ಬೆಂಗಳೂರು,ಜೂ.6-ಆರ್ಸಿಬಿ ವಿಜಯೋತ್ಸ ವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಹೊರಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಆಗ್ರಹಿಸಿವೆ.ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ , ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಮಾಯಕರು ಸಾವಿಗೀಡಾ ಗಿರುವ ಹೊಣೆಯನ್ನು ಸರ್ಕಾರವೇ ಹೊರಬೇಕು. ರಾಜ್ಯದ ಒಳಿತಿಗಾಗಿ ಸಿಎಂ-ಡಿಸಿಎಂ ಅವರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ಈ ದುರ್ಘಟನೆ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಅಮಾನತು ಕ್ರಮ ಕೈಗೊಂಡಿರುವುದು ಸರಿಯಲ್ಲ. ತಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಾಲ್ತುಳಿತದ ದುರಂತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಛೀಮಾರಿ ಹಾಕಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣ, ಆರ್ಸಿಬಿ, ಡಿಎನ್ಎ ಸಂಸ್ಥೆಗಳ ಮೇಲೆ ತರಾತುರಿಯಲ್ಲಿ ಎಫ್ಐಆರ್ ಹಾಕಲಾಗಿದೆ. ಅಲ್ಲದೆ ತಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಹರಕೆಯ ಕುರಿ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 30ರಿಂದ 40 ಸಾವಿರ ಕ್ರಿಕೆಟ್ ಅಭಿಮಾನಿಗಳು ಬರಬಹುದೆಂದು ಭಾವಿಸಿದ್ದೆವು. 2-3 ಲಕ್ಷದಷ್ಟು ಜನ ಬಂದಿದ್ದಾರೆ. ಆದರೆ ಗುಪ್ತಚರ ವೈಫಲ್ಯ ಎದ್ದು ಕಾಣುತ್ತಿದೆ. ಆದರೂ ಗುಪ್ತಚರ ಇಲಾಖೆಯವರನ್ನು ಸರ್ಕಾರ ಅಮಾನತು ಮಾಡಿಲ್ಲ ಎಂದು ಟೀಕಿಸಿದರು.
ಗುಪ್ತಚರ ಇಲಾಖೆಯವರನ್ನು ಅಮಾನತು ಮಾಡಿದರೆ ಮುಖ್ಯಮಂತ್ರಿಗಳ ಬುಡಕ್ಕೆ ಬರುತ್ತದೆ. ಆ ಕಾರಣಕ್ಕಾಗಿ ಅಮಾನತು ಮಾಡಿಲ್ಲ. ಆರ್ಸಿಬಿ ಐಪಿಎಲ್ ಗೆದಿದ್ದರೆ ಸರ್ಕಾರ ಏಕಿಷ್ಟು ಸಂಭ್ರಮ? ಅಮಾಯಕರ ಸಾವಿಗೆ ಯಾರು ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು, ಇದರ ನೇರ ಹೊಣೆಯನ್ನು ಸರ್ಕಾರ ಹೊರಬೇಕು. ಮುಖ್ಯಮಂತ್ರಿ ಮೊದಲ, ಉಪಮುಖ್ಯಮಂತ್ರಿ 2ನೇ ಹಾಗೂ ಗೃಹಸಚಿವರು 3ನೇ ಆರೋಪಿಯಾಗಿದ್ದಾರೆ ಎಂದು ಆಪಾದಿಸಿದರು.
