ಬೆಂಗಳೂರು, ಜೂ.6- ಆರ್ಸಿಬಿ ವಿಜಯೋತ್ಸವದ ವೇಳೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮತ್ತಿಬ್ಬರನ್ನು ಸರ್ಕಾರ ತಲೆದಂಡ ನೀಡಿದೆ. ಗುಪ್ತಚರ ವಿಭಾಗದ ಮುಖ್ಯಸ್ಥ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆಗೊಳಿಸಿದರೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರಿಗೆ ಕೊಕ್ ನೀಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಗುಪ್ತಚರ ವಿಭಾಗದ ವೈಫಲ್ಯವೇ ಪ್ರಮುಖ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ನಿಂಬಾಳ್ಯರ್ ಅವರನ್ನು ವರ್ಗಾವಣೆಗೊಳಿಸಿ ಅವರಿಗೆ ಯಾವುದೇ ಸ್ಥಾನವನ್ನು ತೋರಿಸಿಲ್ಲ.
ನಿಂಬಾರ್ಳ್ಯ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ರವಿಕುಮಾರ್ ಅವರನ್ನು ಗುಪ್ತಚರ ವಿಭಾಗದ ಮುಖ್ಯಸ್ಥರನ್ನಾಗಿ ತತ್ಕ್ಷಣದಿಂದಲೇ ಜಾರಿಯಾಗುವಂತೆ ನೇಮಕ ಮಾಡಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿಂಬಾಳ್ಯರ್ ತಲೆದಂಡಕ್ಕೆ ಸ್ವತಃ ಸಚಿವರಿಂದಲೇ ಒತ್ತಡ ಕೇಳಿಬಂದಿತ್ತು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ಕುಮಾರ್, ಡಿಸಿಪಿ ಶೇಖರ್ ಠಕ್ಕಣ್ಣನವರ್, ಎಸಿಪಿ ಬಾಲಕೃಷ್ಣ, ಇನ್ಸ್ ಪೆಕ್ಟರ್ ಗಿರೀಶ್ ಅವರನ್ನು ಅಮಾನತುಪಡಿಸಲಾಗಿತ್ತು. ಇದರ ಬೆನ್ನಲ್ಲೇ ನಿಂಬಾಳ್ಯರ್ ತಲೆದಂಡವಾಗಿದೆ.
ಗೋವಿಂದರಾಜುಗೆ ಕೊಕ್ :
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜುಗೆ ನೀಡಲಾಗಿದ್ದ ಹುದ್ದೆಯನ್ನು ಸಹ ಹಿಂಪಡೆಯಲಾಗಿದೆ. ಕಳೆದ ಬುಧವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡಬೇಕೆಂಬ ಸಲಹೆ ಕೊಟ್ಟಿದ್ದೇ ಗೋವಿಂದರಾಜು ಎಂಬ ಆರೋಪ ಕೇಳಿಬಂದಿತ್ತು.
ಸಚಿವ ಸಂಪುಟದಲ್ಲೂ ಗೋವಿಂದರಾಜು ಮೇಲೆ ಸಚಿವರು ಗರಂ ಆಗಿದ್ದರು. ಕೇವಲ ಅಧಿಕಾರಿಗಳನ್ನು ಅಮಾನತು ಮಾಡುವ ಮೊದಲು ಗೋವಿಂದರಾಜುವಿಗೆ ನೀಡಿರುವ ಸ್ಥಾನಮಾನವನ್ನು ಹಿಂಪಡೆಯಬೇಕೆಂದು ಒತ್ತಡ ಹಾಕಿದ್ದರು. ಸರ್ಕಾರದ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದ್ದುದರಿಂದ ಅವರನ್ನು ದೂರವಿರುವಂತೆ ಹಲವು ಬಾರಿ ಸಿಎಂಗೆ ಸಚಿವರು ಮತ್ತು ಶಾಸಕರು ಮನವಿ ಮಾಡಿದ್ದರು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಗೋವಿಂದರಾಜು ತಲೆದಂಡವಾಗಿದೆ.