Saturday, June 7, 2025
Homeರಾಜ್ಯ18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದ ರಾಯಲ್ ಚಾಂಪಿಯನ್ಸ್‌ಗೆ ತಂಡಕ್ಕೆ ಬೆಂಗಳೂರಲ್ಲಿ ಅದ್ದೂರಿ ಸ್ವಾಗತ

18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದ ರಾಯಲ್ ಚಾಂಪಿಯನ್ಸ್‌ಗೆ ತಂಡಕ್ಕೆ ಬೆಂಗಳೂರಲ್ಲಿ ಅದ್ದೂರಿ ಸ್ವಾಗತ

Royal Champions, who won the IPL cup after 18 years, receive a grand welcome in Bengaluru

ಬೆಂಗಳೂರು, ಜೂ.4 – ಟಾಟಾ ಐಪಿಎಲ್-2025 ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಉದ್ಯಾನನಗರಿಗೆ ಆಗಮಿಸಿದ್ದು, ಅಭಿಮಾನಿಗಳ ಸಾಗರವೇ ಅದ್ಧೂರಿ ಸ್ವಾಗತ ನೀಡಿದೆ. ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ವಿರಾಟ್ ಕೊಹ್ಲಿ ಬಳಗವನ್ನು ಸಾಂಪ್ರದಾಯಿಕ ಮೈಸೂರು ಪೇಟ, ಮಲ್ಲಿಗೆ ಹಾರ ಹಾಕಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.

ನಂತರ ಅಲ್ಲಿಂದ ತೆರಳುವ ಮಾರ್ಗದಲ್ಲಿ ನೆರೆದಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಆರ್‌ಸಿಬಿ…. ಆರ್‌ಸಿಬಿ… ಎಂದು ಕೂಗಿದರು. ರಾತ್ರಿಯಿಡೀ ಕ್ರಿಕೆಟ್ ಪ್ರಿಯರು ತಮ್ಮ ನೆಚ್ಚಿನ ಆಟಗಾರರಿಗೆ ಜಯಘೋಷಗಳನ್ನು ಕೂಗಿ ಕಪ್ ನಮ್ಮದೇ ಎಂದು ಘೋಷಣೆ ಕೂಗಿ ಸಿಹಿ ಹಂಚಿ ದೊಡ್ಡಮಟ್ಟದಲ್ಲಿ ಖುಷಿಪಟ್ಟಿದ್ದಾರೆ.

ಇನ್ನು ಪ್ರತ್ಯಕ್ಷವಾಗಿ ಆರ್‌ಸಿಬಿ ಆಟಗಾರರ ತಂಡವನ್ನು ಕಂಡು ಪುಳಕಿತರಾದ ಜನಸಮೂಹ ಪುಷ್ಪ ಎರಚಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಸತತ 18 ವರ್ಷಗಳ ಕಾಲ ನಮ್ಮ ಜತೆ ಇದ್ದು, ಸದಾಕ್ಷಣ ನಮ್ಮನ್ನು ಬೆಂಬಲಿಸಿದ ಬೆಂಗಳೂರಿಗೆ ನನ್ನ ತನುಮನ ಎಲ್ಲವೂ ಸಮರ್ಪಿತ ಎಂದು ಕಿಂಗ್ ವಿರಾಟ್ ಕೊಹ್ಲಿ ಅವರ ಭಾವನಾತ್ಮಕ ಮಾತುಗಳು ಕ್ರಿಕೆಟ್ ಪ್ರಿಯರ ಮನತಟ್ಟಿದೆ. ವಿಮಾನ ನಿಲ್ದಾಣದಲ್ಲೇ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟನಂತರ ಅವರು ನೇರವಾಗಿ ವೆಸ್ಟ್‌ ಎಂಡ್ ಹೊಟೇಲ್‌ಗೆ ಆಗಮಿಸಿ ಅಲ್ಪಕಾಲ ವಿಶ್ರಾಂತಿ ಪಡೆದ ನಂತರ ಸಂವಿಧಾನದ ದೇಗುಲ ವಿಧಾನಸೌಧಕ್ಕೆ ಆಗಮಿಸಿ ರಾಜ್ಯ ಸರ್ಕಾರದಿಂದ ಗೌರವ ಸ್ವೀಕರಿಸಿದ ಆಟಗಾರರು ಭಾವಪರವಶರಾದರು.

