Saturday, June 7, 2025
Homeರಾಜ್ಯಹೊಂದಾಣಿಕೆ ಕೊರತೆ, ಸ್ವಪ್ರತಿಷ್ಠೆ ಪೈಪೋಟಿಗೆ 11 ಅಮಾಯಕ ಜೀವಗಳು ಬಲಿ

ಹೊಂದಾಣಿಕೆ ಕೊರತೆ, ಸ್ವಪ್ರತಿಷ್ಠೆ ಪೈಪೋಟಿಗೆ 11 ಅಮಾಯಕ ಜೀವಗಳು ಬಲಿ

Lack of coordination, rivalry for prestige claimed 11 innocent lives

ಬೆಂಗಳೂರು,ಜೂ.5- ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವವರ ನಡುವೆ ಹೊಂದಾಣಿಕೆಯ ಕೊರತೆ, ಪ್ರಚಾರದ ತುಡಿತ ಹಾಗೂ ಅಸೀಮ ನಿರ್ಲಕ್ಷ್ಯ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಕಾರಣವಾಗಿರುವ ಅಂಶಗಳಲ್ಲಿ ಪ್ರಮುಖವಾಗಿವೆ. ಆರ್‌ಸಿಬಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪಂದ್ಯಾವಳಿ ಗೆಲ್ಲುತ್ತಿದ್ದಂತೆ ರಾಯಲ್‌ ಚಾಲೆಂಜರ್‌ರ‍ಸ ಸಂಭ್ರಮದ ವಿಜಯ ಯಾತ್ರೆ ಯನ್ನು ಘೋಷಿಸಿತು. ಮಧ್ಯರಾತ್ರಿ ರಾಯಲ್‌ ಚಾಲೆಂಜರ್‌ರ‍ಸ ಪ್ರಕಟಣೆ ಸರ್ಕಾರಕ್ಕೆ ಪೀಕಲಾಟ ತಂದಿತ್ತು.

ಐಪಿಎಲ್‌ ಪಂದ್ಯಾವಳಿ ಅದರಲ್ಲೂ ಕಪ್‌ ನಮ್ದೇ ಎಂಬ ಘೋಷಣೆ ಜನರಲ್ಲಿ ಸಾಮೂಹಿಕ ಸನ್ನಿಯಾಗಿದ್ದವು. ಸರ್ಕಾರ ಆರ್‌ಸಿಬಿ ಘೋಷಿಸಿದ ವಿಜಯಯಾತ್ರೆಯನ್ನು ನಿರಾಕರಿಸಲೂ ಆಗದೇ, ಬೆಂಬಲಿಸಲೂ ಆಗದೇ ಮಧ್ಯಾಹ್ನದವರೆಗೂ ಪೀಕಲಾಟಕ್ಕೆ ಸಿಲುಕಿತ್ತು. ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌,ಈ ವಿಜಯೋತ್ಸವ ಹಾಗೂ ಸಂಭ್ರಮಾಚರಣೆಯನ್ನು ಎಲ್ಲಿ,ಹೇಗೆ ಮಾಡಬೇಕೆಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆರ್‌ಸಿಬಿಯವರೇನೋ ಘೋಷಣೆ ಮಾಡಿದ್ದಾರೆ. ಆದರೆ ಭದ್ರತೆ ವ್ಯವಸ್ಥೆ ಮಾಡಬೇಕಿರುವುದು ನಮ ಪೊಲೀಸರೇ ಎಂದು ಹೇಳಿದ್ದರು.

ಗೃಹಸಚಿವ ಪರಮೇಶ್ವರ್‌ ಕೂಡ ಕಾರ್ಯಕ್ರಮ ಎಲ್ಲಿ, ಏನು, ಸ್ವರೂಪಗಳ ಬಗ್ಗೆ ಇನ್ನೂ ನಿರ್ಧಾರವಾಗಬೇಕು. ಕರ್ನಾಟಕ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿಯವರು ತಮ ಜೊತೆ ಚರ್ಚೆ ಮಾಡಿ ಕೆಲ ಸಲಹೆ ನೀಡಿದ್ದರು. ಆದರೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಟಗಾರರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಿಸಿದರು.

