷಣಗಳ ಮೂಲಕ ಶಾಂತಿ ಭಂಗ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಗಡಿಪಾರಿನ ಅಸ್ತ್ರವನ್ನು ಬಳಸಲಾಗಿದೆ. ಅರುಣ್ ಪುತ್ತಿಲ ಅವರನ್ನು ಕಲಬುರಗಿಗೆ ಗಡಿಪಾರು ಮಾಡಲು ನೋಟೀಸ್ ನೀಡಿದ್ದು, ಜೂ. 6 ರಂದು ವಿಚಾರಣೆಗೆ ಸಮಯ ನಿಗದಿಪಡಿಸಲಾಗಿದೆ.
ಜಿಲ್ಲಾಡಳಿತದ ಈ ನಡವಳಿಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಕಾರ್ಯಕರ್ತರು ಹಾಗೂ ಮುಖಂಡರನ್ನು ಗುರಿಯಾಗಿಸಿ ಕಾರ್ಯಾಚರಣೆಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಅದರಲ್ಲೂ ಅಬ್ದುಲ್ ರಹೀಂ ಹತ್ಯೆ ಬಳಿಕ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ತುಷ್ಠಿಕರಣದ ಆರೋಪ ಕೇಳಿಬಂದಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಸರ್ಕಾರ ಯಾರೇ ತಪ್ಪು ಮಾಡಿದರೂ ಸಹಿಸುವುದಿಲ್ಲ, ಅವರು ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವುದಾಗಿ ತಿಳಿಸಿದರು.