ಕನ್ನಡ ನಾಡಿನ ಅಭಿಮಾನಕ್ಕೆ ನಾವು ಚಿರಋಣಿಗಳು. ನಮ್ಮ ಇಡೀ ಯೌವನವನ್ನು ಬೆಂಗಳೂರು ಆರ್‌ಸಿಬಿಗೆ ಹರಿಸಿದ್ದೇನೆ. ನನ್ನ ಪ್ರತಿ ಹಂತದಲ್ಲೂ ನನ್ನ ಕೈ ಹಿಡಿದು ಸಲಹಿದ ನನ್ನ ಧರ್ಮಪತ್ನಿ ಅನುಷ್ಕಾ ಶರ್ಮ ಕೂಡ ಬೆಂಗಳೂರಿನವರು. ನನಗೆ ಬೆಂಗಳೂರಿನ ಬಗ್ಗೆ ಅಪಾರ ಪ್ರೀತಿ-ಗೌರವ ಇದೆ ಎಂದು ಕೊಹ್ಲಿ ಹೇಳಿದ್ದಾರೆ.

ಆರ್‌ಸಿಬಿ ಆಟಗಾರರಿಗೆ ಸಚಿವಾಲಯದ ಸಿಬ್ಬಂದಿ ಕೂಡ ಅಭಿನಂದನೆ ಸಲ್ಲಿಸಿದ್ದು, ಅವರೊಂದಿಗೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ನಂತರ ವಿಧಾನಸೌಧದ ಮುಂಭಾಗ ಭವ್ಯ ವೇದಿಕೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಆಟಗಾರರನ್ನು ರಾಜ್ಯ ಸರ್ಕಾರದ ವತಿಯಿಂದ ಅಭಿನಂದಿಸಲಾಯಿತು. ರಾಜ್ಯಪಾಲ ಥಾವರ್‌ಚಂದ್ ಗೆಹೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವಾರು ಸಚಿವರು, ಶಾಸಕರು ಪಾಲ್ಗೊಂಡಿದ್ದರು.

ನಂತರ ನಡೆಯಬೇಕಿದ್ದ ಪರೇಡ್ ಅನ್ನು ರದ್ದುಗೊಳಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆಗೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿಗಳು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ವಿಶೇಷ ವಾಸ್‌ಗಳನ್ನು ಕೂಡ ನೀಡಲಾಗಿದ್ದು, ಆಹ್ವಾನಿತರಿಗೆ ಮಾತ್ರ ಕ್ರೀಡಾಂಗಣದೊಳಗೆ ಪ್ರವೇಶ ನೀಡಲಾಗುತ್ತಿದೆ. ಆದರೂ ಸಾವಿರಾರು ಜನರು ಮೈದಾನದ ಸುತ್ತ ಜಮಾಯಿಸಿ ನೆಚ್ಚಿನ ಆಟಗಾರರನ್ನು ಕಣ್ಣುಂಬಿಕೊಳ್ಳಲು ಕಾತರರಾಗಿದ್ದರು.

ಅನ್ನದಾನ- ಸಿಹಿ ಹಂಚಿಕೆ:
ಆರ್‌ಸಿಬಿ ಗೆಲ್ಲುತ್ತಿದ್ದಂತೆ ಹಲವೆಡೆ ಹೊಟೇಲ್ಗಳು, ಪಬ್ ಗಳಲ್ಲಿ ಉಚಿತವಾಗಿ ಆಹಾರ ಮತ್ತು ಪಾನೀಯಗಳನ್ನು ನೀಡಲಾಗುತ್ತಿದೆ. ಇನ್ನೂ ಕೆಲವೆಡೆ ಹೋಳಿಗೆ, ಲಾಡು ಕೂಡ ಹಂಚಲಾಗುತ್ತಿದೆ. ಇದಲ್ಲದೆ ರಾಜಾಜಿನಗರ, ಇಂದಿರಾನಗರ, ಬಸವೇಶ್ವರನಗರ, ನಾಗರಬಾವಿ, ರಾಜರಾಜೇಶ್ವರಿನಗರ, ಸದಾಶಿವನಗರ, ಕೋರಮಂಗಲ, ಎಚ್‌.ಎಸ್‌ಆರ್ ಲೇಔಟ್, ಹೆಬ್ಬಾಳ, ಕೆಆರ್ ಪುರಂ, ಮಹದೇವಪುರ ಸೇರಿದಂತೆ ನಗರದ ವಿವಿಧೆಡೆ ಬಿರಿಯಾನಿ ಕೂಡ ಉಚಿತವಾಗಿ ವಿತರಿಸಲಾಗುತ್ತಿದೆ.

ದೇವಾಲಯಗಳಲ್ಲಿ ಪೂಜೆ:
ಆರ್‌ಸಿಬಿ ಗೆಲ್ಲುತ್ತಿದ್ದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಹರಕೆ ಕೂಡ ತೀರಿಸಿದ್ದಾರೆ. ತೆಂಗಿನಕಾಯಿ ಒಡೆದು ವಿಶೇಷ ಹೋಮ-ಹವನಗಳನ್ನು ಕೂಡ ಮಾಡಿದ್ದಾರೆ.

RELATED ARTICLES

Latest News