ಮುಖ್ಯಮಂತ್ರಿ ಸೇರಿದಂತೆ ಈ ಮೂವರು ತಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿ-ಉಪಮುಖ್ಯಮಂತ್ರಿಯನ್ನು ಹೊರ ಹಾಕಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಲ್ತುಳಿತದ ಪ್ರಕರಣದ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಮರ್ಯಾದೆ ಇದ್ದರೆ ಪಕ್ಷ ಉಳಿಸಬೇಕು ಎಂಬುದಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಹೊರಗೆ ಹಾಕಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯಿಂದ ಈ ರೀತಿಯ ಆಡಳಿತ ನಿರೀಕ್ಷೆ ಮಾಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿದು ಏನು ಸಾಧನೆ ಮಾಡುತ್ತಾರೆ. ಸ್ವಪ್ರತಿಷ್ಠೆಯಿಂದಾಗಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಾವುನೋವು ಉಂಟಾಗಿದೆ. ಅವರ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಪೊಲೀಸರ ಸಲಹೆಯನ್ನು ತಿರಸ್ಕರಿಸಿ ಒತ್ತಡ ತಂದು ಕಾರ್ಯಕ್ರಮ ನಡೆಸಿದ ಸರ್ಕಾರವೇ ದುರಂತಕ್ಕೆ ಕಾರಣ. ಸಿಎಂ-ಡಿಸಿಎಂ ತಲೆದಂಡವಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಜೇತ ತಂಡಕ್ಕೆ ಗೌರವ ಸಲ್ಲಿಸಬೇಕು ಎಂಬುದಕ್ಕಿಂತ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮಧ್ಯಾಹ್ನ 3.10ಕ್ಕೆ ಕಾಲ್ತುಳಿತದಲ್ಲಿ ಒಬ್ಬರು ಮೃತಪಟ್ಟ ಮಾಹಿತಿ ಇದ್ದರೂ ಕಾರ್ಯಕ್ರಮ ನಡೆಸಿದ್ದಾರೆ. ಇದು ಗುಪ್ತಚರ ವೈಫಲ್ಯ. ಮಾನವೀಯತೆ ಇಲ್ಲದ ಸರ್ಕಾರ ಎಂದು ಅಂದು ನಡೆದ ಘಟನಾವಳಿಗಳನ್ನು ಎಳೆಎಳೆಯಾಗಿ ಕುಮಾರಸ್ವಾಮಿ ಬಿಡಿಸಿಟ್ಟರು.
ಸರ್ಕಾರವೇ ಅಪರಾಧಿ:
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಆರ್ಸಿಬಿ ವಿಜಯೋತ್ಸವದ ಕಾಲ್ತುಳಿತದ ಸಂದರ್ಭದಲ್ಲಿ 11 ಮಂದಿ ಮೃತಪಟ್ಟಿದ್ದು, ಸರ್ಕಾರವೇ ಇದರ ಹೊಣೆ ಹೊರಬೇಕು. ಸರ್ಕಾರವೇ ತಪ್ಪಿತಸ್ಥನಾಗಿದ್ದು, ಸರ್ಕಾರವೇ ಅಪರಾಧಿ ಎಂದು ವಾಗ್ದಾಳಿ ನಡೆಸಿದರು.
11 ಜನರ ಸಾವಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ಸಿಬಿಐ ತನಿಖೆ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ಆದರೆ ಸರ್ಕಾರ ಒಪ್ಪುವುದಿಲ್ಲ. ಮುಖ್ಯ ನ್ಯಾಯಾಧೀಶರು ಇಲ್ಲವೇ ಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಂದ ಈ ದುರಂತದ ಬಗ್ಗೆ ತನಿಖೆಯಾಗಬೇಕು ಎಂದರು.ಕತ್ತಲೆ ರಾಜ್ಯದಲ್ಲಿ ನ್ಯಾಯಕ್ಕಾಗಿ ಬೆಳಕು ಹುಡುಕಲು ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ. ಗುಪ್ತಚರ ಇಲಾಖೆ ವೈಫಲ್ಯವಿದೆ. ಮುಖ್ಯಮಂತ್ರಿಗಳೇ ಇದರ ನೇರ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.ಅಂಧ ಮುಖ್ಯಮಂತ್ರಿ ಅಂಧ ದರ್ಬಾರು, ಅಂಧ ರಾಜ್ಯ ಮಾಡಿದ್ದಾರೆ. ರಾಜ್ಯದ ಕಾನೂನನ್ನು ಕತ್ತಲೆ ಕೈಗಳಿಗೆ ನೀಡಿದ ಸರ್ಕಾರವಿದು. ಸಮಾಜವಾದಿ, ಮಜವಾದಿ ಸಿದ್ದರಾಮಯ್ಯ ಎಂದು ಟೀಕಾ ಪ್ರಹಾರ ನಡೆಸಿದರು.
ಐಪಿಎಲ್ನ್ನು ಗೆದ್ದಿದ್ದು ಆರ್ಸಿಬಿಯೇ ಆದರೂ ಫೋಟೋ ತೆಗೆಸಿಕೊಂಡಿದ್ದು ಕೆಪಿಸಿಸಿ ತಂಡ ಎಂದು ಅವರು ಲೇವಡಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಮಲ್ಲೇಶ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಹರೀಶ್ ಪೂಂಜಾ, ಮಾಜಿ ಸಂಸದ ಪ್ರತಾಪಸಿಂಹ, ವಿಧಾನಪರಿಷತ್ ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಎಚ್.ಎಂ.ರಮೇಶ್ ಗೌಡ ಉಪಸ್ಥಿತರಿದ್ದರು.