ಗೃಹಸಚಿವರು ಹಾಗೂ ಬೆಂಗಳೂರು ನಗರ ಪೊಲೀಸ್‌‍ ಆಯುಕ್ತರ ಜೊತೆ ಚರ್ಚೆಯನ್ನು ನಡೆಸಿದ್ದರು. ಆ ನಂತರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ವೇದಿಕೆ ನಿರ್ಮಾಣ ಹಾಗೂ ಇತರ ಸಿದ್ಧತೆಗಳು ಚಾಲುಗೊಂಡವು. ಅಭಿಮಾನಿಗಳಿಗೆ ಕಾರ್ಯಕ್ರಮ ಎಲ್ಲಿ ಎಂಬ ವಿಚಾರಗಳಲ್ಲಿ ಸಾಕಷ್ಟು ಗೊಂದಲಗಳಿದ್ದವು. ಅದಕ್ಕೆ ಯಾರಿಂದಲೂ ಸ್ಪಷ್ಟವಾದ ಸ್ಪಷ್ಟನೆ ಸಿಗಲಿಲ್ಲ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಯಲಿದೆ.

ವಿಜಯ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಪದೇಪದೇ ಪ್ರಕಟಿಸಲಾಗುತ್ತಿತ್ತು. ಐಪಿಎಲ್‌ ಕ್ರಿಕೆಟ್‌ ಎಂಬುದು ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿತ್ತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಟಗಾರರನ್ನು ಕರೆಸಿ ಅಭಿನಂದಿಸುವ ಜರೂರತ್‌ ಏನಿತ್ತು ಎಂಬುದು ಹಲವರ ಪ್ರಶ್ನೆಗಳಾಗಿದ್ದವು. ಸಂಭ್ರಮದ ಸಮೂಹ ಸನ್ನಿಯಲ್ಲಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿದ್ದವು.

ಸರ್ಕಾರದವರು ಇದೊಂದು ಸರ್ಕಾರಿ ಕಾರ್ಯಕ್ರಮ ಎಂಬಂತೆ ಸಂಭ್ರಮಿಸಿ ತಾವೇ ಮುಂದೆ ನಿಂತು ಕಾರ್ಯಕ್ರಮ ಆಯೋಜನೆ ಮಾಡಿದ್ದು ಅನಗತ್ಯ ಎನ್ನಿಸಿತ್ತು. ಕರ್ನಾಟಕ ಕ್ರಿಕೆಟ್‌ ಮಂಡಳಿ ಹಾಗೂ ಆರ್‌ಸಿಬಿಯ ಉತ್ಸಾಹಕ್ಕೆ ತಿಳಿಹೇಳುವ ವ್ಯವಧಾನ ಸರ್ಕಾರಕ್ಕೂ ಇರಲಿಲ್ಲ. ಎಲ್ಲದಕ್ಕೂ ತಾವೇ ಮುಂದಾಗಿ ಕ್ರಿಕೆಟ್‌ ವಿಜಯವವನ್ನು ಸಂಭ್ರಮಿಸಲು ಟೊಂಕ ಕಟ್ಟಿ ನಿಂತಿದ್ದರು.

ಬೆಳಿಗ್ಗೆ 11 ಗಂಟೆಯಿಂದಲೇ ವಿಧಾನಸೌಧದ ಮುಂಭಾಗ ಜನ ಜಮಾವಣೆಗೊಳ್ಳಲಾರಂಭಿಸಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನ 12 ಗಂಟೆಯೊಳಗೆ ವಿಧಾನಸೌಧದ ಮುಂಭಾಗದ ರಸ್ತೆಯಲ್ಲೇ ದ್ವಿಚಕ್ರ ವಾಹನಗಳ ಅನಧಿಕೃತ ಪಾರ್ಕಿಂಗ್‌ ಆರಂಭವಾಯಿತು. ಜನರನ್ನು ಆರಂಭದಲ್ಲೇ ನಿಯಂತ್ರಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯಲೇ ಇಲ್ಲ. ಸಮೂಹ ಸಂಹಿತೆ ಮಾಧ್ಯಮಗಳ ಪ್ರಚಾರವೂ ಮತ್ತಷ್ಟು ಇಂಬು ನೀಡಿತ್ತು. ಜನರ ಸಂಭ್ರಮಕ್ಕೆ ಅಡ್ಡಿಪಡಿಸಿದರೆ ನಿಷ್ಠುರವಾಗಬೇಕಾಗಬಹುದು ಎಂಬ ಗೊಂದಲದಲ್ಲೇ ಸರ್ಕಾರ ಪರಿಸ್ಥಿತಿ ಹೋದಂತೆಲ್ಲಾ ಕೈಬಿಟ್ಟು ಮೂಕಪ್ರೇಕ್ಷಕನಂತೆ ವರ್ತಿಸಿತ್ತು.

ವಿಧಾನಸೌಧದ ಮುಂದೆಯೂ ಸರಿಯಾದ ಬಂದೋಬಸ್ತ್‌ ಆಯೋಜಿಸದೆ ಸಮರ್ಪಕ ಪೊಲೀಸ್‌‍ ಸಿಬ್ಬಂದಿಯನ್ನೂ ನಿಯೋಜಿಸದೇ ಆರಂಭದಿಂದಲೂ ಎಡವಲಾರಂಭಿಸಿತು.
ಪರಿಸ್ಥಿತಿಯನ್ನು ಸುಧಾರಿಸುವ ಬದಲಾಗಿ ಸಿಕ್ಕಸಿಕ್ಕಲೆಲ್ಲಾ ಮಾತನಾಡುತ್ತಾ ಪ್ರಚಾರ ಪಡೆಯುವ ಉಮೇದಿನಲ್ಲಿ ಪೈಪೋಟಿ ನಡೆಸಿದರೇ ಹೊರತು ಯಾರೂ ವಾಸ್ತವ ಸಮಸ್ಯೆಗಳನ್ನು ಗುರುತಿಸುವ ಪ್ರಯತ್ನ ಮಾಡಲಿಲ್ಲ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕ್ರಿಕೆಟ್‌ ಆಟಗಾರರನ್ನು ಸನಾನಿಸಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಆಟಗಾರರು ತೆರಳುವ ವೇಳೆಯಲ್ಲೇ ತಳ್ಳಾಟ, ನೂಕಾಟಗಳಾಗಿ ಕೆಲವರ ಪರಿಸ್ಥಿತಿ ಗಂಭೀರವಾಗಿತ್ತು ಎಂದು ಹೇಳಲಾಗಿದೆ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಲಕ್ಷಾಂತರ ಸಂಖ್ಯೆಯಲ್ಲಿ ಜನ ಜಮಾವಣೆಗೊಂಡಿದ್ದಾಗಲೂ ಎಚ್ಚೆತ್ತುಕೊಂಡು ಕಾರ್ಯಕ್ರಮ ರದ್ದುಪಡಿಸುವ ಅಥವಾ ಅಭಿಮಾನಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಯಾರೂ ಪ್ರದರ್ಶಿಸಲಿಲ್ಲ.

ಪೊಲೀಸರು ಆಡಳಿತ ವ್ಯವಸ್ಥೆಯ ವೈಫಲ್ಯದ ನಡುವೆಯೂ ಅತ್ಯಂತ ಸಂಯಮದಿಂದ ವರ್ತಿಸಿದರು. ಅಭಿಮಾನಿಗಳ ಮೇಲೆ ಎಲ್ಲಿಯಾದರೂ ಲಾಠಿ ಬೀಸಿದ್ದರೆ ಮತ್ತಷ್ಟು ದುರಂತಗಳು ನಡೆದುಹೋಗುತ್ತಿದ್ದವು. ಜನ ದುಗುಡಕ್ಕೆ ಒಳಗಾಗಿ ಕಾಲ್ತುಳಿತದ ಪ್ರಕರಣಗಳು ಹೆಚ್ಚಾಗಬಹುದಿತ್ತು. ಇದಕ್ಕೆ ಅವಕಾಶ ನೀಡದಂತೆ ಪೊಲೀಸರು ಜವಾಬ್ದಾರಿಯಿಂದ ನಿರ್ವಹಿಸಿದರು. ಆದರೆ ಕ್ರಿಕೆಟ್‌ ಅನ್ನು ಆಟದ ಬದಲಾಗಿ ಲಾಭದ ದೃಷ್ಟಿಯಿಂದ ನೋಡುವ ಖಾಸಗಿ ಸಂಸ್ಥೆಗಳು ಸರ್ಕಾರದ ಪ್ರಚಾರದ ಇಡೀ ವ್ಯವಸ್ಥೆಯನ್ನು ಹದಗೆಡಿಸಿತ್ತು.

RELATED ARTICLES

Latest News